ಶೀತಕ್ಕೆ ತಾನೇ ಕಂಡುಹಿಡಿದ ಔಷಧ ಸೇವಿಸಿ ಫಾರ್ಮಾಸಿಸ್ಟ್ ಸಾವು
ಚೆನ್ನೈ, ಮೇ 8: ತಾನೇ ಕಂಡು ಹಿಡಿದಿದ್ದ ಔಷಧ ಸೇವಿಸಿ ಚೆನ್ನೈನ ಫಾರ್ಮಾಸಿಸ್ಟ್ ಒಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಒಂದೆಡೆ ಇಡೀ ವಿಶ್ವವೇ ಲುಗಿಹೋಗಿರುವ ಕೊರೊನಾ ವೈರಸ್ಗೆ ಔಷಧ ಕಂಡುಹಿಡಿಲು ವಿಜ್ಞಾನಿಗಳು ಕಷ್ಟ ಪಡುತ್ತಿದ್ದಾರೆ. ಇನ್ನೊಂದೆಡೆ ಶೀತಕ್ಕಾಗಿ ತಾನೇ ಕಂಡು ಹಿಡಿದಿದ್ದ ಔಷಧ ಸೇವಿಸಿ ಫಾರ್ಮಾಸಿಸ್ಟ್ ಮೃತಪಟ್ಟಿದ್ದಾರೆ.
ಚೆನ್ನೈ ಮೂಲದ 47 ವರ್ಷದ ಫಾರ್ಮಾಸಿಸ್ಟ್ ಶಿವನೇಸನ್ ತೀನಂಪೇಟ್ ನಲ್ಲಿ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಶಿವನೇಸನ್ ಪೆರುಂಗುಡಿ ನಿವಾಸಿಯಾಗಿದ್ದು, ಫಾರ್ಮಸಿ ಪದವಿ ಹೊಂದಿದ್ದ ಈತ ಖಾಸಗಿ ಬೈಯೋಟೆಕ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.
ಈ ಉತ್ತರಾಖಂಡ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಅದೇ ಸಂಸ್ಥೆಯ ಚೆನ್ನೈನ ಕೊಡಂಬಕ್ಕಂನ ಭೂಪತಿ ನಗರದ ಬ್ರಾಂಚ್ ಗೆ ವರ್ಗಾವಣೆಯಾಗಿದ್ದ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ತೇನಂಪೇಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮೃತ ಶಿವನೇಸನ್ ದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ.
ಅಂತೆಯೇ ಔಷಧಿ ತಯಾರಿಕೆಯಲ್ಲಿ ವೈದ್ಯ ರಾಜ್ ಕುಮಾರ್ ಪಾತ್ರದ ಕುರಿತು ಶಂಕಿಸಿದ್ದು, ಆತನ ಸಾವಿಗೆ ಸೋಡಿಯಂ ನೈಟ್ರೇಟ್ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
'ಕೊರೊನಾಗೆ ಬೇರೆ ಔಷಧಿ ಯಾಕೆ? ಗೋಮೂತ್ರ, ಸಗಣಿ ಸಾಕು!'
ಕಳೆದ ಹಲವು ತಿಂಗಳಿನಿಂದ ಈತ ಶೀತಕ್ಕೆ ಸಂಬಂಧಿಸಿದ ಔಷಧಿ ಕಂಡು ಹಿಡಿಯುವಲ್ಲಿ ನಿರತನಾಗಿದ್ದ. ಗುರುವಾರ ಸಂಜೆ ತಾನು ಕಂಡು ಹಿಡಿದಿದ್ದ ಔಷಧಿಯನ್ನು ತೇನಂಪೇಟ್ ನಲ್ಲಿರುವ ವೈದ್ಯ ಡಾ.ರಾಜ್ ಕುಮಾರ್ ಬಳಿಗೆ ತಂದಿದ್ದ. ಈ ವೇಳೆ ಔಷಧಿ ಪರೀಕ್ಷೆಗಾಗಿ ಶಿವನೇಸನ್ ಮತ್ತು ವೈದ್ಯ ರಾಜ್ ಕುಮಾರ್ ಇಬ್ಬರೂ ಸೇವಿಸಿದ್ದರು.
ವೈದ್ಯ ರಾಜ್ ಕುಮಾರ್ ಅಲ್ಪ ಪ್ರಮಾಣದ ಔಷಧ ಸೇವಿಸಿದರೆ, ಶಿವನೇಸನ್ ಇಡೀ ಔಷಧಿಯನ್ನು ಸೇವಿಸಿದ್ದ. ಔಷಧ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಶವನೇಸನ್ ಪ್ರಜ್ಞೆ ತಪ್ಪಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರು ಸಾವನ್ನಪ್ಪಿದ್ದಾರೆ.