ದೇಶದಲ್ಲಿ ಕೊರೊನಾ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದ ಮದ್ರಾಸ್ ಹೈಕೋರ್ಟ್
ಚೆನ್ನೈ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಇಷ್ಟು ಆತಂಕಕಾರಿ ಮಟ್ಟದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಕಿಡಿಕಾರಿದೆ. ಅತ್ಯಂತ ಬೇಜವಾಬ್ದಾರಿಯಿಂದ ಚುನಾವಣಾ ಆಯೋಗ ವರ್ತಿಸುತ್ತಿದೆ. ಈ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳಬಹುದು ಎಂದಿದೆ.
ಮೇ 2ರಂದು ಮತ ಎಣಿಕೆ ನಡೆಸುವಾಗ ಕೊರೊನಾ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಾರಿಗೆ ಸಚಿವ, ಎಐಎಡಿಎಂಕೆ ಅಭ್ಯರ್ಥಿ ಎಂ.ಆರ್. ವಿಜಯಭಾಸ್ಕರ್ ಸಲ್ಲಿಸಿದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಪೀಠ, ದೇಶದಲ್ಲಿ ಕೊರೊನಾ ಎರಡನೇ ಅಲೆ ನಡುವೆಯೂ ಪಂಚರಾಜ್ಯಗಳಲ್ಲಿ ಚುನಾವಣಾ ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಇದೇ ಕೊರೊನಾ ಹರಡಲು ಬಹು ಮುಖ್ಯ ಕಾರಣ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.
ಎಣಿಕೆ ಕೇಂದ್ರದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಲಾಗುವುದು ಎಂದು ಆಯೋಗದ ಪರವಾಗಿ ವಕೀಲರು ಹೇಳಿಕೆ ನೀಡಿದ್ದು, "ಸಮಾವೇಶ, ಸಭೆಗಳು ನಡೆಯುವಾಗ ಎಲ್ಲಿದ್ದಿರಿ? ಎಲ್ಲಕ್ಕಿಂತ ಸಾರ್ವಜನಿಕ ಆರೋಗ್ಯವೇ ಮುಖ್ಯ ಎಂಬುದು ನಿಮಗೆ ತಿಳಿದಿಲ್ಲವೇ" ಎಂದು ಪ್ರಶ್ನಿಸಿತು.
ಪಶ್ಚಿಮ ಬಂಗಾಳದಲ್ಲಿ ರೋಡ್ಶೋ, ಬೈಕ್ ಜಾಥಾಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ
ಮತ ಎಣಿಕೆ ಕೇಂದ್ರಗಳಲ್ಲಿ ಕೊರೊನಾ ತಡೆ ಮಾರ್ಗಸೂಚಿ ಪಾಲನೆಗೆ ಏನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಶುಕ್ರವಾರದ ಒಳಗೆ ಕೋರ್ಟ್ಗೆ ತಿಳಿಸಬೇಕು. ಈ ಯೋಜನೆ ಸಿದ್ಧವಾಗದೇ ಇದ್ದರೆ ಮೇ 2ರಂದು ನಡೆಯಲಿರುವ ಮತ ಎಣಿಕೆಗೆ ತಡೆ ನೀಡಲು ಹಿಂಜರಿಯುವುದಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.