ಮುದುಮಲೈ ಅಭಯಾರಣ್ಯದ ಶಿಬಿರದಲ್ಲಿದ್ದ ಆನೆಗಳಿಗೆ ಕೊರೊನಾ ಪರೀಕ್ಷೆ
ಚೆನ್ನೈ ಜೂನ್ 8: ಕೊರೊನಾವೈರಸ್ ಮನುಷ್ಯರಲ್ಲಿ ಮಾತ್ರವಲ್ಲ ಮೃಗಾಲಯಗಳಲ್ಲಿರುವ ಸಿಂಹಗಳಲ್ಲಿಯೂ ಪತ್ತೆಯಾಗಿರುವುದು ಹೊಸ ಸವಾಲಾಗಿದೆ. ಇತ್ತೀಚೆಗೆ ಭಾರತದ ಎರಡು ಅಭಯಾರಣ್ಯಗಳಲ್ಲಿ ಸಿಂಹಗಳು ಕೊರೊನಾವೈರಸ್ಗೆ ತುತ್ತಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಮುದುಮಲೈ ಅಭಯಾರಣ್ಯದಲ್ಲಿ ಕ್ಯಾಂಪ್ನಲ್ಲಿರುವ ಆನೆಗಳಿಗೆ ಈಗ ಕೊರೊನಾ ಪರೀಕ್ಷೆ ನಡೆಸಲು ಮಾದರಿಗಳನ್ನು ಸಂಗ್ರಹಿಸಲಾಗಿದೆ.
ತಮಿಳುನಾಡು ಅರಣ್ಯ ಸಚಿವ ಕೆ ರಾಮಚಂದ್ರನ್ ಎಲ್ಲಾ ಆನೆಗಳ ಮಾದರಿಯನ್ನು ಪರೀಕ್ಷೆ ನಡೆಸಲು ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆನೆಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಉತ್ತರ ಪ್ರದೇಶದ ಇಜತ್ನಗರದಲ್ಲಿರುವ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುತ್ತದೆ.
ಮೃಗಾಲಯದಲ್ಲಿ ಸಿಂಹ ಸಾವು, ಕೊರೊನಾ ಶಂಕೆ: 9 ಸಿಂಹಗಳಲ್ಲಿ ವೈರಸ್ ದೃಢ
ಈ ಹಿನ್ನೆಲೆಯಲ್ಲಿ ಮುದುಮಲೈ ಕ್ಯಾಂಪ್ನಲ್ಲಿರುವ ಎಲ್ಲಾ 28 ಆನೆಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವುಗಳನ್ನು ಒಂದು ಬದಿಯಲ್ಲಿ ಮಲಗಿಸಿ ಸೊಂಡಿಲು ಹಾಗೂ ಬಾಯಿಯಿಂದ ದ್ರವಗಳನ್ನು ತೆಗೆದು ಮಾದರಿ ಸಂಗ್ರಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.
ಕಳೆದ ಗುರುವಾರ ತಮಿಳುನಾಡಿನ ವಂದಲೂರು ಪ್ರಾಣಿಸಂಗ್ರಹಾಲಯದಲ್ಲಿ ಕೊರೊನಾವೈರಸ್ನಿಂದಾಗಿ ಸಿಂಹವೊಂದು ಮೃತಪಟ್ಟಿತ್ತು. ಅಲ್ಲದೆ ಪ್ರಾಣಿಸಂಗ್ರಹಾಲಯದಲ್ಲಿದ್ದ 11 ಆನೆಗಳ ಪೈಕಿ 9 ಸಿಂಹಗಳಿಗೆ ಕೊರೊನಾವೈರಸ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಆನೆಗಳಿಗೆ ಕೊರೊನಾ ಪರೀಕ್ಷೆಯನ್ನು ನಡೆಸಲು ಆದೇಶವನ್ನು ನೀಡಲಾಗಿದೆ.
ತಮಿಳುನಾಡು ಮಾತ್ರವಲ್ಲದೆ ಹೈದರಾಬಾದ್ನ ನೆಹರೂ ಮೃಗಾಲಯದಲ್ಲಿಯೂ ಸಿಂಹಗಳು ಕೊರೊನಾವೈರಸ್ಗೆ ತುತ್ತಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ಪ್ರಾಣಿಗಳಲ್ಲಿ ಕೊರೊನಾವೈರಸ್ ಪತ್ತೆಯಾಗಿತ್ತು. ಈಗ ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡಿನಲ್ಲಿ ಆನೆಗಳ ಕೊರೊನಾ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗಿದೆ.