ವಿದ್ಯಾರ್ಥಿಗಳ ಹಾಡಿಗೆ ಕೈ ಕೈ ಹಿಡಿದು ನರ್ತಿಸಿದ ರಾಹುಲ್ ಗಾಂಧಿ, ದಿನೇಶ್ ಗುಂಡೂರಾವ್
ಚೆನ್ನೈ, ಮಾರ್ಚ್ 1: ಕೇರಳದ ಕೊಲ್ಲಂ ಬಳಿಯ ಕರಾವಳಿಯಲ್ಲಿ ಮೀನುಗಾರರ ದೋಣಿಯಿಂದ ಸಮುದ್ರಕ್ಕೆ ಜಿಗಿದು ಈಜಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ವೈರಲ್ ಆಗಿತ್ತು. ಈಜಾಡಿದ ಬಳಿಕ ದೋಣಿಗೆ ಮರಳಿದ ರಾಹುಲ್ ಗಾಂಧಿ ಅವರ ದೇಹಕ್ಕೆ ಅಂಟಿದ ಟಿ ಶರ್ಟ್ನಲ್ಲಿ ಅವರ ಆಬ್ಸ್ ಎದ್ದುಕಾಣುತ್ತಿತ್ತು. 50 ವಯಸ್ಸಿನಲ್ಲಿಯೂ ವೃತ್ತಿಪರ ದೇಹದಾರ್ಡ್ಯಪಟುವಿನಂತೆ ರಾಹುಲ್ ಗಾಂಧಿ ಆಬ್ಸ್ ಹುರಿಗಟ್ಟಿಸಿಕೊಂಡಿರುವುದು ಸಾಕಷ್ಟು ಮೆಚ್ಚುಗೆಗೆ ಅರ್ಹವಾಗಿತ್ತು.
ಈಗ ತಮಿಳುನಾಡಿನಲ್ಲಿ ಶಾಲಾ ಬಾಲಕಿಯ ಜತೆಗೆ ನಿರಂತರವಾಗಿ ಪುಶ್ಅಪ್ ಮಾಡುವ ರಾಹುಲ್ ಗಾಂಧಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಳಗುಮೋದುಬಿನ್ನಲ್ಲಿನ ಸೇಂಟ್ ಜೋಸೆಫ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಜತೆ ಪುಶ್ಅಪ್ ಮತ್ತು ಮಾರ್ಷಿಯಲ್ ಆರ್ಟ್ಸ್ 'ಐಕಿಡೋ' ಪ್ರದರ್ಶಿಸಿದ್ದಾರೆ.
"ತಮಿಳುನಾಡು ಸಂಸ್ಕೃತಿ ಬಗ್ಗೆ ಕೇಂದ್ರಕ್ಕೆ ಕಿಂಚಿತ್ತೂ ಗೌರವವಿಲ್ಲ, ಆದರೂ..."
ರಾಹುಲ್ ಗಾಂಧಿ ಅವರ ಉತ್ಸಾಹ ಕಂಡು ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿದರು. ಇದರಿಂದ ಮತ್ತಷ್ಟು ಸಾಹಸ ಮುಂದುವರಿಸಿದ ರಾಹುಲ್, ಒಂದೇ ಕೈಯಲ್ಲಿ ಪುಶ್ಅಪ್ ಮಾಡಲು ಆರಂಭಿಸಿದರು. ಈ ವೇಳೆ ಚಪ್ಪಾಳೆ ತಟ್ಟಿ ಉತ್ತೇಜಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚಿಸಿದರು. ಮಕ್ಕಳು 'ರಾಹುಲ್, ರಾಹುಲ್' ಎಂದು ಕೂಗಿದರು. ಬಳಿಕ ವಿದ್ಯಾರ್ಥಿಗಳ ಜತೆ ಅವರು ಫೋಟೊಗಳನ್ನು ತೆಗೆಸಿಕೊಂಡರು.
|
ಕೈ ಕೈ ಹಿಡಿದು ಕುಣಿದ ರಾಹುಲ್, ದಿನೇಶ್ ಗುಂಡೂರಾವ್
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳು ಹಾಡಿದ ಹಾಡಿಗೆ ನರ್ತಿಸಿದರು. ಜತೆಗೆ ತಮಿಳುನಾಡಿನ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಪಿಸಿಸಿ ಮುಖ್ಯಸ್ಥ ಕೆಎಸ್ ಅಳಗಿರಿ ಅವರನ್ನೂ ವೇದಿಕೆಗೆ ಕರೆಯಿಸಿ ಕೈ ಕೈ ಹಿಡಿದು ಕುಣಿದರು.
'ಪಿಸಿಸಿ ಅಧ್ಯಕ್ಷರು ಮತ್ತು ದಿನೇಶ್, ದಯವಿಟ್ಟು ಬನ್ನಿ. ನಾನೊಬ್ಬನೇ ಕೆಳಗೆ ಇಳಿದು ಹೋಗುವುದಿಲ್ಲ. ನಾನು ಕೆಟ್ಟದಾಗಿ ಕಾಣಿಸುವಂತಾದರೆ, ಇತರೆ ವ್ಯಕ್ತಿಗಳ ಜತೆಗೂ ಕೆಟ್ಟದಾಗಿ ಕಾಣಿಸುತ್ತೇನೆ' ಎಂದು ನರ್ತಿಸುವುದಕ್ಕೂ ಮುನ್ನ ರಾಹುಲ್ ಹೇಳಿದರು.
|
ಹಾಡಿನಷ್ಟು ಚೆನ್ನಾಗಿ ಇರಲಿಲ್ಲ
'ಅವರು ಬಹಳ ಚೆನ್ನಾಗಿ ಹಾಡಿದರು. ಆದರೆ ಹಾಡಿದಷ್ಟು ಚೆನ್ನಾಗಿ ನಮ್ಮ ನೃತ್ಯ ಇರಲಿಲ್ಲ' ಎಂದು ನರ್ತಿಸಿದ ಬಳಿಕ ವಿದ್ಯಾರ್ಥಿಗಳ ಗಾಯನವನ್ನು ಶ್ಲಾಘಿಸಿದರು. ರಾಹುಲ್ ಗಾಂಧಿ, ದಿನೇಶ್ ಗುಂಡೂರಾವ್ ಮತ್ತು ಅಳಗಿರಿ ಅವರು ವೇದಿಕೆ ಮೇಲೆ ಮೂವರು ವಿದ್ಯಾರ್ಥಿನಿಯರ ಜತೆಗೆ ನರ್ತಿಸಿದರು. ವಿದ್ಯಾರ್ಥಿನಿಯರು ತೋರಿಸಿಕೊಟ್ಟಂತೆ ಕೈ ಬೀಸಿ ಹೆಜ್ಜೆ ಹಾಕಿದರು.
ಮೋದಿ ವಿರುದ್ಧ ವಾಗ್ದಾಳಿ
ಇದಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ನಡೆದ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡು ಸಂಸ್ಕೃತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಗೌರವ ಇಲ್ಲ. ಏಕ ಭಾಷೆ, ಏಕ ರಾಷ್ಟ್ರ, ಏಕ ಸಂಸ್ಕೃತಿ, ಒಂದೇ ಇತಿಹಾಸ ಎಂದು ಮೋದಿ ಹೇಳುತ್ತಿರುತ್ತಾರೆ. ತಮಿಳು ಭಾರತೀಯ ಭಾಷೆಯಲ್ಲವೇ? ಎಂದು ಪ್ರಶ್ನಿಸಿದ್ದರು.
ವಿಧಾನಸಭೆ ಚುನಾವಣೆ
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ಕಾವು ಶುರುವಾಗಿದೆ. ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಎಲ್ಲ 234 ಸ್ಥಾನಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.