ಆಯುಧ ಹಿಡಿದು ಬಂದ ದರೋಡೆಕೋರರನ್ನು ಬೆದರಿಸಿ ಸಾಹಸ ಮೆರೆದ ವೃದ್ಧ ದಂಪತಿ: ವೈರಲ್ ವಿಡಿಯೋ
Recommended Video
ಮದುರೆ, ಆಗಸ್ಟ್ 12: ಶಸ್ತ್ರಾಸ್ತ್ರ ಹಿಡಿದು ಇರಿಯಲು ಬಂದಿದ್ದ ಇಬ್ಬರು ದರೋಡೆಕೋರರ ವಿರುದ್ಧ ವೃದ್ಧ ದಂಪತಿ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಮೈನವಿರೇಳಿಸುವ ಘಟನೆ ತಮಿಳುನಾಡಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
75 ವರ್ಷದ ಷಣ್ಮುಗವೇಲು ಮತ್ತು ಅವರ ಪತ್ನಿ 68 ವರ್ಷದ ಸೆಂಥಮರೈ ಸಾಹಸ ಮೆರೆದ ದಂಪತಿ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಭಾನುವಾರ ರಾತ್ರಿ ಕಡಾಯಂನಲ್ಲಿರುವ ಫಾರ್ಮ್ಹೌಸ್ನಲ್ಲಿ ಇಬ್ಬರೂ ಊಟ ಮುಗಿಸಿದ್ದರು. ಷಣ್ಮುಗವೇಲು ಅವರು ಮನೆಯ ಹೊರಗೆ ಕುಳಿತು ವಿರಮಿಸುತ್ತಿದ್ದರು. ಅವರ ಪತ್ನಿ ಮನೆಯೊಳಗೆ ಇದ್ದರು. ಆಗ ಹಿಂದಿನಿಂದ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ ಷಣ್ಮುಗವೇಲು ಅವರ ಕುತ್ತಿಗೆಗೆ ಟವಲ್ ಹಾಕಿ ಉಸಿರುಗಟ್ಟಿಸಲು ಪ್ರಯತ್ನಿಸಿದ.
ರಾತ್ರೋ ರಾತ್ರಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು
ಷಣ್ಮುಗವೇಲು ಅವರ ಕೂಗಾಟ ಕೇಳಿದ ಸೆಂಥಮರೈ ಹೊರಗೆ ಓಡಿಬಂದರು. ಅಲ್ಲಿ ನಡೆಯುತ್ತಿರುವ ಘಟನೆ ನೋಡಿ ಕಂಗಾಲಾಗಿ ಹೆದರಿ ಅಳುತ್ತಾ ಕೂರಲಿಲ್ಲ. ಬದಲಾಗಿ ಕೈಗೆ ಸಿಕ್ಕ ಕುರ್ಚಿ, ಸ್ಟೂಲು ಮುಂತಾದ ವಸ್ತುಗಳನ್ನು ದಾಳಿಕೋರನ ಮೇಲೆ ಎಸೆಯತೊಡಗಿದರು. ಇದರಿಂದ ಆತ ಗಾಬರಿಗೊಂಡು ತನ್ನ ಹಿಡಿತ ಸಡಿಲಿಸಿದ. ಈ ಸಮಯವನ್ನು ಬಳಸಿಕೊಂಡು ಷಣ್ಮುಗವೇಲು ಆತನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಕೈಗೆ ಸಿಕ್ಕಿದ್ದರಲ್ಲೇ ಹೋರಾಟ
ಇದೇ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮತ್ತೊಬ್ಬ ಮುಸುಕುಧಾರಿ ವ್ಯಕ್ತಿ ಕೂಡ ಪ್ರತ್ಯಕ್ಷನಾದ. ಕೈಯಲ್ಲಿ ಆಯುಧ ಹಿಡಿದಿದ್ದ ಅವರು ಬೀಸುತ್ತಾ ಅವರನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದರೆ, ವೃದ್ಧ ದಂಪತಿ ಎದೆಗುಂದದೆ ಕೈಗೆ ಸಿಕ್ಕ ವಸ್ತುಗಳನ್ನೇ ಆಯುಧವನ್ನಾಗಿ ಬಳಸಿಕೊಂಡು ಅವರ ವಿರುದ್ಧ ಪ್ರತಿರೋಧ ತೋರಿಸಿದರು. ಸುಮಾರು 45 ಸೆಕೆಂಡ್ ಇಬ್ಬರೂ ಅಪಾರ ಧೈರ್ಯ ತೋರಿ ಹೋರಾಟ ನಡೆಸಿದರು. ಅವರು ಎಸೆದ ಚಪ್ಪಲಿ ಮತ್ತಿತರ ವಸ್ತುಗಳು ದರೋಡೆಕೋರರಿಗೆ ತಗುಲಿದವು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಬೆದರಿದ ದರೋಡೆಕೋರರು
ದಂಪತಿಯಿಂದ ಪ್ರತಿದಾಳಿಯನ್ನು ನಿರೀಕ್ಷಿಸದ ದರೋಡೆಕೋರರು ಹಿಮ್ಮೆಟ್ಟಿದರು. ಕುರ್ಚಿಯ ಮುರಿದ ಕಾಲನ್ನು ಹಿಡಿದು ಮುನ್ನುಗ್ಗಿದ ಷಣ್ಮುಗವೇಲು ಅವರ ಶಕ್ತಿಯನ್ನು ಕಂಡು ಬೆಚ್ಚಿದ ದುಷ್ಕರ್ಮಿಗಳು ಅಲ್ಲಿಂದ ಫೇರಿ ಕಿತ್ತರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧ ದಂಪತಿಯ ಧೈರ್ಯ ಮತ್ತು ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿಯ ಆಗಂತುಕರ ದಾಳಿಗೆ ಮಾನಸಿಕವಾಗಿ ಸಿದ್ಧರಾಗಿಯೇ ಇದ್ದೆವೆಂದು ಷಣ್ಮುಗವೇಲು ತಿಳಿಸಿದ್ದಾರೆ
ಬೆಳಗಾವಿ: ಯಲ್ಲಮ್ಮ ಜಾತ್ರೆಯಲ್ಲಿ ದರೋಡೆಕೋರರ ಆರ್ಭಟ
ದಾಳಿ ನಡೆಯುವ ಅನುಮಾನವಿತ್ತು
'ನಾವು ಹಳ್ಳಿಯ ತುದಿಯಲ್ಲಿರುವ ತೋಟದಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಇದು ಕಾಡಿಗೆ ಅತಿ ಸಮೀಪ ಇರುವ ಜಾಗ. ಐದು ಎಕರೆ ಭೂಮಿ ಇದ್ದು, ನಾವಿಲ್ಲಿ 40 ವರ್ಷಗಳಿಂದ ವಾಸಿಸುತ್ತಿದ್ದೇವೆ. ನಮ್ಮ ಮನೆಯು ಹಳ್ಳಿಯ ಇತರೆ ಭಾಗಗಳಿಂದ ಪ್ರತ್ಯೇಕವಾಗಿರುವುದರಿಂದ ನಮ್ಮಮೇಲೆ ಈ ರೀತಿ ದಾಳಿ ನಡೆಯಬಹುದು ಎಂಬ ಸತ್ಯ ನಮಗೆ ಅರಿವಿತ್ತು. ನನ್ನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾಗ ನನ್ನ ಪತ್ನಿಯ ಗಮನ ಸೆಳೆಯುವ ಸಲುವಾಗಿ ಜೋರಾಗಿ ಕಿರುಚತೊಡಗಿದೆ. ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಗೊತ್ತಿತ್ತು. ಆದರೆ, ಇದರಿಂದ ಆಕೆ ಬಾಗಿಲಿನತ್ತ ಓಡಿಬಂದಳು' ಎಂದು ಷಣ್ಮುಗವೇಲು ಹೇಳಿದ್ದಾರೆ.
ಗಂಡನಿಗೆ ನೋವಾದರೆ ಹೇಗೆ ಸಹಿಸಲಿ?
ಸೆಂಥಮರೈ ಅವರು ಈ ದಾಳಿಯಿಂದ ಯಾವುದೇ ಆಘಾತಕ್ಕೆ ಒಳಗಾದವರಂತೆ ಕಂಡುಬರಲಿಲ್ಲ. ಮಾಧ್ಯಮದವರು ಅವರನ್ನು ಮಾತನಾಡಿಸುವಾಗ ನಗುತ್ತಲೇ ಇದ್ದರು. 'ನನ್ನ ಗಂಡನನ್ನು ನಾನು ಪ್ರೀತಿಸುತ್ತೇನೆ. ಯಾರಾದರೂ ಅವರಿಗೆ ನೋವುಂಟು ಮಾಡಿದರೆ ನಾನು ಹೇಗೆ ಸಹಿಸಿಕೊಳ್ಳಲಿ?' ಎಂದು ಅವರು ಪ್ರಶ್ನಿಸಿದರು. ನಾನು ಚಿಕ್ಕ ವಯಸ್ಸಿನಿಂದಲೈ ಧೈರ್ಯಶಾಲಿ, ದಿಟ್ಟೆ ಎಂದು ಹೇಳಿಕೊಂಡಿದ್ದಾರೆ.