ನಿವಾರ್ ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಆರ್ಭಟ ಶುರು
ಚೆನ್ನೈ, ನವೆಂಬರ್ 25: 'ನಿವಾರ್' ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಯ ಕರಾವಳಿ ಭಾಗಗಳತ್ತ ವೇಗವಾಗಿ ಚಲಿಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಮಾಡುವ ಆತಂಕ ಮೂಡಿಸಿದೆ. ಗಂಟೆಗೆ 100-110 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಭಾರಿ ಮಳೆಯಾಗಿದೆ. ಸೈಕ್ಲೋನ್ ಇನ್ನೂ ನಗರ ಭಾಗಕ್ಕೆ ಅಪ್ಪಳಿಸುವ ಮುನ್ನವೇ ಮಳೆಯ ಆರ್ಭಟ ಜೋರಾಗಿದೆ. ಬುಧವಾರ ಮಧ್ಯಾಹ್ನದ ಬಳಿಕ ಚಂಡಮಾರುತವು ತಮಿಳು ಮತ್ತು ಪುದುಚೆರಿಯ ಕರಾವಳಿಯನ್ನು ಹಾದುಹೋಗಲಿದೆ. ರಭಸದಿಂದ ಬೀಸುವ ಗಾಳಿ ಮಳೆಯನ್ನು ತಂದು ಸುರಿಸಲಿದೆ. ಗಂಟೆಗೆ 145ಕಿಮೀ ವೇಗದವರೆಗೆ ಮಾಮಲ್ಲಪುರಂ ಮತ್ತು ಕಾರೈಕಲ್ ನಡುವೆ ಚಂಡಮಾರುತವು ಭಾರಿ ಪ್ರಮಾಣದಲ್ಲಿ ಅಪ್ಪಳಿಸಲಿದೆ.
ಇಂದಿನಿಂದ 'ನಿವಾರ್' ಆರ್ಭಟ: ಬೆಂಗಳೂರಲ್ಲೂ ಭಾರಿ ಮಳೆ ಸಾಧ್ಯತೆ
ಮಂಗಳವಾರ ಬೆಳಿಗ್ಗೆ 8.30ರಿಂದ ಬುಧವಾರ ಬೆಳಿಗ್ಗೆ 5.30ರ ಅವಧಿಯಲ್ಲಿಯೇ ಚೆನ್ನೈನ ಮತ್ತು ಮೀನಬಕ್ಕಂನಲ್ಲಿ 120 ಮಿಮೀ ಮಳೆ ಸುರಿದಿದೆ. ನುಂಗಂಬಕ್ಕಮ್ನಲ್ಲಿ 145 ಮಿಮೀ ಮಳೆ ಸುರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆಂಬಾರಂಬಕ್ಕಮ್ ಜಲಾಶಯದಿಂದ ಸುಮಾರು 1,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಚೆನ್ನೈ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಒಳಹರಿವು ಈಗಾಗಲೇ ಹೆಚ್ಚಳವಾಗಿದೆ. ಮುಂದೆ ಓದಿ.
ನಿವಾರ್ ಚಂಡಮಾರುತ: ಚೆನ್ನೈನ ಮೂರು ಬಂದರುಗಳು ಬಂದ್, ಹೈ ಅಲರ್ಟ್
ಅನಾಹುತದ ಎಚ್ಚರಿಕೆ
ಈಗಾಗಲೇ ತಮಿಳುನಾಡು ಮತ್ತು ಪುದುಚೆರಿಯ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ಇದು ಇನ್ನೆರಡು ದಿನಗಳ ಕಾಲ ಮತ್ತಷ್ಟು ಆರ್ಭಟಿಸಲಿದೆ. ಮಳೆಯಿಂದ ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅನೇಕ ಮರಗಳು ಧರೆಗುರುಳುವ, ಭೂಕುಸಿತ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ. ಮಳೆ ಗಾಳಿಯ ತೀವ್ರತೆಗೆ ಕಟ್ಟಡ ಕುಸಿತ, ವಿದ್ಯುತ್ ಸಂಪರ್ಕ ಕಡಿತ, ದೂರವಾಣಿ ಸಂಪರ್ಕಗಳ ಕಡಿತಗಳು ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ರೈಲು, ಬಸ್ ಸ್ಥಗಿತ
ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಈಗಾಗಲೇ ಪರಿಸ್ಥಿತಿಯನ್ನು ಎದುರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮಿಳುನಾಡಿನಲ್ಲಿ ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಪುಡುಕೊಟ್ಟೈ, ನಾಗಪಟ್ಟಿಣಂ, ಕುಡ್ಡಲೋರ್, ವಿಳ್ಳುಪುರಂ, ತಂಜಾವೂರ್, ಚೆಂಗಲ್ಪೇಟ್ ಮತ್ತು ತಿರುವಳ್ಳೂರ್ಗಳಲ್ಲಿ ಬಸ್ ಸೇವೆಗಳನ್ನು ಮಂಗಳವಾರದಿಂದಲೇ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ರೈಲ್ವೆ ಕೂಡ ನವೆಂಬರ್ 24-26ರವರೆಗೆ ಅನೇಕ ರೈಲುಗಳ ಸಂಚಾರವನ್ನು ನಿಲ್ಲಿಸಿದೆ.
ಅಂಗಡಿ ಮುಂಗಟ್ಟು ಬಂದ್
ಪುದುಚೆರಿಯಲ್ಲಿ ಮಂಗಳವಾರ ಸಂಜೆಯಿಂದ ಗುರುವಾರದವರೆಗೆ ಸಾರ್ವಜನಿಕರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಔಷಧ, ಪೆಟ್ರೋಲ್-ಡೀಸೆಲ್ ಮತ್ತು ದಿನಸಿ ಸಾಮಗ್ರಿಗಳಂತಹ ಅಗತ್ಯ ವಸ್ತುಗಳ ಸೇವೆ ಹೊರತಾಗಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
|
ಈ ವರ್ಷದ ನಾಲ್ಕನೇ ಚಂಡಮಾರುತ
ನಿವಾರ್ ಚಂಡಮಾರುತವು ಈ ವರ್ಷ ಉತ್ತರ ಹಿಂದೂ ಮಹಾಸಾಗರದಲ್ಲಿ ರೂಪಗೊಳ್ಳುತ್ತಿರುವ ನಾಲ್ಕನೇ ಚಂಡಮಾರುತವಾಗಿದೆ. ಮೊದಲ ಮೂರು ಚಂಡಮಾರುಗಳಲ್ಲಿ ಸೈಕ್ಲೋನ್ ಗಟಿ ನವೆಂಬರ್ 22ರಂದು ಸೊಮಾಲಿಯಾ ಮೇಲೆ ಅಪ್ಪಳಿಸಿತ್ತು, ಅಂಫಾನ್ ಚಂಡಮಾರುತ ಪೂರ್ವ ಭಾರತದಲ್ಲಿ ಮೇ ತಿಂಗಳಲ್ಲಿ ಆರ್ಭಟಿಸಿತ್ತು. ಹಾಗೆಯೇ ನಿಸರ್ಗ ಚಂಡಮಾರುತ ಮಹಾರಾಷ್ಟ್ರದಲ್ಲಿ ತನ್ನ ಪ್ರಕೋಪ ಪ್ರದರ್ಶಿಸಿತ್ತು.