ಪ್ರವಾಹ ಭೀತಿ: ಫ್ಲೈ ಓವರ್ ಮೇಲೆ ವಾಹನ ಪಾರ್ಕ್ ಮಾಡಿದ ಜನ
ಚೆನ್ನೈ, ನವೆಂಬರ್ 26: ತಮಿಳು ನಾಡು ಮತ್ತು ಪುದುಚೆರಿಯ ನಡುವೆ ನಿವಾರ್ ಚಂಡಮಾರುತ ಅಪ್ಪಳಿಸಿದ್ದು ಭಾರಿ ಮಳೆ ಸುರಿಸುತ್ತಿದೆ. ಜತೆಗೆ ವೇಗವಾಗಿ ಬೀಸುತ್ತಿರುವ ಗಾಳಿ ಜನ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಲ್ಲಿನ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 2015ರಲ್ಲಿ ಉಂಟಾಗಿದ್ದ ಪ್ರಳಯಾಂತಕ ಪ್ರವಾಹದ ಅನುಭವ ಹೊಂದಿರುವ ಜನರು ತಮ್ಮ ವಾಹನಗಳು ನೀರಿನಲ್ಲಿ ಮುಳುಗಿ ಕೆಡದಂತೆ ಮತ್ತು ಕೊಚ್ಚಿಕೊಂಡು ಹೋಗದಂತೆ ತಡೆಯಲು ಈ ಬಾರಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಮತ್ತೊಂದು ಭಾರಿ ಪ್ರವಾಹ ಸ್ಥಿತಿಯ ಭೀತಿ ನಿರ್ಮಾಣವಾಗಿದ್ದು, ಜನರು ತಮ್ಮ ವಾಹನಗಳನ್ನು ಸುರಕ್ಷಿತ ಜಾಗವೆಂದು ಫ್ಲೈ ಓವರ್ಗಳ ಮೇಲೆ ನಿಲ್ಲಿಸಿದ್ದಾರೆ. 2015ರಲ್ಲಿ ಚೆನ್ನೈ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ನೂರಾರು ಮಂದಿ ತಮ್ಮ ವಾಹನಗಳನ್ನು ಕಳೆದುಕೊಂಡಿದ್ದರು. ನಾಲ್ಕು ಚಕ್ರದ ವಾಹನಗಳು ನೀರಿನಲ್ಲಿ ತೇಲಿಹೋಗಿದ್ದವು.
ಪುದುಚೆರಿಯಲ್ಲಿ ಅಪ್ಪಳಿಸಿದ ನಿವಾರ್: ಚಂಡಮಾರುತ ಕೊಂಚ ದುರ್ಬಲ
ಹೀಗಾಗಿ ನಗರದ ದಕ್ಷಿಣ ಭಾಗದ ಮಡಿಪಕ್ಕಮ್ನಲ್ಲಿ ಅನೇಕ ನಿವಾಸಿಗಳು ವೆಲಚೆರಿ ಸಮೀಪದ ರೈಲು ನಿಲ್ದಾಣದ ಬಳಿಯ ಮೇಲ್ಸೇತುವೆ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಇಡೀ ಮೇಲ್ಸೇತುವೆ ವಾಹನಗಳಿಂದ ತುಂಬಿ ಹೋಗಿವೆ.
ನಗರದ ಎಲ್ಲ 22 ಸಬ್ವೇಗಳಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ ಮತ್ತು ಕೆಳಮಟ್ಟದ ಪ್ರದೇಶಗಳಲ್ಲಿನ ಸುಮಾರು 52 ಸ್ಥಳಗಳಲ್ಲಿ ನೀರು ಹೊರಹಾಕಲು ಅಧಿಕ ಸಾಮರ್ಥ್ಯ ಮೋಟಾರ್ಗಳನ್ನು ಬಳಸಲಾಗುತ್ತಿದೆ ಎಂದು ಚೆನ್ನೈ ಪಾಲಿಕೆ ತಿಳಿಸಿದೆ.