ತಮಿಳುನಾಡಿನ 'ದಾವೂದ್ ಇಬ್ರಾಹಿಂ' ಶ್ರೀಧರ್ ಆತ್ಮಹತ್ಯೆ
ಚೆನ್ನೈ, ಅಕ್ಟೋಬರ್ 05: ಕಳ್ಳಭಟ್ಟಿ ವ್ಯವಹಾರ, ಭೂ ಅಕ್ರಮ ಸೇರಿದಂತೆ ಹತ್ತು ಹಲವು ಕುಕೃತ್ಯಗಳಲ್ಲಿ ತೊಡಗಿ ತಮಿಳುನಾಡಿನ 'ದಾವೂದ್ ಇಬ್ರಾಹಿಂ' ಎನಿಸಿಕೊಂಡಿದ್ದ ಶ್ರೀಧರ್ ಧನಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಂಬೋಡಿಯಾದಲ್ಲಿ ನೆಲೆ ಕಂಡುಕೊಂಡಿದ್ದ ಧನಪಾಲ್ ಸೈನಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚೆನ್ನೈ ಪೊಲೀಸರು ಪ್ರಕಟಿಸಿದ್ದಾರೆ.
ಇಂಟರ್ ಪೋಲ್ ಸೇರಿದಂತೆ ಹಲವು ಏಜೆನ್ಸಿಗಳು ಈತನ ಹುಡುಕಾಟದಲ್ಲಿದ್ದವು, ಧನ್ ಪಾಲ್ ನ ಭಾರತೀಯ ಪಾಸ್ ಪೋರ್ಟ್ ಕೂಡಾ ರದ್ದಾಗಿತ್ತು.
ಸೈನಡ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಕಾಂಚೀಪುರಂನಲ್ಲಿರುವ ತನ್ನ ಸಹಚರರಿಗೆ ಫೋನ್ ಕರೆ ಮಾಡಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ಕಾಟ ತಡೆಯಲು ಆಗುತ್ತಿಲ್ಲ ನಾನು ಊರಿಗೆ ಬರಬೇಕಿತ್ತು. ಈಗ ಸಾವನ್ನಪ್ಪುತ್ತಿದ್ದೇನೆ ಎಂದು ಹೇಳಿದ್ದ. ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಧನ್ ಪಾಲ್ ಮೃತಪಟ್ಟಿದ್ದ ಎಂದು ಕಾಂಬೋಡಿಯಾದ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ದುಬೈನಲ್ಲಿ ತೈಲ ದಂಧೆಯಲ್ಲಿ ಭಾಗಿಯಾಗಿದ್ದ ಧನ್ ಪಾಲ್ ಅಲ್ಲಿಂದ ಬಲವಂತವಾಗಿ ಶ್ರೀಲಂಕಾಕ್ಕೆ ಪರಾರಿಯಾಗಿದ್ದ. ಇತ್ತೀಚೆಗೆ ಕಾಂಬೋಡಿಯಾದಲ್ಲಿ ಅಡಗುತಾಣ ಕಂಡು ಕೊಂಡಿದ್ದ.7 ಕೊಲೆ ಕೇಸ್ ಸೇರಿದಂತೆ 43ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಧನ್ ಪಾಲ್ 2013ರಲ್ಲಿ ಭಾರತ ತೊರೆದ ಬಳಿಕ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.