ಎಂ.ಕರುಣಾನಿಧಿ ಕುಟುಂಬ ವೃತ್ತಾಂತ: ಇಲ್ಲಿದೆ ವಂಶವೃಕ್ಷ
ಚೆನ್ನೈ, ಆಗಸ್ಟ್ 08: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರದು ತುಂಬು ಕುಟುಂಬ. 5 ದಶಕಗಳ ಕಾಲ ಡಿಎಂಕೆಯ ಅನಭಿಷಿಕ್ತ ದೊರೆಯಾಗಿ ಆಳಿದ ಮುತ್ತುವೇಲ್ ಕರುಣಾನಿಧಿ(94) ಇನ್ನಿಲ್ಲ. ಅವರ ಅಗಲಿಕೆ ತಮಿಳು ರಾಜಕೀಯದಲ್ಲಿ, ಅವರ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಮತ್ತು ಅವರ ಪ್ರೀತಿಯ ಕುಟುಂಬದಲ್ಲಿ ನಿರ್ವಾತ ಸೃಷ್ಟಿಸಿದೆ.
ತಮಿಳು ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಲ್ಲಿನ ಪಕ್ಷಗಳ ಮುಖಂಡರ ವಂಶವೃಕ್ಷವನ್ನು ಅರ್ಥಮಾಡಿಕೊಳ್ಳಲೇಬೇಕು. ಒಂದೇ ಕುಟುಂಬದ ಹಲವರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿರುವುದರಿಂದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
LIVE: ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ: ಮದ್ರಾಸ್ ಕೋರ್ಟ್
ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಒಟ್ಟು ಆರು ಜನ ಮಕ್ಕಳು. ಮೊದಲ ಪತ್ನಿಯಿಂದ ಓರ್ವ ಮಗ, ಎರಡನೇ ಪತ್ನಿಯಿಂದ ನಾಲ್ವರು ಮಕ್ಕಳು, ಕೊನೆಯ ಪತ್ನಿಯಿಂದ ಓರ್ವ ಪುತ್ರಿಯನ್ನು ಪಡೆದ ಕರುಣಾನಿಧಿ ಅವರದು ತುಂಬು ಕುಟುಂಬವೇ.
ಅವರ ವಂಶವೃಕ್ಷವನ್ನು ಪರಿಚಯಿಸುವುದು ಈಗ ಸಂದರ್ಭೋಚಿತವೂ ಹೌದು.
ಮೊದಲ ಪತ್ನಿ ಪದ್ಮಾವತಿ
ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಮೊದಲ ಪತ್ನಿ ಪದ್ಮಾವತಿ. ಪದ್ಮಾವತಿ ಅವರ ಪುತ್ರ ಎಂ ಕೆ ಮುತ್ತು. ಎಂದಿಗೂ ರಾಜಕೀಯದ ಬಗ್ಗೆ ಆಸಕ್ತಿ ತಳೆಯದ ಮುತ್ತು ಅವರು ಸಿನೆಮಾ ಕ್ಷೇತ್ರವನ್ನು ನೆಚ್ಚಿಕೊಂಡರು. ಅವರು ಸುಮಾರು ಏಳು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಚಿತ್ರಗಳಿಗೆ ಕರುಣಾನಿಧಿ ಅವರೇ ಕತೆ ಬರೆದಿದ್ದರಂತೆ! ಆದರೆ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣ ಅವರು ಎಐಎಡಿಎಂಕೆ ಪಕ್ಷದೊಂದಿಗೆ ಕೈಜೋಡಿಸಿದರು.
ಎರಡನೇ ಪತ್ನಿ ದಯಾಳು ಅಮ್ಮಾಳ್
ದಯಾಳು ಅಮ್ಮಾಳ್ ಅವರು ಕರುಣಾನಿಧಿ ಅವರ ಎರಡನೇ ಪತ್ನಿ. ಎಂ ಕೆ ಅಳಗಿರಿ, ಎಂಕೆ ಸ್ಟಾಲಿನ್, ತಮಿಳರಸು, ಸೆಲ್ವಿ ಇವರು ನಾಲ್ಕು ಜನ ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಮಕ್ಕಳು. ಎಂ.ಕೆ.ಅಳಗಿರಿ ಮತ್ತು ತಂದೆ ಎಂ ಕರುಣಾನಿಧಿ ಮತ್ತು ಸಹೋದರ ಎಂಕೆ ಸ್ಟಾಲಿನ್ ನಡುವೆ ಅಧಿಕಾರ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಎದ್ದ ವಿವಾದದಿಂದಾಗಿ ದಕ್ಷಿಣ ತಮಿಳುನಾಡಿನ ಡಿಎಂಕೆ ಪಕ್ಷದ ಜವಾಬ್ದಾರಿಯನ್ನು ಅಳಗಿರಿ ಅವರಿಗೇ ನೀಡುವಂತಾಯಿತು. ಈ ಸಂದರ್ಭದಲ್ಲಿ ಸ್ಟಾಲಿನ್ ಮತ್ತು ಅಳಗಿರಿ ನಡುವೆ ಎದ್ದ ಜಗಳ ಕೈ ಮಿಸಲಾಯಿಸುವ ಹಂತಕ್ಕೂ ತಲುಪಿತ್ತು.
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ
ಮುದ್ದಿನ ಪುತ್ರ ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್, ಎಂ ಕರುಣಾನಿಧಿ ಮತ್ತು ದಯಾಳು ಅಮ್ಮಾಳ್ ಅವರ ಎರಡನೇ ಪುತ್ರ. ಸ್ಟಾಲಿನ್ ಕರುಣಾನಿಧಿ ಅವರ ಅತ್ಯಂತ ಮುದ್ದಿನ, ಅಕ್ಕರೆಯ ಪುತ್ರರಲ್ಲೊಬ್ಬರು. ಕರುಣಾನಿಧಿ ಅವರೊಂದಿಗೆ ಕೊನೆಯ ದಿನದವರೆಗೂ ಜೊತೆಗಿದ್ದ ಸ್ಟಾಲಿನ್, ಅವರು ಅನಾರೋಗ್ಯ ಪೀಡಿತರಾದಾಗಿನಿಂದಲೂ ಅವರದೇ ತತ್ತ್ವಗಳ ಮೂಲಕ ಡಿಎಂಕೆಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಸ್ಟಾಲಿನ್, ತಂದೆಯ ಅಗಲಿಕೆಯಿಂದ ವಿಚಲಿತರಾಗಿದ್ದಾರೆ.
'ಕೊನೆಯ ಬಾರಿ ಅಪ್ಪ ಎಂದು ಕರೆಯಲೇ?' ಕರುಣಾನಿಧಿಗೆ ಸ್ಟಾಲಿನ್ ಭಾವುಕ ಪತ್ರ!
ಮೂರನೇ ಪತ್ನಿ ರಜತಿ ಅಮ್ಮಾಳ್
ರಜತಿ ಅಮ್ಮಾಳ್ ಅವರು ಕರುಣಾನಿಧಿ ಅವರ ಮೂರನೇ ಪತ್ನಿ. ಅವರ ಪುತ್ರಿಯೇ ಕನ್ನಿಮೋಳಿ. ಟು ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ಕನ್ನಿಮೋಳಿ ರಾಜ್ಯಸಭಾ ಸದಸ್ಯರೂ ಹೌದು. ಅವರಿಗೆ ಪ್ರಾರಂಭದಲ್ಲಿ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಕರುಣಾನಿಧಿ ಅವರ ಸಾಹಿತ್ಯದ ಉತ್ತರಾಧಿಕಾರಿ ಎನ್ನಿಸಿದ್ದ ಕನ್ನಿಮೋಳಿ ದಿ ಹಿಂದು ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.