ಟೆಕ್ಕಿ ಶುಭಶ್ರೀ ಸಾವಿನ ಬಗ್ಗೆ ಎಐಎಡಿಎಂಕೆ ಬೇಜವಾಬ್ದಾರಿ ಹೇಳಿಕೆ
ಚೆನ್ನೈ, ಅಕ್ಟೋಬರ್ 07: "ಟೆಕ್ಕಿ ಶುಭಶ್ರೀ ಸಾವಿಗೆ ಎಐಡಿಎಂಕೆ ಮುಖಂಡ ಜಯಗೋಪಾಲ್ ಕಾರಣರಲ್ಲ, ಅವರೇನು ಆಕೆಯನ್ನು ಗಾಡಿಯಿಂದ ತಳ್ಳಿಲ್ಲ, ಬ್ಯಾನರ್ ಬೀಳಲು ಗಾಳಿ ಕಾರಣ, ಕೇಸ್ ಹಾಕುವುದಿದ್ದರೆ ಗಾಳಿ ಮೇಲೆ ಹಾಕಿ" ಹೀಗೊಂದು ಬೇಜವಾಬ್ದಾರಿ ಹೇಳಿಕೆಯನ್ನು ಎಐಎಡಿಎಂಕೆ ಮುಖಂಡರಾದ ಸಿ. ಪೊನ್ನಯನ್ ನೀಡಿದ್ದಾರೆ.
ಸ್ಥಳೀಯ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಶುಭಶ್ರೀ ಸಾವಿನ ಬಗ್ಗೆ ಪೊನ್ನಯನ್ ಪ್ರತಿಕ್ರಿಯಿಸಿ, ಬ್ಯಾನರ್ ಹಾಕಿದ ವ್ಯಕ್ತಿ ಘಟನೆ ಸಂದರ್ಭದಲ್ಲಿ ಅಲ್ಲಿರಲಿಲ್ಲ, ಗಾಳಿ ಬಂದು ಬ್ಯಾನರ್ ಬಿದ್ದರೆ ಅವರೇನು ಮಾಡಲು ಸಾಧ್ಯ, ಗಾಳಿ ವಿರುದ್ಧ ದೂರು ದಾಖಲಿಸಿ, ತನಿಖೆ ನಡೆಸಿ ಎಂದಿದ್ದಾರೆ. ಪೊನ್ನಯನ್ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿದೆ.
ಶುಭಶ್ರೀ ಪರಿಚಯ: ಟೆಕ್ಕಿ,Zumba ಡ್ಯಾನ್ಸರ್, ಆಪ್ತರ ಸ್ಟಾರ್
ಆದರೆ ಎಐಎಡಿಎಂಕೆ ಪಕ್ಷದಿಂದ ಈ ಹೇಳಿಕೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಶುಭಶ್ರೀ ಸಾವಿನ ಹೊಣೆ ಹೊತ್ತುಕೊಳ್ಳುವ ಮಾತು ಹಾಗಿರಲಿ, ಈ ಘಟನೆಗೆ ಪಕ್ಷದ ಮುಖಂಡರೊಬ್ಬರು ಕಾರಣ, ಅವರನ್ನು ಬಂಧಿಸಲಾಗಿದೆ. ಆ ಬ್ಯಾನರ್ ನಲ್ಲಿ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಚಿತ್ರ ಕೂಡಾ ಇತ್ತು ಎಂಬ ಅಂಶವನ್ನು ಮರೆತಂತೆ ಪಕ್ಷ ದಿವ್ಯ ನಿರ್ಲಕ್ಷ್ಯ ಮೆರೆಯುತ್ತಿದೆ.
ಇತ್ತೀಚೆಗೆ ಎಐಎಡಿಎಂಕೆ ಮಿತ್ರ ಪಕ್ಷ ದೇಸಿಯಾ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಮುಖ್ಯಸ್ಥರಾದ ಪ್ರೇಮಲತಾ ವಿಜಯಕಾಂತ್ ಅವರು, ಶುಭಶ್ರೀ ಸಾವಿಗೆ ವಿಧಿಯಾಟವೇ ಕಾರಣ, ಕೆಟ್ಟ ಗಳಿಗೆಯಲ್ಲಿ ಕೆಟ್ಟ ಜಾಗದಲ್ಲಿ ಸಿಲುಕಿದ್ದಕ್ಕೆ ಪ್ರಾಣ ಹೋಗಿದೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಕೂಡಾ ಎಐಎಡಿಎಂಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ
ಸೆಪ್ಟಂಬರ್ 12ರಂದು ರಸ್ತೆಗೆ ಹಾಕಿದ್ದ ಅಕ್ರಮ ಬ್ಯಾನರ್ ಬಿದ್ದು ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಶುಭಶ್ರೀ ಅವರು ಆಯತಪ್ಪಿ ರಸ್ತೆಗೆ ಬಿದ್ದಿದ್ದರು. ಹಿಂಬದಿಯಿಂದ ಬರುತ್ತಿದ್ದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮರಣ ಹೊಂದಿದ್ದರು. ಭಾರಿ ಪ್ರತಿಭಟನೆಯ ನಂತರ ಬ್ಯಾನರ್ ಹಾಕಿದ್ದ ಎಐಎಡಿಎಂಕೆ ಮುಖಂಡ ಜಯಗೋಪಾಲ್ ಅವರನ್ನು ಕೃಷ್ಣಗಿರಿಯಲ್ಲಿ ಸೆ.27ರಂದು ಬಂಧಿಸಲಾಗಿತ್ತು. ಟ್ಯಾಂಕರ್ ಚಾಲಕ ಘಟನೆ ನಡೆದ ಬಳಿಕವೆ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಅಕ್ರಮ ಬ್ಯಾನರ್, ಹೋರ್ಡಿಂಗ್ ವಿರುದ್ಧ ಆಡಳಿತ ಪಕ್ಷ ಕ್ರಮ ಕೈಗೊಂಡರೂ ಪಕ್ಷದ ಧೋರಣೆ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ.