ದೂರವಾಣಿ ದುರ್ಬಳಕೆ: ಮಾರನ್ ಸಹೋದರರ ಖುಲಾಸೆ ಪ್ರಶ್ನಿಸಿ ಸಿಬಿಐ ಮೇಲ್ಮನವಿ
ಚೆನ್ನೈ, ಜೂನ್ 12: ದೂರವಾಣಿ ಸಂಪರ್ಕದ ದುರ್ಬಳಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಮತ್ತು ಅವರ ಹಿರಿಯ ಸಹೋದರ ಕಲಾನಿಧಿ ಮಾರನ್ ಅವರನ್ನು ಆರೋಪಮುಕ್ತಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಸಿಬಿಐ ವಿಶೇಷ ನ್ಯಾಯಾಲಯವು ಮಾರನ್ ಸಹೋದರರು ನಿರಪರಾಧಿಗಳು ಎಂದು ತೀರ್ಪು ನೀಡಿದ ಮೂರು ತಿಂಗಳ ಬಳಿಕ ಸಿಬಿಐ ಅದನ್ನು ಪ್ರಶ್ನಿಸಿದೆ.
ಬಿಎಸ್ಎನ್ಎಲ್ ಪ್ರಕರಣ: ಮಾರನ್ ಸಹೋದರರಿಗೆ ಕ್ಲೀನ್ ಚಿಟ್
ಅಪರಾಧ ಪರಿಷ್ಕರಣೆ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಜಿ. ಜಯಚಂದ್ರನ್, ಮಾರನ್ ಸಹೋದರರು ಮತ್ತು ಇತರೆ ಐವರು ಆರೋಪಿಗಳಿಗೆ ಜೂನ್ 20ರ ಒಳಗೆ ನೋಟಿಸ್ ನೀಡುವಂತೆ ಆದೇಶ ನೀಡಿದೆ.
ಮಾರ್ಚ್ 14ರಂದು ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನಟರಾಜನ್, ಎಲ್ಲ ಏಳು ಮಂದಿ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಮೇಲ್ಮಟ್ಟದ ಪುರಾವೆಗಳು ಲಭ್ಯವಿಲ್ಲ ಎಂದು ಅವರನ್ನು ಆರೋಪಮುಕ್ತಗೊಳಿಸಿದ್ದರು.
2004ರ ಜೂನ್ನಿಂದ 2006ರ ಡಿಸೆಂಬರ್ ಅವಧಿಯಲ್ಲಿ ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ದಯಾನಿಧಿ ಮಾರನ್, ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮನೆಯಲ್ಲಿಯೇ ಟೆಲಿಫೋನ್ ಎಕ್ಸ್ಚೇಂಜ್ ಅನ್ನು ಸ್ಥಾಪಿಸಿದ್ದರು.
ಈ ದೂರವಾಣಿ ಸಂಪರ್ಕವನ್ನು ತಮ್ಮ ಮಾಲೀಕತ್ವದ ಸನ್ ನೆಟ್ವರ್ಕ್ನ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಅಕ್ರಮವಾಗಿ ಬಳಸಿಕೊಂಡಿದ್ದರು.
ಈ ಅವಧಿಯಲ್ಲಿ ಅವರಿಗೆ ಒದಗಿಸಲಾಗಿದ್ದ 764 ದೂರವಾಣಿ ಸಂಪರ್ಕಗಳಿಗೆ ಶುಲ್ಕ ಪಾವತಿ ಮಾಡಿರಲಿಲ್ಲ. ಇದರಿಂದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗೆ 1.78 ಕೋಟಿ ನಷ್ಟ ಉಂಟಾಗಿತ್ತು ಎಂದು ಸಿಬಿಐ ಆರೋಪಿಸಿದೆ.