ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ!
Recommended Video
ಚೆನ್ನೈ, ಆಗಸ್ಟ್ 08: ರಾಜಕೀಯ ದ್ವೇಷ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ಪರಸ್ಪರ ಕೆಸರೆರಚಾಟ ಎಲ್ಲಕ್ಕೂ ಈಗ ಫುಲ್ ಸ್ಟಾಪ್! ಇದ್ದಾಗ ಅದೆಷ್ಟೇ ಕಿತ್ತಾಡಿದರೂ ಕೊನೆಗೂ ತಮಿಳುನಾಡಿನ ಇಬ್ಬರು ದಿಗ್ಗಜರು, ಮಾಜಿ ಮುಖ್ಯಮಂತ್ರಿಗಳು ಒಂದಾಗಲಿದ್ದಾರೆ... ಅದೂ ಮರೀನಾಬೀಚಿನ ಮಣ್ಣಿನಲ್ಲಿ ಮಣ್ಣಾಗಿ!
ಹೌದು, ಬದುಕಿರುವಷ್ಟು ದಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ದ್ವೇಷದಿಂದಾಗಿ ಹಾವು-ಮುಂಗುಸಿಗಳಂತಿದ್ದ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಮತ್ತು ಎಂ ಕರುಣಾನಿಧಿ ಅವರು ಕೊನೆಗೂ ಎಲ್ಲ ಮರೆತು ಒಂದಾಗಿದ್ದಾರೆ! ಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರವನ್ನು ತಮಿಳುನಾಡಿನ ಮರೀನಾ ಬೀಚ್ ನಲ್ಲಿ ನೆರವೇರಿಸಲು ಮದ್ರಾಸ್ ಹೈಕೋರ್ಟ್ ಒಪ್ಪಿಗೆ ನೀಡುತ್ತಿದ್ದಂತೆಯೇ ಮಡುಗಟ್ಟಿದ ದುಃಖದ ನಡುವಲ್ಲೂ ಅವರ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಇಂದು ಸಂಜೆಯ ಹೊತ್ತಿಗೆ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ.
LIVE: ಕರುಣಾನಿಧಿ ಅಗಲಿಕೆ: ಮರೀನಾ ಬೀಚ್ ನಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ
ಎಐಎಡಿಎಂಕೆ ನಾಯಕಿ ಜಯಲಲಿತಾ ಇಹಲೋಕ ತ್ಯಜಿಸಿದಾಗ, 'ಅವರು ಅಕಾಲಿಕ ಮರಣವನ್ನಪ್ಪಿದ್ದಾರೆ. ಆದರೂ ಅವರ ಜನಪ್ರಿಯತೆ ಎಂದಿಗೂ ಮರೆಯಾಗುವುದಿಲ್ಲ. ಅವರ ಹೆಸರು ಅಜರಾಮರ' ಎನ್ನುವ ಮೂಲಕ ಜಯಾ ಅಭಿಮಾನಿಗಳ ಕಣ್ಣಲ್ಲಿ ನೀರುಕ್ಕಿಸಿದ್ದರು ಕರುಣಾನಿಧಿ. ಆದರೆ ಇದೀಗ ಜಯಲಲಿತಾ ಅವರು ಇದ್ದಲ್ಲಿಗೆ ತಾವೂ ತೆರಳಿದ್ದಾರೆ ತಲೈವಾರ್... ಕನಿಷ್ಠ ಪಕ್ಷ ಸ್ವರ್ಗದಲ್ಲಾದರೂ ಈ ಇಬ್ಬರು ದಿಗ್ಗಜರು ಸಾಮರಸ್ಯದಿಂದಿರಲಿ ಅನ್ನೋದು ಅಭಿಮಾನಿಗಳ ಹಾರೈಕೆ!
ದ್ರಾವಿಡ ಚಳವಳಿಯ ಹುಟ್ಟು
ದ್ರಾವಿಡ ಕಳಗಂ ಹೆಸರಿನ ಸಂಘಟನೆಯ ಮೂಲಕ ಬ್ರಾಹ್ಮಣ, ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿದ್ದ ಅಣ್ಣಾ ದೊರೈ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ, ಪೆರಿಯಾರ್ ರಾಮಸ್ವಾಮಿ ಅವರು ದ್ರಾವಿಡ ಮುನ್ನೇತ್ರ ಕಳಗಂ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯದ ಸಂದರ್ಭದಲ್ಲಿಪ್ರತ್ಯೇಕ ಪಾಕಿಸ್ತಾನ ಹುಟ್ಟುಕೊಂಡಂತೆ ಪ್ರತ್ಯೇಕ ದ್ರಾವಿಡ ರಾಷ್ಟ್ರವೂ ಹುಟ್ಟಿಕೊಳ್ಳಬೇಕು ಎಂಬುದು ಪೆರಿಯಾರ್ ವಾದವಾಗಿತ್ತು. ಇದನ್ನು ಅಣ್ಣಾ ಒಪ್ಪಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿ ಡಿಎಂ ಕೆ ಉದಯವಾಯಿತು.
ಕರುಣಾನಿಧಿ -ಜಯಲಲಿತಾ ಭಿನ್ನಾಭಿಪ್ರಾಯ
ಕರುಣಾನಿಧಿ, ಎಂ ಜಿ ರಾಮಚಂದ್ರನ್ ಸೇರಿದಂತೆ ಹಲವು ಮುಖಂಡರು ಡಿಎಂಕೆಯಲ್ಲೇ ಗುರುತಿಸಿಕೊಂಡರೂ, ಕರುಣಾನಿಧಿ ಅವರ ಗುರು ಅಣ್ಣಾ ದೊರೈ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯದಿಂದಾಗಿ ಎಂಜಿ ಆರ್ ಡಿಎಂಕೆ ಯಿಂದ ಹೊರಬಂದು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅನ್ನು ಸ್ಥಾಪಿಸಿದರು. ಇದೇ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಆಗಿ ಬದಲಾಯಿತು. ಎಂಜಿಆರ್ ಅವರ ನಿಧನಾನಂತರ ಜಯಲಲಿತಾ ಅವರು ಈ ಪಕ್ಷವನ್ನು ಮುನ್ನಡೆಸಿದರು.
ಮರೀನಾ ಬೀಚ್ನಲ್ಲಿಯೇ ಕರುಣಾನಿಧಿ ಸಂಸ್ಕಾರಕ್ಕೆ ಡಿಎಂಕೆ ಪಟ್ಟುಹಿಡಿದಿರುವುದೇಕೆ?
ಒಂದಾಗಲಿದ್ದಾರೆ ಮರೀನಾ ಬೀಚ್ ನ ಮಣ್ಣಲ್ಲಿ!
ಎಂಜಿಆರ್ ಅವರ ಮರಣಾನಂತರ ತಮಿಳುನಾಡಿನ ರಾಜಕೀಯದ ಇಬ್ಬರು ದಿಗ್ಗಜರೆಂದರೆ ಎಂ ಕರುಣಾನಿಧಿ ಮತ್ತು ಜಯಲಲಿತಾ. ಡಿಎಂಕೆ-ಎಐಎಡಿಎಂಕೆ ಎರಡೂ ವೈರಿ ಪಕ್ಷಗಳಾಗಿ ಅಂದಿನಿಂದಲೂ ಅಸ್ತಿತ್ವದಲ್ಲಿವೆ. ಎಂ ಕರುಣಾನಿಧಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾದಾಗ ವಿರೋಧ ಪಕ್ಷ ನಾಯಕಿಯಾಗಿದ್ದ ಜಯಲಲಿತಾ ಅವರು ಸಾಕಷ್ಟು ಬಾರಿ ಕರುಣಾನಿಧಿ ಅವರ ಕಾಲೆಳೆದಿದ್ದಾರೆ, ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಕರುಣಾನಿಧಿ ಅವರೂ ಅದೇ ಕೆಲಸ ಮಾಡಿದ್ದಾರೆ. ಆದರೆ ಕೊನೆಗೆ ಇಬ್ಬರೂ ಈ ಎಲ್ಲ ವೈಮನಸ್ಯ ಮರೆತು ಒಂದಾಗಲಿದ್ದಾರೆ. ಮರೀನಾ ಬೀಚ್ ನ ಮಣ್ಣಲ್ಲಿ!
ಎರಡೇ ವರ್ಷದಲ್ಲಿ ತಮಿಳು ರಾಜಕೀಯದಲ್ಲಿ ನಿರ್ವಾತ!
ಅದು ಡಿಸೆಂಬರ್ 5 2016... ತಮಿಳುನಾಡಿನ ಜನತೆಯ ಪಾಲಿನ ಅಮ್ಮಾ, ಜಯಲಲಿತಾ ಇನ್ನೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ದಿನ. ಅದಾಗಿ ಎರಡು ವರ್ಷವೂ ಆಗಿಲ್ಲ, ಅದಾಗಲೇ ತಮಿಳುನಾಡು ಇನ್ನೋರ್ವ ಕಾಯಕಯೋಗಿ, ಅವಿಶ್ರಾಂತ ನಾಯಕನನ್ನು ಕಳೆದುಕೊಂಡಿದೆ. ತಮಿಳುನಾಡಿನ ರಾಜಕೀಯದದಲ್ಲೀಗ ಅಕ್ಷರಶಃ ನಿರ್ವಾತದ ಯುಗ! ಜಯಲಲಿತಾ ಮರಣದ ನಂತರ ಎಐಎಡಿಎಂಕೆ ಅನಾಥವಾದಂತೆ, ಕರುಣಾನಿಧಿ ಅಗಲಿಕೆಯಿಂದ ಡಿಎಂಕೆ ಅನಾಥಭಾವ ಅನುಭವಿಸುತ್ತಿದೆ. ಅವರಿಬ್ಬರ ಹೊರತಾಗಿ ತಮಿಳುನಾಡಿನಲ್ಲಿ ಆ ಪರಿ ಜನಪ್ರಿಯತೆ ಗಳಿಸಬಲ್ಲ ಮತ್ತೋರ್ವ ನಾಯಕರು ಹುಟ್ಟುತ್ತಾರಾ?!