ತೂತುಕುಡಿ ಲಾಕಪ್ ಡೆತ್ ಕೇಸ್: ಸಿಬಿಐಗೆ ವಹಿಸಿದ ಪಳನಿಸ್ವಾಮಿ
ಚೆನ್ನೈ, ಜೂನ್ 28: ಬಂಗಾಳ ಕೊಲ್ಲಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ತೂತುಕುಡಿ (Tuticorin) ಮತ್ತೊಮ್ಮೆ ಇಡೀ ಡೇಶದ ಗಮನ ತನ್ನತ್ತ ಸೆಳೆಯುವಂತೆ ಮಾಡಿದೆ. ತೂತುಕುಡಿಯ ಸ್ಟರ್ಲೈಟ್ ತಾಮ್ರಘಟಕ ನಂತರ ಈಗ ಲಾಕಪ್ ಡೆತ್ ಕೇಸ್ ಟ್ರೆಂಡಿಂಗ್ ನಲ್ಲಿದೆ.
Recommended Video
ಪೊಲೀಸ್ ದೌರ್ಜನ್ಯಕ್ಕೆ ಸಿಲುಕಿ ಕಸ್ಟಡಿಯಲ್ಲಿರುವಾಗ ತಂದೆ-ಮಗ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ, ಈ ಕುರಿತಂತೆ ಮದ್ರಾಸ್ ಹೈಕೋರ್ಟ್ ಗೆ ತಿಳಿಸಿ ಅನುಮತಿ ಪಡೆಯಲಾಗುತ್ತದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಪಳನಿಸ್ವಾಮಿ ಭಾನುವಾರ ಹೇಳಿದ್ದಾರೆ.
ಕೊರೊನಾವೈರಸ್ ಸೋಂಕು ಹರಡದಂತೆ ಮತ್ತೊಮ್ಮೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಜಯರಾಜ್ ಹಾಗೂ ಬೆನಿಕ್ಸ್ ಎಂಬುವರು ಲಾಕ್ಡೌನ್ ನಿಯಮ ಉಲ್ಲಂಘಿಸಿ 15 ನಿಮಿಷಗಳ ಕಾಲ ತಮ್ಮ ಅಂಗಡಿ ತೆರೆದಿದ್ದರು ಎಂದು ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಜಿಲ್ಲೆಯ ಸಾತ್ತಾನ್ ಕುಳಂನಲ್ಲಿ ಘಟನೆ
ಸಾತ್ತಾನ್ ಕುಳಂನಲ್ಲಿ ಟಿಂಬರ್ ಶಾಪ್ ಹಾಗೂ ಮೊಬೈಲ್ ಶಾಪ್ ಹೊಂದಿದ್ದ ಇಬ್ಬರು ಜೂನ್ 18ರಂದು ಕರ್ಫ್ಯೂ ಉಲ್ಲಂಘಿಸಿ ಅಂಗಡಿ ತೆರೆದಿದ್ದರು. ಈ ಬಗ್ಗೆ ಪೊಲೀಸರ ಜೊತೆ ವಾಗ್ವಾದ ಮಾಡಿದ್ದರು. ಹೀಗಾಗಿ, ಜೂನ್ 19ರಂದು ಜಯರಾಜ್ ರನ್ನು ಮೊದಲಿಗೆ ಠಾಣೆಗೆ ಕರೆದೊಯ್ಯಲಾಗಿದೆ. ಅಪ್ಪನನ್ನು ಹುಡುಕಿಕೊಂಡು ಬೆನ್ಸಿಕ್ ಸಂಜೆ ವೇಳೆಗೆ ಠಾಣೆಗೆ ಬರುತ್ತಾರೆ. ಈ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ ಎಂದು ಬೆನ್ಸಿಕ್ ಸ್ನೇಹಿತರು ಆರೋಪಿಸಿದ್ದಾರೆ.
ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು
ಜೂನ್ 20ರಂದು ಇಬ್ಬರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಜೂನ್ 22ರಂದು ಕೋವಿಲ್ ಪಟ್ಟಿ ಸಬ್ ಜೈಲಿನಲ್ಲಿದ್ದ ಇಬ್ಬರು ಅಸ್ವಸ್ಥರಾಗಿರುವುದು ತಿಳಿದು ಬಂದಿತು. ಅಪ್ಪ ಮಗ ಇಬ್ಬರು ಎರಡು ದಿನಗಳಲ್ಲಿ ಇನ್ನಿಲ್ಲವಾದರು. ಇದು ಪೊಲೀಸರಿಂದ ನಡೆದ ಹತ್ಯೆ ಎಂದು ಬೆನ್ಸಿಕ್ ಪರ ವಕೀಲ ಮಣಿಮಾರನ್ ವಾದಿಸಿದ್ದಾರೆ.
ಎಸ್ ಪಿ ಅರುಣ್ ಗೋಪಾಲನ್ ತನಿಖೆ
ತಂದೆ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ವರ್ತಕರು ಒಂದು ದಿನ ಅಂಗಡಿ ಮುಂಗಟ್ಟು ಬಂದ್ ಮಾಡು ಪ್ರತಿಭಟನೆ ಮಾಡಿದ್ದಾರೆ. ನಂತರ ಮದ್ರಾಸ್ ಹೈಕೋರ್ಟಿನ ಮದುರೈ ಪೀಠವು ಸುಮೋಟೋ ಕೇಸ್ ದಾಖಲಿಸಿಕೊಂಡು ತೂತುಕುಡಿ ಎಸ್ ಪಿ ಅರುಣ್ ಗೋಪಾಲನ್ ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸುತ್ತದೆ.
ಸಾತ್ತಾನ್ ಕುಳಂ ಠಾಣೆ ಪೊಲೀಸರಿಗೆ ಶಿಕ್ಷೆ
ಜಯರಾಜ್ ಹಾಗೂ ಬೆನ್ಸಿಕ್ ರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದ ಸಾತ್ತಾನ್ ಕುಳಂ ಠಾಣೆ ಸಬ್ ಇನ್ಸ್ ಪೆಕ್ಟರ್ ಬಾಲಕೃಷ್ಣನ್, ರಘು ಗಣೇಶ್ ಅವರನ್ನು ಇಲಾಖೆ ಅಮಾನತುಗೊಳಿಸಿದೆ. ಇನ್ಸ್ ಪೆಕ್ಟರ್ ಶ್ರೀಧರ್ ಗೆ ಬೇರೆಡೆಗೆ ವರ್ಗವಾಗಿದೆ. ಕಾನ್ಸ್ ಟೇಬಲ್ ಮುರುಗನ್ ,ಮುತ್ತುರಾಜ್ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಎಸ್ ಪಿ ಅರುಣ್ ಗೋಪಾಲನ್ ಅವರು ಕೋರ್ಟಿಗೆ ವರದಿ ಸಲ್ಲಿಸಿದ್ದಾರೆ.
ಸಿಬಿಐಗೆ ಪ್ರಕರಣದ ತನಿಖೆ
ಇದೇ ವೇಳೆ , ಕೋರ್ಟ್ ಸೂಚನೆಯಂತೆ ಜೂನ್ 25ರಂದು ಜಯರಾಜ್ ಹಾಗೂ ಬೆನ್ಸಿಕ್ ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಸದ್ಯ ಮದುರೈ ಪೀಠವು ನ್ಯಾಯಾಂಗ ತನಿಖೆಗೆ ಸೂಚನೆ ನೀಡಿ, ಜೂನ್ 30ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ. ಆದರೆ, ಈ ನಡುವೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಕೇಂದ್ರ ತನಿಖಾ ತಂಡ ಸಿಬಿಐಗೆ ಪ್ರಕರಣದ ತನಿಖೆವಹಿಸಲು ಪಳನಿಸ್ವಾಮಿ ಸರ್ಕಾರ ನಿರ್ಧರಿಸಿದೆ.