ಸಿಬಿಐ ವಿಶ್ವಾಸಾರ್ಹತೆ ಕುಂದುತ್ತಿದೆ: ಹೈಕೋರ್ಟ್ ಅಭಿಪ್ರಾಯ
ಚೆನ್ನೈ, ಡಿಸೆಂಬರ್ 17: ಸಿಬಿಐ ವಿಚಾರಣೆ ನಡೆಸುವ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಕಳವಳಕಾರಿ ಸಂಗತಿ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ. ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ.
ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಇಳಿಕೆಯಾಗುತ್ತಿದೆ. ಜತೆಗೆ 'ವೈಟ್ ಕಾಲರ್' ಅಪರಾಧಗಳಲ್ಲಿನ ಅಪರಾಧಿಗಳು ಶಿಕ್ಷೆಗೊಳಗಾಗದೆ ಬಿಡುಗಡೆಯಾಗುತ್ತಿದ್ದಾರೆ. ಹೀಗೇಕೆ ಆಗುತ್ತಿದೆ? ಸಿಬಿಐ ಸಂಗ್ರಹಿಸುತ್ತಿರುವ ಸಾಕ್ಷ್ಯಗಳು ಸಮರ್ಪಕವಾಗಿಲ್ಲ ಎಂದು ಅನೇಕ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಹೇಳಿವೆ ಎಂದು ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸಿಬಿಐ ವಶದಲ್ಲಿದ್ದ 45 ಕೋಟಿ ಮೌಲ್ಯದ 103 ಕೆ.ಜಿ. ತೂಕದ ಚಿನ್ನ ನಾಪತ್ತೆ!
ಇಂತಹ ಕಳವಳಕಾರಿ ಸನ್ನಿವೇಶ ಉಂಟಾಗಬಾರದಿತ್ತು. ಏಕೆಂದರೆ ಸಿಬಿಐ ಬಹು ಪರಿಣತರ ಸಂಸ್ಥೆಯಾಗಿದ್ದು, ಇದು ಅತ್ಯಂತ ಸಮರ್ಪಕ ತನಿಖೆ, ಪ್ರಬಲ ಸಾಕ್ಷ್ಯಗಳನ್ನು ಹುಡುಕುವ ಮೂಲಕ ಅಪರಾಧಿಯನ್ನು ಪತ್ತೆಹಚ್ಚಿ ಆತನಿಗೆ ಶಿಕ್ಷೆ ವಿಧಿಸುವಂತೆ ಮಾಡುತ್ತದೆ ಎಂಬ ನಂಬಿಕೆ ಸಾಮಾನ್ಯವಾಗಿದೆ ಎಂದು ಕೋರ್ಟ್ ಹೇಳಿದೆ. ಮುಂದೆ ಓದಿ.
ಹೇಗೆ ನೇಮಿಸಲಾಗುತ್ತದೆ?
ಅನೇಕ ಪ್ರಕರಣಗಳಲ್ಲಿ ತನಿಖೆಯು ಹಾದಿ ತಪ್ಪಿವೆ. ಇದು ಸಾಮಾನ್ಯ ಅಭಿಪ್ರಾಯವಾಗಿದೆ. ಸಿಬಿಐನಲ್ಲಿರುವ ಅಧಿಕಾರಿಗಳನ್ನು ಯಾವ ರೀತಿ ನೇಮಕ ಮಾಡಲಾಗುತ್ತದೆ? ಸಿಬಿಐನಲ್ಲಿರುವ ಅನೇಕ ಅಧಿಕಾರಿಗಳು ಸಿಐಎಸ್ಎಫ್ ಮತ್ತು ಸಿಆರ್ಪಿಎಫ್ನಿಂದ ಬಡ್ತಿ ಪಡೆಯುತ್ತಾರೆ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಅಧಿಕಾರಿಗಳಿಗೆ ಪರಿಣತಿ ಇದೆಯೇ?
ಬೇರೆ ಸಂಸ್ಥೆಗಳಿಂದ ಬಡ್ತಿ ಪಡೆದು ನೇಮಕವಾಗುವ ಅಧಿಕಾರಿಗಳಿಗೆ ತನಿಖೆ ನಡೆಸಲು ಅಗತ್ಯವಾದ ಪರಿಣತಿ ಇದೆಯೇ? ಬ್ಯಾಂಕ್ ವಂಚನೆಗಳು ಮತ್ತು ಇತರೆ ವೈಟ್ ಕಾಲರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳಿಗೆ ಅಗತ್ಯ ಬ್ಯಾಂಕಿಂಗ್ ಮತ್ತು ಲೆಕ್ಕ ಪರಿಶೋಧನಾ ಪ್ರಕ್ರಿಯೆ ಜ್ಞಾನ ಇರುತ್ತದೆಯೇ? ಎಂದು ಪ್ರಶ್ನಿಸಿದೆ.
ಸಿಬಿಐ,ಇಡಿ,ಎನ್ಐಎ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ: ಸುಪ್ರೀಂ
ನೇಮಕಾತಿ, ತನಿಖೆ, ಶಿಕ್ಷೆ ವಿವರ ಬೇಕು
ಸಿಬಿಐನ ನೇಮಕಾತಿ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ? ಜತೆಗೆ ಕಳೆದ 20 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಎಷ್ಟು ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿದೆ ಮತ್ತು ಅವುಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ತಿಳಿದುಕೊಳ್ಳಲು ಬಯಸಿರುವುದಾಗಿ ಕೋರ್ಟ್ ಹೇಳಿದೆ.
103 ಕೆಜಿ ಚಿನ್ನ ನಾಪತ್ತೆ
2012ರಲ್ಲಿ ಚೆನ್ನೈನ ಸುರಾನಾ ಕಾರ್ಪೊರೇಷನ್ ಕಂಪೆನಿ ಮೇಲೆ ದಾಳಿ ನಡೆಸಿದಾಗ ಮುಟ್ಟುಗೋಲು ಹಾಕಿಕೊಂಡಿದ್ದ ಸುಮಾರು 400.5 ಕೆಜಿ ಚಿನ್ನದ ಗಟ್ಟಿ ಮತ್ತು ಆಭರಣಗಳಲ್ಲಿ ಸುಮಾರು 45 ಕೋಟಿ ರೂ ಮೌಲ್ಯದ 103 ಕೆಜಿ ಚಿನ್ನ ಇತ್ತೀಚೆಗೆ ನಾಪತ್ತೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಸಿಬಿಐ ವಶದಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಮಾತ್ರವಲ್ಲದೆ, ಸಿಬಿಐ ವಿಶ್ವಾಸಾರ್ಹತೆ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು.