ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಕದಿರ್ ಗೆ ಜಯ
ವೆಲ್ಲೂರು (ತಮಿಳುನಾಡು), ಆಗಸ್ಟ್ 9: ದ್ರಾವಿಡ ಮುನ್ನೇಟ್ರ ಕಳಗಂನ (ಡಿಎಂಕೆ) ಡಿ. ಎಂ. ಕದಿರ್ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ 8 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಪಕ್ಷದ ಗೆಲುವಿನ ಲೆಕ್ಕಾಚಾರ 38ಕ್ಕೆ ತಲುಪಿದೆ. ಎಐಎಡಿಎಂಕೆ ಅಭ್ಯರ್ಥಿ ಶುಕ್ರವಾರ ಬೆಳಗ್ಗೆ ಮುನ್ನಡೆ ಕಾಯ್ದುಕೊಂಡಿದ್ದರು. ಆರಂಭದ ಕೆಲವು ಸುತ್ತುಗಳಲ್ಲಿ ಮುನ್ನಡೆಯಲ್ಲಿ ಕೂಡ ಇದ್ದರು.
ಅಂದ ಹಾಗೆ, ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಇಪ್ಪತ್ತೆಂಟು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ತಮಿಳುನಾಡಿನ ಇತರ ಲೋಕಸಭಾ ಕ್ಷೇತ್ರದ ಜತೆಗೆ ವೆಲ್ಲೂರಿಗೆ ಚುನಾವಣೆ ನಿಗದಿ ಆಗಿತ್ತು. ಆದಾಯ ತೆರಿಗೆ ದಾಳಿ ವೇಳೆ ಮತದಾರರಿಗೆ ಹಂಚಲು ರಾಜಕಾರಣಿಯೊಬ್ಬರ ಬಳಿ ಇದ್ದ ದೊಡ್ಡ ಮೊತ್ತವನ್ನು ವಶಪಡಿಸಿಕೊಳ್ಳಲಾಗಿತ್ತು. ಡಿಎಂಕೆ ನಾಯಕರೊಬ್ಬರ ಬಳಿ ಹತ್ತು ಕೋಟಿ ವಶಪಡಿಸಿಕೊಳ್ಳಲಾಗಿತ್ತು.
ಡಿಎಂಕೆ ಸೇರಿದ ಟಿಟಿವಿ ದಿನಕರನ್ ಆಪ್ತ ತಮಿಳ್ ಸೆಲ್ವನ್
ಡಿಎಂಕೆ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟವು ಲೋಕಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿತ್ತು. ಮೂವತ್ತೆಂಟರಲ್ಲಿ 37 ಸ್ಥಾನಗಳಲ್ಲಿ ಜಯಿಸಿತ್ತು. ಏಪ್ರಿಲ್ 18ನೇ ತಾರೀಕು ಚುನಾವಣೆ ನಡೆದಿತ್ತು. ಇನ್ನು ಎರಡು ವರ್ಷಗಳ ನಂತರ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೆ ಮುನ್ನ ಲೋಕಸಭೆ ಚುನಾವಣೆ ಫಲಿತಾಂಶ ಡಿಎಂಕೆ ನೇತೃತ್ವದ ವಿಪಕ್ಷಗಳಿಗೆ ವಿಶ್ವಾಸ ಮೂಡಿಸಿದೆ.
ವೆಲ್ಲೂರು ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಎಐಎಡಿಎಂಕೆ ಪರವಾಗಿ ಹಾಗೂ ಎಂ.ಕೆ. ಸ್ಟಾಲಿನ್ ಡಿಎಂಕೆ ಪರವಾಗಿ ಪ್ರಚಾರ ನಡೆಸಿದ್ದರು.