ನ್ಯಾಯಾಲಯದ ಮೊರೆ ಹೋದ ಟಿಟಿವಿ ದಿನಕರನ್ ಬಣದ ಶಾಸಕರು
ಚೆನ್ನೈ, ಸೆಪ್ಟೆಂಬರ್ 19: ಟಿಟಿವಿ ದಿನಕರನ್ ಬಣಕ್ಕೆ ಸೇರಿದ 18 ಶಾಸಕರನ್ನು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಸೋಮವಾರ ಅನರ್ಹಗೊಳಿಸಿದ್ದಾರೆ. ಇದನ್ನು ಟಿಟಿವಿ ದಿನಕರನ್ ಬಣದ ಶಾಸಕರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ತಮಿಳುನಾಡು: 100ಕ್ಕೂ ಅಧಿಕ ಶಾಸಕರಿಂದ ರಾಜಿನಾಮೆ ?
ಶಾಸಕರ ಪರ ಹಿರಿಯ ವಕೀಲ ಪಿ.ಆರ್ ರಾಮನ್ ಮದ್ರಾಸ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಕೈಗೆತ್ತಿಕೊಂಡಿರುವ ಮದ್ರಾಸ್ ಹೈಕೋರ್ಟ್, ತುರ್ತು ಪ್ರಕರಣ ಎಂದು ಪರಿಗಣಿಸಿ ವಿಚಾರಣೆಯನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಬುಧವಾರ ಶಾಸಕರ ಅನರ್ಹತೆ ಪ್ರಕರಣ ವಿಚಾರಣೆಗೆ ಬರಲಿದ್ದು ಅದಕ್ಕೂ ಮೊದಲ ಸರಿಯಾಗಿ ಮತ್ತೊಮ್ಮೆ ಪಿಟಿಷನ್ ಸಲ್ಲಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.
ಕಾನೂನು ತಜ್ಞರ ಪ್ರಕಾರ ನ್ಯಾಯಾಲಯ ಅನರ್ಹತೆಯನ್ನು ಎತ್ತಿ ಹಿಡಿಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಭಿನ್ನಾಭಿಪ್ರಾಯವನ್ನು ಅಭಿವ್ಯಕ್ತಗೊಳಿಸುವುದು ಪಕ್ಷ ವಿರೋಧಿ ಚಟುವಟಿಕೆಯಾಗುವುದಿಲ್ಲ. ಮತ್ತು ಇದರ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸುವುದು ಸರಿಯಾದ ಮಾನದಂಡವಲ್ಲ. ವಿಪ್ ಉಲ್ಲಂಘಿಸಿದಲ್ಲಿ ಅಥವಾ ಶಾಸಕರೇ ಸ್ವಯಂ ಪ್ರೇರಿತವಾಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದಲ್ಲಿ ಮಾತ್ರ ಪಕ್ಷ ವಿರೋಧಿ ಕಾನೂನು ಜಾರಿಗೊಳಿಸಬಹುದು ಎಂಬುದು ಕಾನೂನು ಪಂಡಿತರ ವಿವರಣೆಯಾಗಿದೆ.
ಟಿಟಿವಿ ದಿನಕರನ್ ಬಣದ ಶಾಸಕರ ವಿಚಾರದಲ್ಲಿ ಇದ್ಯಾವುದೂ ನಡೆದಿಲ್ಲ. ಇಲ್ಲಿ ನಡೆದಿದ್ದು ಕೇವಲ ಭಿನ್ನಾಭಿಪ್ರಾಯದ ಅಭಿವ್ಯಕ್ತಿ ಮಾತ್ರ. ಆದರೆ ಇದರಿಂದ ಒಂದು ಲಾಭವೆಂದರೆ ಶಾಸಕರನ್ನು ಕೋರ್ಟ್ ಗೆ ಎಳೆದು ಎಐಎಡಿಎಂಕೆಯ ಭಿನ್ನಾಭಿಪ್ರಾಯನ್ನು ಇನ್ನೊಂದಷ್ಟು ಸಮಯ ಎಳೆದಾಡಬಹುದು. ಈ ಮೂಲಕ ಅಧಿಕಾರದಲ್ಲಿ ಒ ಪನ್ನೀರ್ ಸೆಲ್ವಂ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕಾಲ ತಳ್ಳಬಹುದಾಗಿದೆ.
ನ್ಯಾಯಾಲಯದಲ್ಲಿ ಸ್ಪೀಕರ್, ನನಗೆ ಶೆಡ್ಯೂಲ್ 10ರ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸದೆ ಬೇರೆ ಆಯ್ಕೆ ಇರಲಿಲ್ಲ. ಮುಖ್ಯಮಂತ್ರಿಗಳ ಮೇಲೆ ನಂಬಿಕೆ ಇಲ್ಲ ಎಂದು ಶಾಸಕರು ಹೇಳಿದ್ದರು ಎಂದು ವಾದಿಸಬಹುದು.
ಕೊನೆಗೆ ನ್ಯಾಯಾಲಯದ ತೀರ್ಪಿನ ಮೇಲೆ ವಿಶ್ವಾಸ ಮತ ಯಾಚನೆ ಮಾಡಬೇಕಾ ಬೇಡ್ವಾ ಎಂಬುದು ನಿರ್ಧಾರವಾಗಲಿದೆ.
ಕರ್ನಾಟಕದಲ್ಲೂ
ಹೀಗೆಯೇ
ನಡೆದಿತ್ತು
ಯಡಿಯೂರಪ್ಪ
ಸರಕಾರದ
ಅವಧಿಯಲ್ಲಿ
ಬಾಲಚಂದ್ರ
ಜಾರಕಿಹೊಳಿ
ನೇತೃತ್ವದಲ್ಲಿದ್ದ
16
ಶಾಸಕರನ್ನು
ಸ್ಪೀಕರ್
ಕೆ.ಜಿ
ಬೋಪಯ್ಯ
ಪಕ್ಷ
ವಿರೋಧಿ
ಚಟುವಟಿಕೆ
ಹೆಸರಿನಲ್ಲಿ
ಅನರ್ಹಗೊಳಿಸಿದ್ದರು.
ಇದನ್ನು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿದ ಶಾಸಕರು ತಮಗೆ ಯಡಿಯೂರಪ್ಪ ಮೇಲೆ ನಂಬಿಕೆ ಇಲ್ಲ. ಪಕ್ಷದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದರಿಂದ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದರು. ಕೊನೆಗೆ 16 ಶಾಸಕರ ಅನರ್ಹತೆ ರದ್ದಾಗಿತ್ತು.