ಚೀನಾದವರು ನಮ್ಮ ಪ್ರಧಾನಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ: ರಾಹುಲ್
ಚೆನ್ನೈ, ಫೆಬ್ರವರಿ 27: ಭಾರತದ ಭೂ ಪ್ರದೇಶವನ್ನು ಚೀನಾಗೆ ನೀಡಲಾಗುತ್ತಿದೆ ಎಂದು ಹಿಂದಿನಿಂದಲೂ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಭಾರತದ ನಡುವಿನ ಗಡಿ ವಿವಾದದ ಕುರಿತು ಶನಿವಾರ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ದೇಶದ ಹಿತಾಸಕ್ತಿಯೊಂದಿಗೆ ಪ್ರಧಾನಿ ಮೋದಿ ಅವರು ರಾಜಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಚೀನಾ ಅರ್ಥೈಸಿಕೊಂಡಿದೆ. ಹೀಗಾಗಿಯೇ ಚೀನಾ ಮುಂದುವರೆದಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪಿಸಿದರು.
ಏಪ್ರಿಲ್ 6ಕ್ಕೆ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ತಮಿಳುನಾಡಿನ ತೂತುಕುಡಿ ವಿಒಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, "ಭಾರತವನ್ನು ಸಂಸತ್ತು, ನ್ಯಾಯಾಂಗ, ಮಾಧ್ಯಮಗಳು ಹಿಡಿದಿಟ್ಟಿವೆ. ಈ ಸಂಸ್ಥೆಗಳ ಸಮತೋಲನದ ಮೇಲೆ ದೇಶ ನಿಂತಿದೆ. ಈ ಸಮತೋಲನ ತಪ್ಪಿದರೆ ರಾಷ್ಟ್ರವೇ ನಾಶವಾಗಲಿದೆ. ನಾಶ ಮಾಡುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ" ಎಂದು ದೂರಿದರು.
"ಚೀನೀಯರು ನಮ್ಮ ದೇಶದ ಪ್ರಮುಖ ಕಾರ್ಯತಂತ್ರದ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಭಾರತದ ಪ್ರತಿಕ್ರಿಯೆ ಗಮನಿಸಲು ಮೊದಲು ದೋಕಲಾದಲ್ಲಿ ಪರೀಕ್ಷಿಸಿದ್ದರು. ಭಾರತ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ ಎಂಬುದನ್ನು ಕಂಡುಕೊಂಡು ಲಡಾಖ್ ನಲ್ಲಿ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಅರುಣಾಚಲದ ಮೇಲೂ ಮುಂದೆ ಪರೀಕ್ಷೆ ನಡೆಸಲಿದ್ದಾರೆ" ಎಂದು ಕೇಂದ್ರದ ಕಾರ್ಯವೈಖರಿ ಕುರಿತು ಮಾತನಾಡಿದರು.
ಕಾಂಗ್ರೆಸ್ ನಾಯಕನ ಮಾತು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು; ಮೋದಿ
ಚೀನಾ ಅತಿಕ್ರಮಣ ನಡೆಸಿದಾಗ "ಭಾರತದೊಳಗೆ ಯಾರೂ ಬಂದಿಲ್ಲ" ಎಂದು ಮೊದಲು ಮೋದಿ ಪ್ರತಿಕ್ರಿಯಿಸಿದ್ದರು. ಇದರಿಂದ, ಭಾರತದ ಪ್ರಧಾನಿ ನಮಗೆ ಹೆದರಿದ್ದಾರೆ. ತಮ್ಮ ದೇಶದ ಹಿತಾಸಕ್ತಿಯೊಂದಿಗೆ ಮೋದಿ ಅವರು ರಾಜಿ ಮಾಡಿಕೊಳ್ಳುತ್ತಾರೆ ಎಂಬ ಸುಳಿವು ಚೀನಾದವರಿಗೆ ಸಿಕ್ಕಿತು. ಹೀಗಾಗಿ ಚೀನಾದವರು ಈಗಲೂ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.