ಹಿಂದಿ ಹೇರಲು ಬಂದರೆ ಜೇನುಗೂಡಿಗೆ ಕಲ್ಲು ಎಸೆದ ಹಾಗೆ: ಬಿಜೆಪಿಗೆ ಡಿಎಂಕೆ ಸ್ಟಾಲಿನ್ ಡಿಚ್ಚಿ
"ತಮಿಳುನಾಡು ಜನರ ರಕ್ತದಲ್ಲೇ ಹಿಂದಿ ಇಲ್ಲ'' ಎಂದು ದ್ರಾವಿಡ ಮುನ್ನೆಟ್ರ ಕಳಗಂನ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಮಾನವ ಸಂಪನ್ಮೂಲ ಅಬಿವೃದ್ಧಿ ಸಚಿವಾಲಯವು ಹೊಸ ಶಿಕ್ಷಣ ನೀತಿ ಕರಡು ರೂಪಿಸಿದ್ದು, ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕು ಎಂಬ ಪ್ರಸ್ತಾವದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಕಸ್ತೂರಿರಂಗನ್ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ನಂತರ ಸ್ಟಾಲಿನ್ ತಮ್ಮ ನಿಲುವು ತಿಳಿಸಿದ್ದಾರೆ. ರಾಜ್ಯಗಳಿಗೆ ತ್ರಿಭಾಷಾ ಸೂತ್ರವನ್ನು ಸೂಚಿಸಲಾಗಿದೆ. ಈಗ ಸಲ್ಲಿಸಿರುವ ಕರಡಿನಲ್ಲಿ ಶಾಲಾಪೂರ್ವ ಶಿಕ್ಷಣದಿಂದ ಹನ್ನೆರಡನೇ ತರಗತಿ ತನಕ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಕಲಿಸಲು ಶಿಫಾರಸು ಮಾಡಲಾಗಿದೆ.
ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ
ಐನೂರು ಪುಟಗಳ ವರದಿಯಲ್ಲಿರುವ ಪ್ರಕಾರ, ಹಿಂದಿ ಮಾತನಾಡದ ರಾಜ್ಯಗಳು ಪ್ರಾದೇಶಿಕ ಭಾಷೆ, ಇಂಗ್ಲಿಷ್ ಹಾಗೂ ಹಿಂದಿ ಸೇರಿಸಬೇಕಾಗುತ್ತದೆ. ಹಿಂದಿ ಮಾತನಾಡುವ ರಾಜ್ಯದಲ್ಲಿ ಇಂಗ್ಲಿಷ್ ಮತ್ತು ಹಿಂದಿಯ ಜತೆಗೆ ಭಾರತೀಯ ಭಾಷೆಯೊಂದನ್ನು ಕಲಿಯಲು ಅವಕಾಶ ಇರುತ್ತದೆ.
ತಮಿಳುನಾಡಿನ ಮೇಲೆ ಹಿಂದಿ ಹೇರಿಕೆ ಮಾಡಲು ಮುಂದಾಗುವುದು ಅಂದರೆ ಜೇನುಗೂಡಿಗೆ ಕಲ್ಲು ಎಸೆದ ಹಾಗೆ. ಈ ವಿಚಾರವನ್ನು ಡಿಎಂಕೆ ಸಂಸದರು ಸಂಸತ್ ನಲ್ಲಿ ಚರ್ಚೆಗೆ ತರಲಿದ್ದಾರೆ. ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಲು ಬಂದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕದನವನ್ನೇ ಘೋಷಿಸಬೇಕಾಗುತ್ತದೆ. ತ್ರಿಭಾಷಾ ಸೂತ್ರವೇ ದೊಡ್ಡ ಆಘಾತ. ಈಗಿನ ಶಿಫಾರಸು ದೇಶವನ್ನೇ ವಿಭಜನೆ ಮಾಡುತ್ತದೆ ಎಂದು ಸ್ಟಾಲಿನ್ ಅಭಿಪ್ರಾಯ ಪಟ್ಟಿದ್ದಾರೆ.
''ಯಾವುದೇ ಭಾಷೆಯನ್ನು ಯಾರ ಮೇಲೂ ಹೇರುವ ಉದ್ದೇಶ ಇಲ್ಲ. ಎಲ್ಲ ಭಾರತೀಯ ಭಾಷೆಗಳನ್ನು ಪ್ರಚಾರ ಮಾಡುವುದು ನಮ್ಮ ಆಶಯ. ಇದು ಸಮಿತಿ ನೀಡಿದ ಕರಡು ಅಷ್ಟೇ. ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರವೇ ಸರಕಾರ ನಿರ್ಧಾರ ಮಾಡುತ್ತದೆ" ಎಂದು ಜಾವಡೇಕರ್ ಹೇಳಿದ್ದಾರೆ.