ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿ ಹೇಳಿದ್ದೇನು?
ಚೆನ್ನೈ, ಡಿಸೆಂಬರ್ 1: ಭಾರತದಲ್ಲಿ ಎರಡು ಮತ್ತು ಮೂರನೇ ಕ್ಲಿನಿಕಲ್ ಪ್ರಯೋಗ ನಡೆಸುತ್ತಿರುವ ಆಕ್ಸ್ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಗೆ ಚೆನ್ನೈನ ಸ್ವಯಂ ಸೇವಕ ಭರ್ಜರಿ ಶಾಕ್ ನೀಡಿದ್ದಾರೆ.
ಭಾರತದಲ್ಲಿ ಈ ಲಸಿಕೆಯ ಉತ್ಪಾದನೆ ಹಾಗೂ ಪರೀಕ್ಷೆಯ ಜವಾಬ್ದಾರಿ ಪಡೆದಿರುವ ಸೆರಂನ ಈ ಲಸಿಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದರೆ ಈ ಬಗ್ಗೆ ಜಾಗೃತಿವಹಿಸುವ ಬದಲು ಸ್ವಯಂ ಸೇವಕರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ.ಸ್ವಯಂ ಸೇವಕರಾಗಿದ್ದರೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸೆರಮ್ ಲಸಿಕೆ ಪ್ರಯೋಗ ನಿಲ್ಲಿಸಲು ಕಾರಣವೇ ಇಲ್ಲ: ಕೇಂದ್ರ ಸರ್ಕಾರ
ಹಾಗೆಯೇ ಚೆನ್ನೈನ ಈ ಯುವಕ ಸೆರಂ ಕಂಪನಿ ವಿರುದ್ಧ 5 ಕೋಟಿ ರೂ ಪರಿಹಾರ ನಿಧಿಗೆ ಒತ್ತಾಯಿಸಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೆರಂ ಸಂಸ್ಥೆ ಕೂಡ ಸ್ವಯಂ ಸೇವಕನ ವಿರುದ್ಧ ಬರೋಬ್ಬರಿ ನೂರು ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದೆ ಈ ಕುರಿತು 'ಇಂಡಿಯಾ ಟುಡೆ' ವರದಿ ಮಾಡಿದೆ.
ಸ್ವಯಂಸೇವಕನ ಆರೋಪವೇನು?
ಅಕ್ಟೋಬರ್ 1 ರಂದು ಕೊವಿಶೀಲ್ಡ್ ಲಸಿಕೆಯ ಪ್ರಯೋಗಕ್ಕೆ ನಾನು ಒಳಗಾಗಿದ್ದೆ, ಕುಟುಂಬದ ವಿರೊಧದ ನಡುವೆಯೂ ಸ್ವಯಂಸೇವಕನಾಗುವ ಸಾಹಸ ಮಾಡಿದ್ದೆ, ಆದರೆ ಕೊವಿಶೀಲ್ಡ್ ಪಡೆದ ಎಂಟು ಹತ್ತು ದಿನದ ಬಳಿಕ ನನ್ನ ಆರೋಗ್ಯದಲ್ಲಿ ಏರುಪೇರು ಶುರುವಾಗಿದೆ. ನರ ದೌರ್ಬಲ್ಯದ ಜತೆಗೆ ಮಾನಸಿಕವಾಗಿಯೂ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಇದರಿಂದ ಆ ಅವಧಿಯಲ್ಲಿನ ಸಾಕಷ್ಟು ವಿಚಾರಗಳು ನನಗೆ ನೆನಪಿಲ್ಲದಂತಾಗಿದೆ. ಈಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಅವಧಿಯಲ್ಲಿ ನನಗೆ ಸೂಕ್ತ ಚಿಕಿತ್ಸೆ ನೀಡುವುದು ಸರ್ಕಾರ ಹಾಗೂ ಕಂಪನಿಯ ಜವಾಬ್ದಾರಿಯಾಗಿದೆ. ಭವಿಷ್ಯದಲ್ಲಿ ಇದು ಪ್ರಭಾವಿ ಲಸಿಕೆಯಾಗಬೇಕು ಎನ್ನುವುದು ನನ್ನ ಕಾಳಜಿಯಾಗಿದೆ. ಆದರೆ ಈ ಬಗ್ಗೆ ಜಾಗೃತಿವಹಿಸುವ ಬದಲಿಗೆ ನನ್ನನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ವಯಂ ಸೇವಕ ಆರೋಪಿಸಿದ್ದಾರೆ.
ಸೆರಂ ಪ್ರತಿವಾದವೇನು?
ನಿಯಮದ ಪ್ರಕಾರ ಇಲ್ಲಾ ಮುನ್ನೆಚ್ಚರಿಕೆಯೊಂದಿಗೆ ಕೊವಿಶೀಲ್ಡ್ ನೀಡಲಾಗಿದ. ಇದರಲ್ಲಿ ಯಾವುದೇ ಚ್ಯುತಿಯಾಗಿಲ್ಲ, ಸ್ವಯಂ ಸೇವಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಅನಪೇಕ್ಷಿತವಾಗಿ ಈ ಬಗ್ಗೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಪ್ರಭಾವಿ ಲಸಿಕೆಯೊಂದಿಗೆ ಸಂಸ್ಥೆ ಹೊರಬರುತ್ತಿದೆ. ಇದರಲ್ಲಿ ಯಾವುದೇ ಚ್ಯುತಿಯಾಗುವ ಸಾಧ್ಯತೆ ಇಲ್ಲ ಎಂದು ಸೆರಂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
100ಕೋಟಿ ರೂ ಮಾನನಷ್ಟ ಮೊಕದ್ದಮೆ
ಸೆರಂ ಸಂಸ್ಥೆಯು ಸರ್ಕಾರ ಹಾಗೂ ಅಂತಾರಾಷ್ಟ್ರೀಯ ನಿಯಮಗಳಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಆದಾಗ್ಯೂ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ದುರುದ್ದೇಶಪೂರ್ವಕ ಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಂಸ್ಥೆಯ ಘನತೆಗೆ ಚ್ಯುತಿಯಾಗುತ್ತಿದೆ. ಹೀಗಾಗಿ ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿರುವ ಸ್ವಯಂ ಸೇವಕನ ವಿರುದ್ಧ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುತ್ತಿದೆ. ಈ ಕುರಿತು ಈಗಾಗಲೇ ಲೋಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ಸೆರಂ ಸಂಸ್ಥೆ ತಿಳಿಸಿದೆ.
ನೋಟಿಸ್ ಬಂದಿಲ್ಲ, ಬಂದರೆ ಹೋರಾಟಕ್ಕೆ ಸಿದ್ಧ
ಸೆರಂ ಸಂಸ್ಥೆಯಿಂದ ಯಾವುದೇ ಲೀಗಲ್ ನೋಟಿಸ್ ಬಂದಿಲ್ಲ, ಒಂದೊಮ್ಮೆ ಮಾಧ್ಯಮಗಳಲ್ಲಿನ ವರದಿಯಂತೆ ನೋಟಿಸ್ ಬಂದರೆ ಕಾನೂನು ಮೂಲಕ ಉತ್ತರ ನೀಡುತ್ತೇವೆ,ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸ್ವಯಂಸೇವಕರ ಪರ ವಕೀಲ ತಿಳಿಸಿದ್ದಾರೆ.
ಸೆರಂ ಲಸಿಕೆ ನಿಲ್ಲಿಸಲು ಕಾರಣವಿಲ್ಲ
ಭಾರತದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ಲಸಿಕೆಯ ಪ್ರಯೋಗವನ್ನು ಸ್ಥಗಿತಗೊಳಿಸಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆಕ್ಸ್ಫರ್ಡ್ ವಿವಿ-ಸೆರಮ್ ಸಂಸ್ಥೆ ಸಹಯೋಗದ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟ ತಮಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಾಗಿದೆ. ಹೀಗಾಗಿ ದೇಶದಲ್ಲಿ ಲಸಿಕೆ ಪ್ರಯೋಗ, ಉತ್ಪಾದನೆ ಮತ್ತು ಹಂಚಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಚೆನ್ನೈನ ಸ್ವಯಂ ಸೇವಕರೊಬ್ಬರು ಆರೋಪಿಸಿದ್ದರು. ಇದರ ಪರಿಶೀಲನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಲಸಿಕೆಯ ಪ್ರಯೋಗ ಅಬಾಧಿತ ಎಂದು ತಿಳಿಸಿದೆ.