ಮಧ್ಯರಾತ್ರಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ: ಸ್ಥಳಾಂತರ ಕಾರ್ಯ ಮುಂದುವರಿಕೆ
ಚೆನ್ನೈ, ನವೆಂಬರ್ 25: ತಮಿಳುನಾಡು ಮತ್ತು ಪುದುಚೆರಿಯಲ್ಲಿ ತೀವ್ರ ಸ್ವರೂಪದ ಚಂಡಮಾರುತದ ಬಿರುಗಾಳಿಯು ಬೀಸುತ್ತಿದ್ದು, ಮುಂದಿನ 12 ಗಂಟೆಗಳಲ್ಲಿ ಇದು ಮತ್ತಷ್ಟು ಪ್ರಬಲಗೊಳ್ಳಲಿದೆ. ತಮಿಳುನಾಡು ಮತ್ತು ಪುದುಚೆರಿಯ ಕರಾವಳಿಯ ಭೂಭಾಗಗಳಲ್ಲಿ ನಡುವೆ ಬುಧವಾರ ಮಧ್ಯರಾತ್ರಿ ಅಥವಾ ಗುರುವಾರ ಬೆಳಗಿನ ವೇಳೆಗೆ ಚಂಡಮಾರುತ ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯರಾತ್ರಿ ಅಥವಾ ನಸುಕಿನ ವೇಳೆಗೆ ಕಾರೈಕಲ್ ಮತ್ತು ಮಾಮಲ್ಲಪುರಂ ಮಧ್ಯೆ ಚಂಡಮಾರುತ ಧರೆಗೆ ಅಪ್ಪಳಿಸಲಿದ್ದು, ಭಾರಿ ಬಿರುಗಾಳಿ ಮಳೆಯನ್ನು ನಿರೀಕ್ಷಿಸಲಾಗಿದೆ. ಚೆನ್ನೈ ನಗರದ ಪ್ರಮುಖ ಕುಡಿಯುವ ನೀರಿನ ಮೂಲಗಳಲ್ಲಿ ಒಂದಾದ ಚೆಂಬಾರಂಬಕ್ಕಮ್ ಜಲಾಶಯದಿಂದ ಬುಧವಾರ ಮಧ್ಯಾಹ್ನ ಸುಮಾರು 1,000 ಕ್ಯೂಸೆಕ್ಸ್ ನೀರನ್ನು ಅಡ್ಯಾರ್ ನದಿಗೆ ಬಿಡುಗಡೆ ಮಾಡಲಾಗಿದೆ.
ನಿವಾರ್ ಸೈಕ್ಲೋನ್: ಚೆನ್ನೈಗೆ ಇಂಡಿಗೋ ವಿಮಾನ ಸಂಚಾರ ರದ್ದು
ನದಿ ತೀರದಲ್ಲಿ ವಾಸಿಸುತ್ತಿರುವ ನೂರಾರು ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದಿಂದಲೇ ಸುರಿಯುತ್ತಿರುವ ಭಾರಿ ಮಳೆಯಿಂದ ಚೆನ್ನೈ ಹಾಗೂ ನೆರೆಯ ಜಿಲ್ಲೆಗಳಲ್ಲಿನ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಜನರು ಮೊಣಕಾಲಿನವರೆಗೂ ತುಂಬಿದ್ದ ನೀರಿನ ನಡುವೆಯೇ ಸಾಗಿದರು. ಕೆಳಮಟ್ಟದ ಪ್ರದೇಶಗಳಲ್ಲಿರುವ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಚೆನ್ನೈ ಸೇರಿದಂತೆ 13 ಜಿಲ್ಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಚೆನ್ನೈನಿಂದ 30 ಕಿಮೀ ದೂರದಲ್ಲಿರುವ ಚೆಂಬಾರಂಬಕ್ಕಮ್ ಜಲಾಶಯದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಈ ಆದೇಶ ಹೊರಡಿಸಿದ್ದಾರೆ. 2015ರಲ್ಲಿ ಚೆಂಬಾರಂಬಕ್ಕಮ್ ಜಲಾಶಯದಿಂದ ಅಡ್ಯಾರ್ ನದಿಗೆ ಏಕಾಏಕಿ ನೀರುಬಿಟ್ಟಿದ್ದು ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಮುನ್ನೆಚ್ಚರಿಕೆಯಿಂದ ಮೊದಲೇ ನೀರನ್ನು ಬಿಡುಗಡೆ ಮಾಡಲಾಗಿದೆ.
ನಿವಾರ್ ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಆರ್ಭಟ ಶುರು
ಎನ್ಡಿಆರ್ಎಫ್ ಪಡೆಗಳು ಈಗಾಗಲೇ 13 ಜಿಲ್ಲೆಗಳಿಂದ 3,948 ಮಕ್ಕಳು ಸೇರಿದಂತೆ 24,166 ಜನರನ್ನು 315 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿವೆ. ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಗಂಟೆಗೆ 80-90 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 100 ಕಿಮೀ ವೇಗದಲ್ಲಿ ಸುಳಿರ್ಗಾಳಿ ಸುತ್ತುತ್ತಿದೆ. ಪುದುಚೆರಿ, ಕುಡ್ಡಲೋರ್, ಮೈಲಾದುರೈ, ಕಾರೈಕಲ್, ವಿಳ್ಳುಪುರಂ ಮತ್ತು ಚೆಂಗಲ್ಪೇಟ್ಗಳಲ್ಲಿ ಚಂಡಮಾರುತ ಹಾದುಹೋಗುವಾಗ ಗಂಟೆಗೆ 130-145 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.