ಅಧಿಕಾರಕ್ಕೆ ಬಂದರೆ ಜಯಲಲಿತಾ ನಿಗೂಢ ಸಾವಿನ ತನಿಖೆ: ಸ್ಟಾಲಿನ್ ಹೇಳಿಕೆ
ಚೆನ್ನೈ, ಅಕ್ಟೋಬರ್ 19: ಎಐಎಡಿಎಂಕೆ ಮುಖ್ಯಸ್ಥರಾಗಿದ್ದ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಪ್ರಕರಣದ ಕುರಿತು ಆದೇಶಿಸಲಾಗಿದ್ದ ತನಿಖೆಯ ಪ್ರಗತಿ ಬಗ್ಗೆ ಡಿಎಂಕೆ ಪ್ರಶ್ನೆ ಎತ್ತಿದೆ.
ಆಡಳಿತಾರೂಢ ಎಐಎಡಿಎಂಕೆ ಸರ್ಕಾರವು ಆರಂಭಿಸಿದ ತನಿಖೆ ಮೂರು ವರ್ಷ ಕಳೆದರೂ ಯಾವುದೇ ಸಂಗತಿಗಳನ್ನು ಭೇದಿಸಿಲ್ಲ. 2016ರ ಸೆಪ್ಟೆಂಬರ್ನಲ್ಲಿ ಜಯಲಲಿತಾ ಅವರನ್ನು ಅನಾರೋಗ್ಯದ ಕಾರಣ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 74 ದಿನಗಳ ಬಳಿಕ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಡಿ. 5ರಂದು ಮೃತಪಟ್ಟಿದ್ದರು.
ಫೇಸ್ಬುಕ್ ಇಂಡಿಯಾ VP ವಿರುದ್ಧ ಬಲವಂತದ ಕ್ರಮ ಬೇಡ: ಸುಪ್ರೀಂ ಕೋರ್ಟ್
ಅವರ ಸಾವಿನ ಸುತ್ತ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಅದರ ತನಿಖೆಗೆ ನೇಮಕವಾದ ಏಕ ನ್ಯಾಯಾಧೀಶರ ಆಯೋಗವು ಇದುವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಏಕೆ ಸಾಧ್ಯವಾಗಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಪ್ರಶ್ನಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಇದು ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಗುರಿಯಾಗಿರಿಸಿಕೊಂಡು ಸ್ಟಾಲಿನ್ ನೀಡಿರುವ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ 69 ವರ್ಷದ ಶಶಿಕಲಾ 2017ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರು ಮುಂದಿನ ವರ್ಷದ ಜನವರಿ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದ್ದಾರೆ.
ದೆಹಲಿ ಪತ್ರಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ನಿವೃತ್ತ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ನೇತೃತ್ವದ ಏಕ ಸದಸ್ಯ ಆಯೋಗವು 154 ಪ್ರತ್ಯಕ್ಷದರ್ಶಿಗಳೊಂದಿಗೆ ಮಾತನಾಡಿದೆ. ಸರ್ಕಾರಿ ವೈದ್ಯರು, ಅಪೋಲೋ ಮತ್ತು ಏಮ್ಸ್ ವೈದ್ಯರ ತಂಡ, ಇತರೆ ಅರೆ ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಶಶಿಕಲಾ ಮತ್ತು ಅವರ ಸಂಬಂಧಿಕರು ಸೇರಿದಂತೆ ರಾಜಕಾರಣಿಗಳಿಂದಲೂ ಹೇಳಿಕೆ ಪಡೆದಿದ್ದಾರೆ.
ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಸಿಹಿ ತಿನ್ನಲು ಆಸೆ ಪಡುತ್ತಿದ್ದದ್ದು, ಆಸ್ಪತ್ರೆಯ ನರ್ಸ್ಗಳೊಂದಿಗಿನ ಅವರ ಸಂಬಂಧ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಸ್ವಿಚ್ ಆಫ್ ಆದಂತಹ ಘಟನೆಗಳು ಸೇರಿದಂತೆ ಅನೇಕ ಆಸಕ್ತಿಕರ ಅಂಶಗಳನ್ನು ಅವರು ಕಂಡುಕೊಂಡಿದ್ದಾರೆ. ಆದರೆ ತನಿಖೆಗೆ ಅಂತಿಮ ರೂಪ ನೀಡಲು ಅವರಿಗೆ ಸಾಧ್ಯವಾಗಿಲ್ಲ.