ನಾನು ಕಲೈನಾರ್ ಮಗ, ಇದಕ್ಕೆಲ್ಲ ಹೆದರುವುದಿಲ್ಲ: ಅಳಿಯ ಮೇಲೆ ಐಟಿ ದಾಳಿಗೆ ಸ್ಟಾಲಿನ್ ತಿರುಗೇಟು
ಚೆನ್ನೈ, ಏಪ್ರಿಲ್ 3: ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪದಲ್ಲಿಯೇ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅಳಿಯನಿಗೆ ಸೇರಿದ ಆಸ್ತಿಗಳ ಮೇಲೆ ಅದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಅಧಿಕಾರದ ದುರ್ಬಳಕೆ ಎಂದು ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು ನೀಡಿದೆ.
ಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಐಎಡಿಎಂಕೆ-ಬಿಜೆಪಿ ಸೂಚನೆಯಂತೆ ಅವರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಐಟಿ ಇಲಾಖೆಯ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಡಿಎಂಕೆ ಆಗ್ರಹಿಸಿದೆ.
ತಮಿಳುನಾಡು: ಎಂಕೆ ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ
ಚೆನ್ನೈ ಹೊಸವಲಯದ ನೀಲಾಂಗರೈದಲ್ಲಿನ ಸ್ಟಾಲಿನ್ ಮಗಳು ಸೆಂಥಮರೈ ಮತ್ತು ಆಕೆಯ ಪತಿ ಶಬರೀಶನ್ ಅವರ ನಿವಾಸ ಸೇರಿದಂತೆ ವಿವಿಧೆಡೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ಭಾರಿ ಪ್ರಮಾಣದ ನಗದು ಹಣ ಸರಬರಾಜಾಗುತ್ತಿದೆ ಎಂಬಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಶಬರೀಶನ್ ಅವರ ಸಹವರ್ತಿಗಳಾದ ಅಣ್ಣಾನಗರದ ಡಿಎಂಕೆ ಅಭ್ಯರ್ಥಿ ಮೋಹನ್ ಅವರ ಮಗ ಕಾರ್ತಿಕ್ ಮತ್ತು ಬಾಲ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿಯೂ ಹುಡುಕಾಟ ನಡೆದಿದೆ. ಶಬರೀಶನ್ ಅವರು ಸ್ಟಾಲಿನ್ ಅವರ ಸಲಹೆಗಾರರಾಗಿದ್ದಾರೆ.
'ನಾನು ಎಂಕೆ ಸ್ಟಾಲಿನ್. ಈ ಸ್ಟಾಲಿನ್ ತುರ್ತು ಪರಿಸ್ಥಿತಿ ಮತ್ತು ಮೀಸಾವನ್ನು ಎದುರಿಸಿದವನು. ಈ ಐಟಿ ದಾಳಿಗಳ ಕಾರಣದಿಂದ ನಾನು ಹೆದರಿಕೊಂಡಿಲ್ಲ. ತಮ್ಮ ಮುಂದೆ ಮಂಡಿಯೂರಲು ನಾವು ಎಐಎಡಿಎಂಕೆ ಮುಖಂಡರಲ್ಲ ಎಂದು ಮೋದಿ ತಿಳಿದಿರಲಿ. ಇದು ಡಿಎಂಕೆ. ನಾನು ಕಲೈನಾರ್ ಕರುಣಾನಿಧಿ ಮಗ. ನಾವು ಇದಕ್ಕೆಲ್ಲ ಹೆದರುವುದಿಲ್ಲ' ಎಂದು ಸ್ಟಾಲಿನ್ ಹೇಳಿದ್ದಾರೆ.