ಪಳನಿಸ್ವಾಮಿ ಬಗ್ಗೆ ಅವಹೇಳನ: ಡಿಎಂಕೆ ವಿರುದ್ಧ ರಾಜನಾಥ್ ಸಿಂಗ್ ಸಿಡಿಮಿಡಿ
ಚೆನ್ನೈ, ಮಾರ್ಚ್ 31: ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಡಿಎಂಕೆ ಹಿರಿಯ ಸಂಸದರೊಬ್ಬರು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಊಟಿಯಲ್ಲಿ ಪ್ರಚಾರ ನಡೆಸಿದ ರಾಜನಾಥ್ ಸಿಂಗ್, ಡಿಎಂಕೆ ಸಂಸಸದರು ನೀಡಿದ ಹೇಳಿಕೆ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ ಎಂದರು. ಅವರು ನಾಚಿಕೆ ಹುಟ್ಟಿಸುವಂತಾ ಪದಗಳನ್ನು ಬಳಕೆ ಮಾಡಿದ್ದು, ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಡಿಎಂಕೆ ನಾಯಕ ಕೇವಲ ಸಿಎಂ ವಿರುದ್ಧ ಕೆಟ್ಟ ಶಬ್ದವನ್ನು ಬಳಸಿಲ್ಲ. ಬದಲಿಗೆ ಇಡೀ ತಮಿಳುನಾಡನ್ನು ಅವಮಾನಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಸಂಸದ ಎ.ರಾಜಾ ಆರೋಪಕ್ಕೆ ಪ್ರಚಾರ ಸಭೆಯಲ್ಲಿ ಕಣ್ಣಿರು ಹಾಕಿದ ತಮಿಳುನಾಡು ಸಿಎಂ
ಇಡೀ ದೇಶದ ತಾಯಂದಿರು ಮತ್ತು ಸಹೋದರಿಯರನ್ನು ಅವರು ಅವಮಾನಿಸಿದ್ದಾರೆ. ಈ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಡಿಎಂಕೆ ಸಂಸದ ಎ ರಾಜಾ ವಿವಾದಾತ್ಮಕ ಹೇಳಿಕೆ:
ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮತ್ತು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನಾಯಕತ್ವದ ನಡುವೆ ಹೋಲಿಕೆ ಸಂದರ್ಭದಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ಸ್ಟಾಲಿನ್ ಅವರ ರಾಜಕೀಯ ಜೀವನವು "ಕಾನೂನುಬದ್ಧವಾಗಿ ಜನಿಸಿದ ಸಂಪೂರ್ಣ ಪ್ರಬುದ್ಧ ಮಗುವಿನಂತಿದೆ ಮತ್ತು "ಇಪಿಎಸ್ ಅವರು ಕಾನೂನು ಬಾಹಿರದಿಂದ ಹುಟ್ಟಿದ ಅಕಾಲಿಕ ಮಗುವಿನಂತೆ' ಎಂದು ಹೋಲಿಕೆ ಮಾಡಿದ್ದರು.
ಸಿಎಂ ಪಳನಿಸ್ವಾಮಿ ಮತ್ತು ಅವರ ತಾಯಿ ಬಗ್ಗೆ ಡಿಎಂಕೆ ಸಂಸದ ಎ. ರಾಜಾ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಟೀಕೆಗಳಿಂದಾಗಿ ಸಿಎಂಗೆ ತೀವ್ರ ನೋವುಂಟಾಗಿದೆ ಎಂದು ತಿಳಿದು ಬೇಸರವಾಯಿತು. ನನ್ನ ಟೀಕೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ, "ಎಂದು ಹೇಳಿದ್ದರು.
ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದು ನನ್ನ ಭಾಷಣದ ಮುಖ್ಯ ಉದ್ದೇಶವಾಗಿರಲಿಲ್ಲ. ಬದಲಿಗೆ ಎರಡು ನಾಯಕರ ಜೀವನದ ಬಗ್ಗೆ ಹೋಲಿಕೆ ಮಾಡಿದ್ದೇನೆ ಎಂದು ಡಿಎಂಕೆ ಸಂಸದ ಎ. ರಾಜಾ ಸ್ಪಷ್ಟನೆ ನೀಡಿದ್ದರು.