ಅಂತರಪಂಗಡ ಮದುವೆ; 2 ವರ್ಷದ ನಂತರ ದಂಪತಿಗೆ 2.5 ಲಕ್ಷ ರೂ ದಂಡ?
ಚೆನ್ನೈ, ಜನವರಿ 19: ಅಂತರ ಪಂಗಡದಲ್ಲಿ ಮದುವೆಯಾದ ಕಾರಣಕ್ಕೆ ದಲಿತ ದಂಪತಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿ, ಎರಡು ವರ್ಷದ ನಂತರ ಗ್ರಾಮಕ್ಕೆ ಹಿಂದಿರುಗಿದ ಅವರಿಗೆ ಎರಡೂವರೆ ಲಕ್ಷ ರೂಪಾಯಿ ದಂಡ ವಿಧಿಸಿರುವ ಸಂಗತಿ ತಮಿಳುನಾಡಿನ ತಿರುಪತೂರಿನಲ್ಲಿ ಬೆಳಕಿಗೆ ಬಂದಿದೆ.
ಕನಕರಾಜ್ (26) ಹಾಗೂ ಜಯಪ್ರಿಯಾ (23) ಎಂಬುವರು ದಲಿತರಾಗಿದ್ದು, 2018ರಲ್ಲಿ ಮದುವೆಯಾಗಿದ್ದರು. ಇಬ್ಬರದ್ದೂ ಜಾತಿ ಒಂದಾಗಿದ್ದರು ಪಂಗಡ ಬೇರೆಯಾಗಿತ್ತು. ಈ ಕಾರಣಕ್ಕೆ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ನಿರಾಕರಣೆ ನಡುವೆಯೇ ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದರು.
ವಿವಾಹ ದಿನದಂದು ದಲಿತ ಮನೆಗೆ ಬೆಳಕಾದ ಉಡುಪಿಯ ನವದಂಪತಿಗಳು
ಡ್ರೈವರ್ ಆಗಿರುವ ಕನಕರಾಜ್ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ನಂತರ ತಮ್ಮ ಊರಾದ ಪುಲ್ಲೂರಿಗೆ ಹೆಂಡತಿಯೊಂದಿಗೆ ಮರಳಿದ್ದರು. ಆಗ ಕಾಪ್ ಪಂಚಾಯತ್ ಇವರು ಗ್ರಾಮ ಪ್ರವೇಶ ಪಡೆದಿದ್ದಕ್ಕೆ ಎರಡೂವರೆ ಲಕ್ಷ ರೂ ದಂಡ ವಿಧಿಸಿದ್ದಾಗಿ ಕನಕರಾಜ್ ದೂರು ದಾಖಲಿಸಿದ್ದಾರೆ.
"ಜಾತಿಯಿಂದ ಹೊರಗಿನವರನ್ನು ಮದುವೆಯಾದರೆ ದಂಡ ಹಾಕುವುದು ಇಲ್ಲಿ ಮಾಮೂಲು. ಆದರೆ ಆ ದಂಡ ಐದು ಸಾವಿರದಿಂದ ಹತ್ತು ಸಾವಿರದವರೆಗೆ ಇರುತ್ತದೆ. ಆದರೆ ನನಗೆ ಎರಡೂವರೆ ಲಕ್ಷ ರೂ ಹಾಕಲಾಗಿದೆ. ನಾನು ಈ ದಂಡ ಕಟ್ಟುವುದಿಲ್ಲ. ಇದೇ ಕಾರಣಕ್ಕೆ ಊರಿನ ಉತ್ಸವದಲ್ಲಿ ನನಗೆ ದೇವಸ್ಥಾನ ಪ್ರವೇಶಿಸಲೂ ಅವಕಾಶ ನೀಡಿಲ್ಲ" ಎಂದು ದೂರಿದ್ದಾರೆ.
ತಿಮಾಂಪೆಟ್ಟೈ ಪೊಲೀಸ್ ಠಾಣೆಯಲ್ಲಿ ಕನಕರಾಜ್ ದೂರು ದಾಖಲಿಸಿದ್ದು, ದೂರಿನ ನಂತರ ದಂಡ ಹಿಂತೆಗೆದುಕೊಳ್ಳಲಾಗಿದೆ ಎಂದು ಕನಕರಾಜ್ ತಿಳಿಸಿದ್ದಾರೆ. ಆದರೆ ನಾವು ದಂಡ ಹಾಕಿಲ್ಲ. ಮದುವೆಗೆ ಸಂಬಂಧಿಸಿದಂತೆ ಅವರ ಕುಟುಂಬಗಳ ನಡುವೆ ಜಗಳವಾಗಿದೆ. ಆ ಮಟ್ಟದ ದಂಡವನ್ನು ಯಾರಿಗೆ ಕಟ್ಟಲು ಸಾಧ್ಯವಾಗುತ್ತದೆ ಎಂದು ಕಾಪ್ ಪಂಚಾಯತ್ ಕೂಡ ಪ್ರಶ್ನೆ ಮಾಡಿದೆ.