ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಡಿಎಂಕೆ ತೀರ್ಮಾನ
ಚೆನ್ನೈ, ಮೇ. 25 : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿರ್ದೋಷಿಯೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು, ಎಐಎಡಿಎಂಕೆಯ ಬದ್ಧ ವೈರಿಯಾಗಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೋಮವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
"66.65 ಕೋಟಿ ರು. ಹಗರಣದಲ್ಲಿ ಭಾಗಿಯಾಗಲು ಡಿಎಂಕೆ ಪಕ್ಷಕ್ಕೆ ಎಲ್ಲ ಅರ್ಹತೆ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಎರಡು ಬಾರಿ ಹೇಳಿರುವ ಕಾರಣ ಜಯಲಲಿತಾ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಡಿಎಂಕೆ ಪಕ್ಷ ಮೇಲ್ಮನವಿ ಸಲ್ಲಿಸಲಿದೆ" ಎಂದು ಡಿಎಂಕೆ ನಾಯಕ 90 ವರ್ಷದ ಎಂ ಕರುಣಾನಿಧಿ ಅವರು ಹೇಳಿ ಯುದ್ಧರಂಗಕ್ಕಿಳಿದಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ನಿರ್ದೋಷಿಗಳೆಂದು ಮೇ 11ರಂದು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸಿಆರ್ ಕುಮಾರಸ್ವಾಮಿ ತೀರ್ಪು ನೀಡಿದ್ದರು. ಇದರ ವಿರುದ್ಧ ಕರ್ನಾಟಕ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಡಿಎಂಕೆ ಒತ್ತಾಯ ಹೇರುತ್ತಲೇ ಬಂದಿತ್ತು.
ಆದರೆ, ಈ ಪ್ರಕರಣದಲ್ಲಿ ಕರ್ನಾಟಕ ಕೇವಲ ಆಡಳಿತಾತ್ಮಕ ಪಾತ್ರವನ್ನು ಮಾತ್ರವಹಿಸಿರುವುದರಿಂದ ಮೇಲ್ಮನವಿ ಸಲ್ಲಿಸದಿರುವುದೇ ಲೇಸೆಂದು ಕಾಂಗ್ರೆಸ್ ಕಾನೂನು ಘಟಕ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ನೇರವಾಗಿ ಕಣಕ್ಕಿಳಿದಿದೆ.
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಆಸ್ತಿಯ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಲೋಕದೋಷಗಳಿವೆಯೆಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರಾದ ಬಿ.ವಿ. ಆಚಾರ್ಯ ಅವರು ಮೇಲ್ಮನವಿ ಸಲ್ಲಿಸಬೇಕೆಂದು ಸರಕಾರಕ್ಕೆ ತಿಳಿಸಿದ್ದರು. ಇದಕ್ಕೆ ಪೂರಕವಾಗಿ ಅಡ್ವೋಕೇಟ್ ಜನರಲ್ ಆಗಿರುವ ರವಿ ವರ್ಮಾ ಕುಮಾರ್ ಅವರು ಕೂಡ ಆಚಾರ್ಯ ಅವರ ಮಾತನ್ನು ಪುರಸ್ಕರಿಸಿದ್ದರು. [ಮೇಲ್ಮನವಿಗೆ 'ಹಸಿರು' ನಿಶಾನೆ]
ಇಷ್ಟೆಲ್ಲ ಇದ್ದರೂ, ತಮಿಳುನಾಡಿನ ಜೊತೆ ಅನಗತ್ಯವಾಗಿ ಕಾನೂನು ಸಮರಕ್ಕಿಳಿಯುವ ಉತ್ಸುಕತೆಯನ್ನು ತೋರಿಸುತ್ತಿಲ್ಲ. ಕರ್ನಾಟಕದಲ್ಲಿರುವ ವಿರೋಧ ಪಕ್ಷಗಳು ಮೇಲ್ಮನವಿ ಸಲ್ಲಿಸಬೇಕೆಂದು ಕಾಂಗ್ರೆಸ್ಸಿನ ತಲೆಯ ಮೇಲೆ ಕುಳಿತಿದ್ದರೂ ಸಿದ್ದರಾಮಯ್ಯ ಸರಕಾರ ಕಾಲವಿಳಂಬದ ಆಟವಾಡುತ್ತಿದೆ ಮತ್ತು ಮೇಲ್ಮನವಿ ಸಲ್ಲಿಸಲು ಮೀನಮೇಷ ಎಣಿಸುತ್ತಿದೆ.
ಮೇ 23ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ 5ನೇ ಬಾರಿ ಪ್ರಮಾಣವಚನ ಸ್ವೀಕರಿಸಿರುವ ಜಯಲಲಿತಾ ಅವರನ್ನು ಅಪರಾಧಿ ಎಂದು ತೀರ್ಪು ನೀಡಿ, ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರು. ದಂಡವನ್ನು ಬೆಂಗಳೂರಿನಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು 2015ರ ಸೆಪ್ಟೆಂಬರ್ 27ರಂದು ಐತಿಹಾಸಿಕ ತೀರ್ಪು ನೀಡಿದ್ದರು.