ವೆಲ್ಲೂರಲ್ಲಿ ಸ್ಟಾಲಿನ್ ಕಾರ್ಯತಂತ್ರಕ್ಕೆ ಗೆಲುವು, ಎಐಎಡಿಎಂಕೆಗೆ ಸೋಲು
ವೆಲ್ಲೂರು(ತಮಿಳುನಾಡು), ಆಗಸ್ಟ್ 10: ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಪಕ್ಷ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ಗೆ ಮತ್ತೊಮ್ಮೆ ಸೋಲುಂಟಾಗಿದೆ.
ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ವೆಲ್ಲೂರು ಕ್ಷೇತ್ರದ ಲೋಕಸಭೆ ಉಪ ಚುನಾವಣೆ ಫಲಿತಾಂಶ ಬಂದಿದೆ. ಐಟಿ ದಾಳಿ, ಅನರ್ಹತೆ ಭೀತಿ, ಎಫ್ಐಆರ್ ಎಲ್ಲವನ್ನು ಕಂಡಿದ್ದ ಕದೀರ್ ಈಗ ಸಂಸದರಾಗಿದ್ದಾರೆ, ಕದೀರ್ ಅನರ್ಹತೆ ಕುರಿತಂತೆ ಸಮರ್ಥವಾಗಿ ಅಭಿಯಾನ ನಡೆಸದ ಎಐಎಡಿಎಂಕೆ ತಂತ್ರಕ್ಕೆ ಸೋಲುಂಟಾಗಿದೆ.
ಡಿಎಂಕೆ ಆಭ್ಯರ್ಥಿ ಕದೀರ್ ಆನಂದ್(ಹಿರಿಯ ನಾಯಕ ದೊರೈ ಮುರುಗನ್ ಪುತ್ರ) ಅವರು 8,141 ಮತಗಳ ಅಂತರದಿಂದ ಎಐಎಡಿಎಂಕೆಯ ಅಭ್ಯರ್ಥಿ ಎಸಿ ಷಣ್ಮುಗಂ ಅವರನ್ನು ಸೋಲಿಸಿದರು. ಎಐಎಡಿಎಂಕೆ ಅಭ್ಯರ್ಥಿ ಆರಂಭಿಕ ಮುನ್ನಡೆ ಪಡೆದುಕೊಂಡಿದ್ದರು. ಆದರೆ, ಐದು ಸುತ್ತಿನಲ್ಲಿ ಎಣಿಕೆ ನಂತರ ಡಿಎಂಕೆ ಅಭ್ಯರ್ಥಿ ಮುನ್ನಡೆ ಸಾಧಿಸಿ, ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಲೋಕಸಭೆ ಚುನಾವಣೆ: ವೆಲ್ಲೂರು ಕ್ಷೇತ್ರದಲ್ಲಿ ಆಗಸ್ಟ್ 5 ಕ್ಕೆ ಮತದಾನ
ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಹಾಗೂ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಏಪ್ರಿಲ್ 11 ರಿಂದ ಮೇ 23ರವರೆಗೆ ನಡೆದ ಏಳು ಸುತ್ತಿನ ಲೋಕಸಭೆ ಚುನಾವಣೆ ವೇಳೆ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಮಿತಿಮೀರಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಡಿಎಂಕೆ ಅಭ್ಯರ್ಥಿಯ ವೇರ್ ಹೌಸ್ ನಲ್ಲಿ ಅಪಾರ ಪ್ರಮಾಣ(11.48 ಕೋಟಿ ರು) ದಲ್ಲಿ ಅಕ್ರಮ ಹಣ ಕಂಡು ಬಂದಿತ್ತು.
ದೊರೈ ಮುರಗನ್ ಮನೆ, ಕದೀರ್ ನಡೆಸುವ ಕಾಲೇಜು, ಕಾಟ್ಪಡಿಯ ಸಿಮೆಂಟ್ ಗೋದಾಮು ಮೇಲೆ ದಾಳಿ ನಡೆಸಲಾಗಿತ್ತು. ನಾಮ್ ತಮಿಳರ್ ಕಚ್ಚಿ ಅಭ್ಯರ್ಥಿ ದೀಪಾ, ಪಕ್ಷೇತರ ಅಭ್ಯರ್ಥಿ ಕದಿವರನ್ ಅವರು ಕದೀರ್ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಿದರು ಪ್ರಯೋಜನವಾಗಿರಲಿಲ್ಲ. ಉಪ ಚುನಾವಣೆಯಲ್ಲಿ ಕದೀರ್ ಇಂದು ಗೆಲುವು ಸಾಧಿಸಿದ್ದಾರೆ.
38 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಡಿಎಂಕೆ 37 ಸ್ಥಾನ ಗಳಿಸಿದರೆ, ಎಐಎಡಿಎಂಕೆ ಒಂದು ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು.