ಪುದುಚೆರಿಯಲ್ಲಿ ಅಪ್ಪಳಿಸಿದ ನಿವಾರ್: ಚಂಡಮಾರುತ ಕೊಂಚ ದುರ್ಬಲ
ಚೆನ್ನೈ, ನವೆಂಬರ್ 26: ದಕ್ಷಿಣ ಭಾರತದಲ್ಲಿ ಬಹುತೇಕ ಕಡೆ ನಡುಕ ಹುಟ್ಟಿಸಿರುವ 'ನಿವಾರ್' ಚಂಡಮಾರುತ ಪುದುಚೆರಿಗೆ ಅಪ್ಪಳಿಸಿದೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಪುದುಚೆರಿ ಸಮೀಪದ ಕರಾವಳಿಯನ್ನು ಹಾದುಹೋದ ಚಂಡಮಾರುತ ಗುರುವಾರ ನಸುಕಿನ 2.30ರ ಸುಮಾರಿಗೆ ಧರೆಗೆ ಅಪ್ಪಳಿಸಿದೆ. ಆದರೆ ಅತಿ ತೀವ್ರ ಚಂಡಮಾರುತದ ಬಿರುಗಾಳಿಯು ದುರ್ಬಲಗೊಂಡಿದ್ದು, ತೀವ್ರ ಚಂಡಮಾರುತದ ಬಿರುಗಾಳಿಯಾಗಿ ಬದಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪುದುಚೆರಿಯ 30 ಕಿಮೀ ಉತ್ತರಕ್ಕೆ ಹಾಗೂ ಚೆನ್ನೈನಿಂದ 115 ಕಿಮೀ ದಕ್ಷಿಣದಲ್ಲಿ ಮರಕ್ಕಣಂ ಕೇಂದ್ರದಲ್ಲಿ ಚಂಡಮಾರುತ ಅಪ್ಪಳಿಸಿದೆ.
ಇದರಿಂದ ಚಂಡಮಾರುತದ ರಭಸಕ್ಕೆ ಉಂಟಾಗುವ ಹಾನಿಯ ಪ್ರಮಾಣ ಕೊಂಚ ತಗ್ಗುವ ನಿರೀಕ್ಷೆಯಿದೆ. ಪುದುಚೆರಿಯ ಈಶಾನ್ಯ ವಲಯದಲ್ಲಿ ಬೀಸುತ್ತಿರುವ ಗಾಳಿ ಮೂರು ಗಂಟೆಗಳಲ್ಲಿ ಕ್ರಮೇಣ 65-75 ಕಿಮೀ ವೇಗಕ್ಕೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಪುದುಚೆರಿಯ ಈಶಾನ್ಯ ಭಾಗದಲ್ಲಿ ಗಾಳಿಯು ಗಂಟೆಗೆ 100-110 ಕಿಮೀ ವೇಗದಲ್ಲಿ ಬೀಸುತ್ತಿದ್ದು, ಈಗಲೂ ಅಪಾಯ ಕಡಿಮೆಯಾಗಿಲ್ಲ. ಇದುವರೆಗೂ ಯಾವುದೇ ಸೋವು ನೋವಿನ ವರದಿಯಾಗಿಲ್ಲ. ಚಂಡಮಾರುತದ ಪರಿಣಾಮವಾಗಿ ಎರಡು ದಿನದಿಂದ ಭಾರಿ ಮಳೆಯಾಗುತ್ತಿತ್ತು. ಚಂಡಮಾರುತ ಅಪ್ಪಳಿಸುವ ವೇಳೆಗೆ ಅದರ ಪರಿಣಾಮ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿತ್ತು. ಆದರೆ ಇದುವರೆಗೂ ಅಂತಹ ಭೀಕರ ಸ್ಥಿತಿ ನಿರ್ಮಾಣವಾಗಿಲ್ಲ. ಮುಂದಿನ ಆರುಗಂಟೆಗಳ ಬಳಿಕ ಮಳೆ ಮತ್ತು ಗಾಳಿ ತೀವ್ರತೆ ಕಡಿಮೆಯಾಗಲಿದೆ ಎನ್ನಲಾಗಿದೆ.
#WATCH Tamil Nadu: Mahabalipuram braves strong winds, landfall process of #CycloneNivar continues.
— ANI (@ANI) November 25, 2020
Centre of Nivar moved NW with a speed of 16 kmph during past 6 hrs, lying 45 km E-NE of Cuddalore & 30 km east of Puducherry. It'll cross coast near Puducherry within next 2 hours. pic.twitter.com/pDqambd8Fs
ಕೆಲವು ಭಾಗಗಳಲ್ಲಿ ಗೋಡೆ ಕುಸಿತದ ಪ್ರಕರಣಗಳು ವರದಿಯಾಗಿವೆ. ನಿವಾರ್ ವಾಯವ್ಯ ದಿಕ್ಕಿನಡೆಗೆ ಚಲಿಸಲಿದೆ. ಚಂಡಮಾರುತದ ಕೇಂದ್ರ ಭಾಗವು ಭೂಮಿಗೆ ಅಪ್ಪಳಿಸುವಾಗ ದುರ್ಬಲವಾಗಿದ್ದರೂ ಅದರ ಕೆಲವು ಭಾಗ ಇನ್ನೂ ಸಮುದ್ರ ಮೇಲ್ಭಾಗದಲ್ಲಿದೆ. ಅಲ್ಲಿನ ಗಾಳಿಯು ವೇಗವಾಗಿಯೇ ಇದೆ. ಹೀಗಾಗಿ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.