ಪ್ರಿಯ ಮೋದಿ, ನಿಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿ; ಡಿಎಂಕೆ ಹೊಸ ಅಭಿಯಾನ
ಕನ್ಯಾಕುಮಾರಿ, ಏಪ್ರಿಲ್ 2: ಇನ್ನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ-ಎಐಎಡಿಎಂಕೆ ಮೈತ್ರಿ ಹಾಗೂ ಡಿಎಂಕೆ-ಕಾಂಗ್ರೆಸ್ ಮೈತ್ರಿ ನಡುವೆ ಭಾರೀ ಜಿದ್ದಾಜಿದ್ದಿ ಇದ್ದು, ಚುನಾವಣೆಗೂ ನಾಲ್ಕು ದಿನ ಮುನ್ನ ಡಿಎಂಕೆ ಟ್ವಿಟ್ಟರ್ನಲ್ಲಿ ಹೊಸದೊಂದು ಅಭಿಯಾನವನ್ನೇ ಆರಂಭಿಸಿದೆ. ಈ ಚುನಾವಣಾ ಪ್ರಚಾರದ ವೈಖರಿ ಭಾರೀ ವೈರಲ್ ಕೂಡ ಆಗಿದೆ.
ಇದರಲ್ಲಿ ಡಿಎಂಕೆ ಅಭ್ಯರ್ಥಿಗಳು ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ವಿಶೇಷ ವಿನಂತಿ ಮಾಡಿದ್ದಾರೆ. "ಪ್ರಿಯ ಮೋದಿ, ಎಐಎಡಿಎಂಕೆ ಪರವಾಗಿ ನೀವು ಪ್ರಚಾರ ಮಾಡಿ, ಆಗಲಾದರೂ ಎಐಎಡಿಎಂಕೆ ಹಾಗೂ ನಮ್ಮ ಗೆಲುವಿನ ಅಂತರ ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದು ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ.
ಧರಮಪುರಿಯಿಂದ ತಿರುವಣ್ಣಾಮಲೈ ಮತ್ತು ಕಾಂಚೀಪುರಂನಿಂದ ಕೃಷ್ಣಗಿರಿ ಪಶ್ಚಿಮದವರೆಗಿನ ನಾಯಕರೆಲ್ಲರೂ ಈ ಡಿಎಂಕೆ ಸಂಘಟಿತ ಐಟಿ ಸೆಲ್ ಅಭಿಯಾನದಲ್ಲಿ ಟ್ವೀಟ್ ಮಾಡಿದ್ದಾರೆ.
ಇದು ಮೊದಲು ಆರಂಭವಾಗಿದ್ದು ಡಿಎಂಕೆ ಪರಿಸರ ವಿಭಾಗದ ಕಾರ್ಯದರ್ಶಿ ಕಾರ್ತಿಕೇಯ ಶಿವಸೇನಾಪತಿಯಿಂದ.
ಜಲ್ಲಿಕಟ್ಟು ನಿಷೇಧದ ಹಿಂದೆ ಕಾಂಗ್ರೆಸ್, ಡಿಎಂಕೆ ಕೈವಾಡ: ಮೋದಿ
"ಪ್ರಿಯ ಪ್ರಧಾನಿ ನರೇಂದ್ರ ಮೋದಿ, ಎಸ್.ಪಿ.ವೇಲುಮಣಿ ಅವರ ಪರ ಪ್ರಚಾರ ಮಾಡಿ. ನಾನು ಅವರ ವಿರುದ್ಧ ಡಿಎಂಕೆ ಅಭ್ಯರ್ಥಿಯಾಗಿದ್ದೇನೆ. ನೀವು ಅವರಿಗೆ ಬೆಂಬಲ ನೀಡಿದರೆ ನನಗೆ ಹೆಚ್ಚು ಅನುಕೂಲ. ಧನ್ಯವಾದ" ಎಂದು ಅವರು ಬರೆದುಕೊಂಡಿದ್ದರು. ನಂತರ ಇದನ್ನೇ ಹಲವು ಡಿಎಂಕೆ ಅಭ್ಯರ್ಥಿಗಳು ಬಳಸಿಕೊಂಡಿದ್ದಾರೆ. ಡಿಎಂಕೆ ನಾಯಕರಾದ ಎಸ್.ಎಂ.ರಾಜಾ, ಇ.ವಿ.ವೇಲು, ಅಂಬೇತ್ ಕುಮಾರ್, ಎ ಮಹಾರಾಜನ್, ಅನಿತಾ ರಾಧಾಕೃಷ್ಣನ್ ಹಾಗೂ ವೈ ಪ್ರಕಾಶ್ ಅವರು ಇದೇ ಪೋಸ್ಟ್ನೊಂದಿಗೆ ಟ್ಯಾಗ್ ಮಾಡಿದ್ದಾರೆ.
ಡಿಎಂಕೆ ನಾಯಕರು ಮಾತ್ರವಲ್ಲ, ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀಪೆರಂಬದೂರ್, ಸೆಲ್ವಪೆರುಂತೆಂಗೈ ಕೂಡ ಇದೇ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಇದೀಗ ಟ್ವಿಟ್ಟರ್ನಲ್ಲಿ ಹೊಸ ಪ್ರಚಾರದ ರೀತಿಯಾಗಿ ಗಮನ ಸೆಳೆಯುತ್ತಿದೆ.