ತಮಿಳುನಾಡು; ಕೋಟಿ ರೂ ವಶಪಡಿಸಿಕೊಂಡ ಬೆನ್ನಲ್ಲೇ ಡಿಸಿ, ಎಸ್ಪಿ ವರ್ಗಾವಣೆ
ಚೆನ್ನೈ, ಮಾರ್ಚ್ 26: ಚುನಾವಣಾ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದು ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದ ನಂತರ ಭಾರತೀಯ ಚುನಾವಣಾ ಆಯೋಗ ತಿರುಚಿರಾಪಳ್ಳಿಯ ಜಿಲ್ಲಾಧಿಕಾರಿ, ಪೊಲೀಸ್ ಸೂಪರಿಂಟೆಂಡೆಂಟ್ ಹಾಗೂ ಸಬ್ ಕಲೆಕ್ಟರ್ ಅವರನ್ನು ಚುನಾವಣೇತರ ಹುದ್ದೆಗಳಿಗೆ ನೇಮಿಸಿದೆ.
ವರ್ಗಾವಣೆ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ವಿಶೇಷ ವೀಕ್ಷಕರ ವರದಿಯನ್ನಾಧರಿಸಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ತಮಿಳುನಾಡು:1 ಕೋಟಿ ತುಂಬಿದ್ದ ಚೀಲ ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು
ತಿರುಚಿರಾಪಳ್ಳಿಯ ರಸ್ತೆಯಲ್ಲೇ ಎರಡು ಗುಂಪುಗಳ ಮಧ್ಯೆ ಘರ್ಷಣೆ ಶುರುವಾಗಿತ್ತು, ಅದನ್ನು ಬಿಡಿಸಲು ಹೋದ ಪೊಲೀಸರಿಗೆ 1 ಕೋಟಿ ರೂ. ಇದ್ದ ಬ್ಯಾಗ್ ಸಿಕ್ಕಿತ್ತು. ತಕ್ಷಣವೇ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣ ವಶಪಡಿಸಿಕೊಂಡಿದ್ದರು.
ತಿರುಚಿರಾಪಳ್ಳಿ ಎಸ್ಪಿ ಪಿ. ರಾಜನ್, ಜಿಲ್ಲಾಧಿಕಾರಿ ಎಸ್. ಶಿವರಾಸು ಮತ್ತು ಶ್ರೀರಂಗಂನ ಉಪ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರನ್ನು ಚುನಾವಣೇತರ ಹುದ್ದೆಗಳಿಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ರಾಜನ್ ಅವರ ಜಾಗಕ್ಕೆ ಎ.ಮಯಿಲ್ವಗನನ್ ಹಾಗೂ ಶಿವರಾಸು ಸ್ಥಾನಕ್ಕೆ ಎಸ್. ದಿವ್ಯದರ್ಶಿನಿ ಅವರನ್ನು ನೇಮಿಸಲಾಗಿದೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಕಾಂಗ್ರೆಸ್-ಡಿಎಂಕೆ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಗಳ ನಡುವೆ ಜಿದ್ದಾಜಿದ್ದಿ ಇದೆ.