ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾ
ಚೆನ್ನೈ, ಸೆಪ್ಟೆಂಬರ್ 10: ದೇಶದಲ್ಲಿನ ಸದ್ಯದ ಆರ್ಥಿಕ ಸವಾಲುಗಳಿಗೆ ಸರಕಾರ ಸ್ಪಂದಿಸುತ್ತಿದೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಏರಿಳಿತಗಳು ಸಾಮಾನ್ಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚೆನ್ನೈನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಡಿಪಿಯಲ್ಲಿ ಇಳಿಕೆ ಆಗುವುದು ಪ್ರಗತಿಯ ಚಕ್ರದ ಒಂದು ಭಾಗ ಮತ್ತು ಇದಕ್ಕೆ ಸ್ಪಂದಿಸಬೇಕು ಎಂಬ ಬಗ್ಗೆ ಕೂಡ ಸರಕಾರಕ್ಕೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ 5%; ಆರು ವರ್ಷದಲ್ಲೇ ಕನಿಷ್ಠ
"ಜಿಡಿಪಿಗೆ ಉತ್ತೇಜನ ನೀಡಲು ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಲ್ಲ. ನಮ್ಮ ಗಮನ ಪೂರ್ತಿಯಾಗಿ ಈಗ ಮುಂದಿನ ತ್ರೈಮಾಸಿಕಗಳಲ್ಲಿ ಹೇಗೆ ಜಿಡಿಪಿ ಹೆಚ್ಚಿಸಬೇಕು ಎಂಬ ಬಗ್ಗೆ ಇದೆ" ಎಂದು ತಿಳಿಸಿದ್ದಾರೆ. ಮೂಲಸೌಕರ್ಯದ ಮೇಲೆ ಎಷ್ಟು ವೆಚ್ಚ ಮಾಡಲು ಸಾಧ್ಯವಿದೆಯೋ ಅಷ್ಟನ್ನು ಮಾಡಲು ಯತ್ನಿಸುತ್ತೇವೆ ಎಂದು ಕೂಡ ಆಕೆ ಹೇಳಿದ್ದಾರೆ.
ವಾಹನ ಬಿಡಿ ಭಾಗಗಳ ಕೈಗಾರಿಕೆ ಹಾಗೂ ಮನೆ ಖರೀದಿಗಾಗಿ ಸರಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಚಿಂತಿಸಿದೆ. ಆರ್ಥಿಕ ಹಿಂಜರಿತದ ವೇಳೆ ವಾಹನ ವಲಯದ ಅಗತ್ಯಗಳಿಗೆ ಸ್ಪಂದಿಸುವ ಬಗ್ಗೆ ಸರಕಾರಕ್ಕೆ ತಿಳಿದಿದೆ ಎಂದು ಅವರು ತಿಳಿಸಿದ್ದು, ವಾಹನ ವಲಯದ ಉತ್ತೇಜನಕ್ಕೆ ಜಿಎಸ್ ಟಿ ದರ ತಗ್ಗಿಸುತ್ತೀರಾ ಎಂಬ ಪ್ರಶ್ನೆಗೆ, ಆ ವಿಚಾರವನ್ನು ಜಿಎಸ್ ಟಿ ಕೌನ್ಸಿಲ್ ಮಾಡಲಿದೆ ಎಂದಿದ್ದಾರೆ.