ಮೋದಿ ಕಾರ್ಯಕ್ರಮ ನೇರ ಪ್ರಸಾರದಲ್ಲಿ ಅಡ್ಡಿ: ಚೆನ್ನೈ ಡಿಡಿ ಸಹಾಯಕ ನಿರ್ದೇಶಕಿ ಅಮಾನತು
ಚೆನ್ನೈ, ಅಕ್ಟೋಬರ್ 2: ಐಐಟಿ ಮದ್ರಾಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮವನ್ನು ಸಮರ್ಪಕ ರೀತಿಯಲ್ಲಿ ನೇರ ಪ್ರಸಾರ ಮಾಡದ ಆರೋಪದಲ್ಲಿ ಚೆನ್ನೈನ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ ವಸುಮತಿ ಅವರನ್ನು ಪ್ರಸಾರ ಭಾರತಿ ಅಮಾನತು ಮಾಡಿದೆ.
ದೂರದರ್ಶನಕ್ಕೆ 60ರ ಸಂಭ್ರಮ, ಸವಿ ಸವಿ ನೆನಪು ಸಾವಿರ ನೆನಪು
ಐಐಟಿ ಮದ್ರಾಸ್ ಸಂಶೋಧನಾ ಕೇಂದ್ರದಲ್ಲಿ ಸೆ.30ರಂದು ನಡೆದ ಸಿಂಗಪುರ-ಭಾರತ ಹ್ಯಾಕಥಾನ್ 2019ರಲ್ಲಿ ಮೋದಿ ಅವರ ಭಾಷಣ ಮತ್ತು ಕಾರ್ಯಕ್ರಮವನ್ನು ಡಿಡಿ ಪೂದಿಗೈ ಚಾನೆಲ್ನಲ್ಲಿ ನೇರ ಪ್ರಸಾರ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಇದ್ದರೂ ವಸುಮತಿ ಅವರು ಅದನ್ನು ಸರಯಾಗಿ ಪಾಲಿಸಿರಲಿಲ್ಲ ಎನ್ನಲಾಗಿದೆ. ವಸುಮತಿ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಅಮಾನತು ಆದೇಶ ಹೊರಡಿಸಲಾಗಿದೆ.
ಅಮಾನತು ಆದೇಶದಲ್ಲಿ ಪ್ರಸಾರ ಭಾರತಿಯು ತಮ್ಮ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ ಅವರು ಹಿರಿಯ ಅಧಿಕಾರಿಗಳ ಸೂಚನೆಯನ್ನು ಪಾಲಿಸದ ಕಾರಣಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ನಾಗರಿಕ ಸೇವೆಗಳ ನಿಯಮಗಳ (ವರ್ಗೀಕರಣ, ನಿಯಂತ್ರಣ ಮತ್ತು ಮನವಿ) 1965ರ ಅಡಿ ಅವರನ್ನು ಅಮಾನತುಗೊಳಿಸಲಾಗಿದೆ. ಈ ಪತ್ರಕ್ಕೆ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಶೇಖರ್ ವೆಂಪತಿ ಸಹಿ ಹಾಕಿದ್ದಾರೆ.
ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಬೇಕೇ ಎಂದು ವಸುಮತಿ ಅವರು ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಕೇಳಿದ್ದರು. ಇಡೀ ಕಾರ್ಯಕ್ರಮ ಮತ್ತು ಭಾಷಣವನ್ನು ತಪ್ಪದೇ ನೇರಪ್ರಸಾರ ಮಾಡುವಂತೆ ಸೂಚನೆ ನೀಡಲಾಗಿತ್ತು. ಸ್ಪಷ್ಟ ಆದೇಶವಿದ್ದರೂ ವಸುಮತಿ ಅವರು ಹ್ಯಾಕಥಾನ್ ಭಾಗವನ್ನು ನೇರಪ್ರಸಾರ ಮಾಡದೆ ಇರಲು ನಿರ್ಧರಿಸಿದ್ದರು. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಾಗಿ ತೋರಿದ ಅವಿಧೇಯತೆ ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.