ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ: ವರಸೆ ಬದಲಿಸಿದ ಕಮಲ್ ಹಾಸನ್
ಚೆನ್ನೈ, ಮೇ 17: 'ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು, ಆತನ ಹೆಸರು ನಾಥೂರಾಮ್ ಗೋಡ್ಸೆ' ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಇದೀಗ ವರಸೆ ಬದಲಿಸಿದ್ದಾರೆ.
"ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ. ಯಾವ ಧರ್ಮದವರೂ ತಾವು ಸಂಭಾವಿತರು ಎಂದುಕೊಳ್ಳುವುದು ಬೇಡ. ಎಲ್ಲಾ ಮತಗಳಲ್ಲೂ ಉಗ್ರವಾದಿಗಳಿದ್ದರು ಎಂಬುದನ್ನು ಇತಿಹಾಸವೇ ಹೇಳುತ್ತದೆ" ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಮೊದಲ ಉಗ್ರ ಹಿಂದು: ಸತ್ಯವನ್ನೇ ಹೇಳಿದ್ದೇನೆ ಎಂದ ಕಮಲ್ ಹಾಸನ್
ಗುರುವಾರ ತಿರುಚಿಯಲ್ಲಿ ಕಮಲ್ ಹಾಸನ್ ಸಮಾವೇಶ ನಡೆಸುತ್ತಿದ್ದ ಸಂದರ್ಭದಲ್ಲಿ ಕಲ್ಲುತೂರಾಟದ ಘಟನೆ ನಡೆದಿತ್ತು. ಈ ಘಟನೆಯನ್ನು ಖಂಡಿಸಿದ ಅವರು, 'ಇತ್ತೀಚಿನ ದಿನಗಳಲ್ಲಿ ಸಭ್ಯತೆ, ಕರುಣೆ ಮರೆಯಾಗುತ್ತಿದೆ' ಎಂದರು.
ನಾಥೂರಾಮ್ ಗೋಡ್ಸೆ ಅವರ ಕುರಿತು ಅವರಾಡಿದ ಮಾತಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನನ್ನನ್ನು ಬಂಧಿಸುತ್ತಾರೆ ಎಂಬ ಭಯ ನನಗಿಲ್ಲ. ಅವರು ನನ್ನನ್ನು ಬಂಧಿಸುವುದಾದರೆ ಬಂಧಿಸಲಿ. ಹಾಗೊಮ್ಮೆ ಅವರು ಮಾಡಿದ್ದೇ ಆದರೆ ಅವರೇ ಸಂಕಷ್ಟ ಎದುರಿಸಬೇಕಾಗುತ್ತದೆ. ಇದು ಎಚ್ಚರಿಕೆಯಲ್ಲ, ಕೇವಲ ಸಲಹೆ" ಎಂದು ಕಮಲ್ ಹಾಸನ್ ಹೇಳಿದರು.
ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ, ದೂರು ದಾಖಲು
ಮೇ 13 ರಂದು ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ನಾನೊಬ್ಬ ಹೆಮ್ಮೆಯ ಭಾರತೀಯ. ಆದರೆ ನಾನೊಂದು ಮಾತು ಹೇಳುತ್ತೇನೆ. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದಿದ್ದರು.
ಈ ಹೇಳಿಕೆಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ನಂತರ ನಡೆದ ಅವರ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಚಪ್ಪಲಿ ಎಸೆದ ಘಟನೆಯೂ ವರದಿಯಾಗಿತ್ತು. ಈ ಎಲ್ಲದರ ನಡುವೆಯೂ, "ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ನಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ" ಎಂದು ಹಾಸನ್ ತಮ್ಮನ್ನು ಸಮರ್ಥಿಸಿಕೊಂಡಿದ್ದರು.