ಹತ್ತು ವರ್ಷದ ಗುರಿ, ಏಳು ಭರವಸೆಗಳು: ಸ್ಟಾಲಿನ್ ಘೋಷಣೆ
ಚೆನ್ನೈ, ಮಾರ್ಚ್ 8: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕೊಟ್ಟರೆ, ಜನತೆಗೆ ಭರಪೂರ ಕೊಡುಗೆಗಳನ್ನು ನೀಡುವ ಭರವಸೆಯನ್ನು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಕೊಟ್ಟಿದ್ದಾರೆ. ತಿರುಚಿರಾಪಳ್ಳಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ತಮ್ಮ ಹತ್ತು ವರ್ಷಗಳ 'ವಿಷನ್ ಡಾಕ್ಯುಮೆಂಟ್' ಬಿಡುಗಡೆ ಮಾಡಿದ್ದಾರೆ.
ಈ 'ವಿಷನ್ ಡಾಕ್ಯುಮೆಂಟ್' ಆರ್ಥಿಕತೆ, ಕೃಷಿ, ಜಲ ನಿರ್ವಹಣೆ, ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಛತೆ, ನಗರಾಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ ಮತ್ತು ಸಾಮಾಜಿಕ ನ್ಯಾಯದ ಏಳು ವಲಯಗಳ ಕುರಿತಾಗಿದೆ.
ಕಾಂಗ್ರೆಸ್ಗೆ 25 ಸೀಟುಗಳನ್ನು ನೀಡಲು ಒಪ್ಪಿದ ಡಿಎಂಕೆ
ತಿರುಚಿಯಲ್ಲಿ ನೆರೆದಿದ್ದ ಭಾರಿ ಜನಸಮೂಹವನ್ನು ಉದ್ದೇಶಿಸಿದ ಮಾತನಾಡಿದ ಸ್ಟಾಲಿನ್, ತಮ್ಮ ಹತ್ತು ವರ್ಷದ ಯೊಜನೆ ಜಾರಿಯಾದರೆ ರಾಜ್ಯದ ಆರ್ಥಿಕತೆಯು 35 ಲಕ್ಷ ಕೋಟಿಗೂ ಅಧಿಕವಾಗಲಿದೆ. ಇದು ಪ್ರತಿ ವರ್ಷ 10 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಲಿದೆ. ಈ ಮೂಲಕ ನಿರುದ್ಯೋಗದ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲಿದೆ. ಜತೆಗೆ ತಲಾದಾಯವನ್ನು ವರ್ಷಕ್ಕೆ 4 ಲಕ್ಷ ರೂಪಾಯಿಗೆ ಹೆಚ್ಚಸಲಿದೆ ಎಂದು ಹೇಳಿದರು.
ಒಂದು ಕೋಟಿ ಜನರು ಬಡತನ ಮುಕ್ತ
ಈ ಹತ್ತು ವರ್ಷದ ಯೋಜನೆಯು ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಜನರನ್ನು ಬಡತನದ ಸ್ಥಿತಿಯಿಂದ ಮೇಲೆತ್ತಲಿದೆ. ಮುಂದಿನ ದಶಕದಲ್ಲಿ ಎರಡಂಕಿ ಆರ್ಥಿಕ ಬೆಳವಣಿಗೆ ಸಾಧಿಸುವುದು ಡಿಎಂಕೆಯ ಮೊದಲ ಗುರಿಯಾಗಿದೆ. ಇದು ಡಿಎಂಕೆಯನ್ನು ಮುನ್ನೆಡೆಸಿದ ಎಂ ಕರುಣಾನಿಧಿ, ಪಕ್ಷದ ಸಂಸ್ಥಾಪಕ ಸಿಎನ್ ಅಣ್ಣಾದುರೈ ಮತ್ತು ಪೆರಿಯಾರ್ ಇವಿ ರಾಮಸ್ವಾಮಿ ಹಾಗೂ ಕಮ್ಯುನಿಸ್ಟ್ ಆದರ್ಶಪ್ರಾಯವಾದ ಜೀವಾ ಅವರ ದೂರದೃಷ್ಟಿಗಳನ್ನು ಒಳಗೊಂಡಿದೆ ಎಂದರು.
ಗೃಹಿಣಿಯರಿಗೆ 1000 ರೂ ಮಾಸಿಕ ನೆರವು
ಡಿಎಂಕೆ ಅಧಿಕಾರಕ್ಕೆ ಬಂದರೆ ತಮಿಳುನಾಡಿನ ಪ್ರತಿ ಗೃಹಿಣಿಗೂ ಮಾಸಿಕ 1,000 ರೂ ಹಕ್ಕಿನ ಕಂತಿನ ನೆರವು ನೀಡಲಾಗುವುದು. ಇದರ ಪರಿಣಾಮ, ಎಲ್ಲ ಕುಟುಂಬಗಳೂ ಸಾರ್ವಜನಿಕ ವಿತರಣಾ ಮಳಿಗೆಗಳಿಂದ ಅಗತ್ಯ ಆಹಾರ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲಿದೆ ಎಂದು ಸ್ಟಾಲಿನ್ ವಿವರಿಸಿದರು. ಇದಕ್ಕೂ ಮುನ್ನ ಮಕ್ಕಳ್ ನೀಧಿ ಮಯ್ಯಮ್ ಮುಖ್ಯಸ್ಥ, ನಟ ಕಮಲ ಹಾಸನ್ ಕೂಡ ಇದೇ ರೀತಿಯ ಯೋಜನೆಗಳನ್ನು ಪ್ರಕಟಿಸಿದ್ದರು.
ಎಂ ಕರುಣಾನಿಧಿ ಮೊಮ್ಮಗ ಉದಯನಿಧಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜು
ಮನೆ ಮನೆಗೂ ನಲ್ಲಿ ನೀರು
ಮುಂದಿನ ಹತ್ತು ವರ್ಷಗಳಲ್ಲಿ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು ಲಭ್ಯವಾಗಲಿದೆ. ತಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯು ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವುದನ್ನು ಒಳಗೊಂಡಿದೆ. ಗುಡಿಸಿಲಿನಲ್ಲಿ ವಾಸಿಸುತ್ತಿರುವ ಶೇ 16.6ರಷ್ಟು ಜನಸಂಖ್ಯೆಯನ್ನು ಶೇ 5ಕ್ಕೆ ತಗ್ಗಿಸಲು ಹತ್ತು ವರ್ಷಗಳಲ್ಲಿ 9.75 ಲಕ್ಷ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲು ಡಿಎಂಕೆ ಬದ್ಧವಾಗಿದೆ ಎಂದು ಸ್ಟಾಲಿನ್ ತಿಳಿಸಿದರು.
ಎರಡು ಬೆಳೆ ವಿಸ್ತರಣೆ
ಅಧಿಕಾರಕ್ಕೆ ಬಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ದುಪ್ಪಟ್ಟು ಮಾಡಲಾಗವುದು. ಶೌಚಗುಂಡಿಗಳ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಲಾಗುವುದು. ಪ್ರಸ್ತುತ 10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಎರಡು ಬೆಳೆ ಬೆಳೆಯಲಾಗುತ್ತಿದೆ. ಅದನ್ನು ಒಂದು ದಶಕದೊಳಗೆ 20 ಲಕ್ಷಕ್ಕೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.