ಮೋದಿ ಸರಕಾರದ ಕಾರ್ಯಕ್ರಮವನ್ನು ಹಾಡಿ ಹೊಗಳಿದ ಪಿ ಚಿದಂಬರಂ
ಚೆನ್ನೈ ಮಾರ್ಚ್ 4: ನರೇಂದ್ರ ಮೋದಿ ಸರಕಾರದ ಕೆಲವೊಂದು ಯೋಜನೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಕಳೆದ ಯುಪಿಎ ಸರಕಾರಕ್ಕಿಂತಲೂ ವೇಗವಾಗಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಹೇಳಿದ್ದಾರೆ.
"Undaunted: Saving the Idea of India" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಚಿದಂಬರಂ, ಎಲ್ಲಾ ಸರಕಾರವೂ ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬರುತ್ತದೆ, ಅದನ್ನು ಹೇಗೆ ಅಲ್ಲಗಳೆಯಲು ಸಾಧ್ಯ ಎಂದು ಹೇಳಿದ್ದಾರೆ.
ಮನಿ ಲಾಂಡ್ರಿಂಗ್ ಕೇಸ್ : ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ
ಗಂಗಾ ಶುದ್ದೀಕರಣ ಯೋಜನೆ ನಿರೀಕ್ಷಿಸಿದ ಮಟ್ಟಕ್ಕೆ ಪೂರ್ಣವಾಗದಿದ್ದರೂ, ಎನ್ಡಿಎ ಸರಕಾರದ ಪ್ರಯತ್ನ ಮೆಚ್ಚುವಂತದ್ದು. ನಮ್ಮ ಸರಕಾರದ ಅವಧಿಯಲ್ಲೂ ಗಂಗಾ ಶುದ್ದೀಕರಣಕ್ಕೆ ನಾವು ಪ್ರಯತ್ನಿಸಿದ್ದೆವು, ಆದರೆ ನಾವು ಆ ಯೋಜನೆಯಲ್ಲಿ ವೈಫಲ್ಯವನ್ನು ಕಂಡೆವು ಎಂದು ಚಿದಂಬರಂ ಹೇಳಿದ್ದಾರೆ.
ಗಂಗಾ ಶುದ್ದೀಕರಣದ ವಿಚಾರದಲ್ಲಿ ಮೋದಿ ಸರಕಾರದ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ, ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ನನಗೆ ಹೆಮ್ಮೆಯಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕೆಲಸ ಅತ್ಯಂತ ತೀವ್ರಗತಿಯಲ್ಲಿ ಸಾಗುತ್ತಿದೆ. ಯುಪಿಎ ಸರಕಾರಕ್ಕಿಂತಲೂ, ನಿತಿನ್ ಗಡ್ಕರಿ ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುತ್ತಿದ್ದಾರೆಂದು ಚಿದಂಬರಂ, ಮೋದಿ ಸರಕಾರದ ಕ್ರಮವನ್ನು ಹೊಗಳಿದ್ದಾರೆ.
ಒಂದು ವ್ಯವಸ್ಥೆಯನ್ನು ಮೋದಿ ಸರಕಾರ ನಿರ್ಮಾಣ ಮಾಡಿದೆ. ಹಾಗಾಗಿ, ಅದು ಮುಂದೆ ಬರುವ ಸರಕಾರಗಳಿಗೆ ಇನ್ನೂ ವೇಗವಾಗಿ ಅಭಿವೃದ್ದಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಚಿದಂಬರಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ; ಇದ್ಯಾವ ನ್ಯಾಯ?: ಚಿದಂಬರಂ ವಿಷಾದ
ಸರಕಾರದ ಜನಧನ್ ಕಾರ್ಯಕ್ರಮವೂ ಕೂಡಾ ಒಂದು ಉತ್ತಮ ಪ್ರಯತ್ನ, ಇದಕ್ಕೂ ನಾನು ಕೇಂದ್ರ ಸರಕಾರದ ಬೆನ್ನು ತಟ್ಟುತ್ತೇನೆ. 35 ಕೋಟಿ ಹೊಸ ಬ್ಯಾಂಕ್ ಅಕೌಂಟ್ ಓಪನ್ ಮಾಡುವುದು ಸಾಮಾನ್ಯದ ಕೆಲಸವಲ್ಲ ಎಂದು ಚಿದಂಬರಂ ಹೇಳಿದ್ದಾರೆ.