ಶುಭಶ್ರೀ ಸಾವು: ಕೊನೆಗೂ ಸಿಕ್ಕಿಬಿದ್ದ ರಾಜಕಾರಣಿ ಜಯಗೋಪಾಲ್
Recommended Video
ಚೆನ್ನೈ, ಸೆಪ್ಟೆಂಬರ್ 28: ರಸ್ತೆ ಬದಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್ ದ್ವಿಚಕ್ರ ವಾಹನದ ಮೇಲೆ ಬಿದ್ದು ಸಾಫ್ಟ್ವೇರ್ ಉದ್ಯೋಗಿ ಶುಭಶ್ರೀ ಸಾವಿಗೀಡಾದ ಪ್ರಕರಣ ನಡೆದು 14 ದಿನಗಳ ಬಳಿಕ ಕೊನೆಗೂ ಚೆನ್ನೈ ಪೊಲೀಸರು ಘಟನೆಗೆ ಕಾರಣರಾದ ರಾಜಕಾರಣಿಯನ್ನು ಬಂಧಿಸಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಆಡಳಿತಾರೂಢ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಮುಖಂಡ ಜಯಗೋಪಾಲ್ ಅವರನ್ನು ಕೃಷ್ಣಗಿರಿ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ. ಕೃಷ್ಣಗಿರಿಯಿಂದ ಅವರನ್ನು ಚೆನ್ನೈಗೆ ಕರೆತರಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಅ. 11ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶುಭಶ್ರೀ ದುರಂತ ಕಂಡು ಮರುಗಿದ ಸ್ಟಾರ್ ನಟರಿಂದ ಮಹತ್ವದ ಘೋಷಣೆ
ಕೃಷ್ಣಗಿರಿಯ ಹೊಸೂರು ಸಮೀಪದ ದೆಂಕನಿಕೊಟ್ಟೈ ಎಂಬಲ್ಲಿನ ಹೋಟೆಲ್ ಒಂದರಲ್ಲಿ ಜಯಗೋಪಾಲ್ ಇರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಅವರನ್ನು ಬಂಧಿಸಿದ್ದಾರೆ. ಜಯಗೋಪಾಲ್ ಅವರ ಹೆಸರನ್ನು ಎಫ್ಐಆರ್ನಲ್ಲಿ ನಮೂದಿಸಿದ ಬಳಿ ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಜಯಗೋಪಾಲ್ ಅವರ ಸಂಬಂಧಿ ಮೇಘನಾದನ್ ಅವರ ವಿರುದ್ಧ ಕೂಡ ಐಪಿಸಿ ಸೆಕ್ಷನ್ 304 ಮತ್ತು ತಮಿಳುನಾಡು ಬಹಿರಂಗ ಸ್ಥಳ (ಸೌಂದರ್ಯ ಹಾಳುಗೆಡವುದರ ತಡೆ) ಕಾಯ್ದೆ 1959ರ ಅಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಶುಭಶ್ರೀ ಸಾವಿಗೆ ಕಾರಣವಾಗಿದ್ದ ಬ್ಯಾನರ್
ಸೆ. 12ರಂದು ಸಾಫ್ಟ್ವೇರ್ ಉದ್ಯೋಗಿ ಶುಭಶ್ರೀ ದ್ವಿಚಕ್ರ ವಾಹನದಲ್ಲಿ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಕ್ರಮವಾಗಿ ಹಾಕಿದ್ದ ಬ್ಯಾನರ್ ಕಳಚಿಕೊಂಡು ಅವರ ಮೇಲೆ ಬಿದ್ದಿತ್ತು. ಆಗ ಶುಭಶ್ರೀ ಗಾಡಿಯ ನಿಯಂತ್ರಣ ಕಳೆದುಕೊಂಡಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿತ್ತು. ಶುಭಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ
ಮಗನ ಮದುವೆ ಸಂಭ್ರಮದ ಬ್ಯಾನರ್
ಜಯಗೋಪಾಲ್ ಅವರು ತಮ್ಮ ಮಗನ ಮದುವೆ ಸಮಾರಂಭದ ಶುಭಾಶಯ ಕೋರುವ ಬ್ಯಾನರ್ ಅನ್ನು ಪೊಲ್ಲಾವರಂ-ಥೊರೈಪಕ್ಕಂ ರೇಡಿಯಲ್ ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದರು. ಈ ಬ್ಯಾನರ್ ಕಿತ್ತುಬಂದು ಶುಭಶ್ರೀ ಅವರ ಮೇಲೆ ಬಿದ್ದು ಅವರ ಸಾವಿಗೆ ಕಾರಣವಾಗಿತ್ತು. ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಎಐಎಡಿಎಂಕೆಯ ಪದಾಧಿಕಾರಿಯಾಗಿರುವ ಮಾಜಿ ಕೌನ್ಸಿಲರ್ ಜಯಗೋಪಾಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಲೆಮರೆಸಿಕೊಂಡಿದ್ದ ರಾಜಗೋಪಾಲ್
ಘಟನೆ ನಡೆದ ಬಳಿಕ ಪೊಲೀಸರು ಶುಭಶ್ರೀ ಅವರಿಗೆ ಡಿಕ್ಕಿ ಹೊಡೆದಿದ್ದ ಟ್ರಕ್ ಚಾಲಕನನ್ನು ಬಂಧಿಸಿದ್ದರು. ಟ್ಯಾಂಕರ್ ಚಾಲಕ ವೇಗವಾಗಿ ಮತ್ತು ಅಜಾಕರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ಎಂಬ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಆಕೆಯ ಸಾವಿಗೆ ಮೂಲ ಕಾರಣರಾಗಿದ್ದ ರಾಜಗೋಪಾಲ್ ಅವರನ್ನು ಬಂಧಿಸುವುದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಎಐಎಡಿಎಂಕೆ ಸರ್ಕಾರವು ರಾಜಗೋಪಾಲ್ ಅವರ ರಕ್ಷಣೆ ಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ನಡೆದ 14 ದಿನಗಳ ಬಳಿಕ ಕೊನೆಗೂ ಅವರನ್ನು ಬಂಧಿಸಲಾಗಿದೆ.
ನ್ಯಾಯಾಲಯವನ್ನೂ ಭಾವುಕವಾಗಿಸಿದ ಟೆಕ್ಕಿ ಶುಭಶ್ರೀ ದಾರುಣ ಸಾವು
ಅಕ್ರಮ ಬ್ಯಾನರ್, ಫ್ಲೆಕ್ಸ್ ವಿರುದ್ಧ ಚಳವಳಿ
ಶುಭಶ್ರೀ ಅವರ ದಾರುಣ ಸಾವಿಗೆ ಇಡೀ ಭಾರತ ಮಮ್ಮಲ ಮರುಗಿತ್ತು. ಸದಾ ಉತ್ಸಾಹದಿಂದ ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುತ್ತಿದ್ದ 23 ವರ್ಷದ ಶುಭಶ್ರೀ ಸಾವಿಗೆ ಅವರ ಸಹೋದ್ಯೋಗಿಗಳು, ಕುಟುಂಬವರು ಮತ್ತು ಆಕೆಯನ್ನು ಬಲ್ಲವರು ಮಾತ್ರವಲ್ಲ, ಆಕೆಯ ಬಗ್ಗೆ ಈ ಘಟನೆಯ ನಂತರ ತಿಳಿದವರೂ ಕಣ್ಣೀರಿಟ್ಟಿದ್ದರು. ಈ ಘಟನೆ ಅಕ್ರಮವಾಗಿ ಅಳವಡಿಸುವ ಫ್ಲೆಕ್ಸ್ ಮತ್ತು ಬ್ಯಾನರ್ ಸಂಸ್ಕೃತಿಯ ವಿರುದ್ಧ ಚಳವಳಿಗೂ ಕಾರಣವಾಗಿತ್ತು. ತಮಿಳು ಸಿನಿಮಾ ನಟರು ಕೂಡ ಈ ಬಗ್ಗೆ ಆಂದೋಲನ ನಡೆಸಿದ್ದರು. ಘಟನೆ ನಡೆದ ಮರುದಿನವೇ ತಮಿಳುನಾಡಿನಾದ್ಯಂತ ಅಕ್ರಮ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ತೆರವು ಮಾಡಲಾಗಿತ್ತು. ಶುಭಶ್ರೀ ಅವರ ಸಾವಿನ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.