ತೂತುಕುಡಿ ತಂದೆ-ಮಗ ಕಸ್ಟಡಿ ಹತ್ಯೆ ತನಿಖೆ ಆರಂಭಿಸಿದ ಸಿಬಿಐ
ಚೆನ್ನೈ, ಜುಲೈ 8: ಪೊಲೀಸ್ ದೌರ್ಜನ್ಯಕ್ಕೆ ಸಿಲುಕಿ ಕಸ್ಟಡಿಯಲ್ಲಿರುವಾಗ ತೂತುಕುಡಿಯ ತಂದೆ-ಮಗ ಮೃತಪಟ್ಟ ಪ್ರಕರಣದ ತನಿಖೆದ ತನಿಖೆ ನಡೆಸಲು ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿರುವುದನ್ನು ಸಿಬಿಐ ಖಚಿತಪಡಿಸಿದೆ. ಜಯರಾಜ್ -ಬೆನಿಕ್ಸ್ ಕಸ್ಟಡಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟಿಗೆ ಸಿಎಂ ಪಳನಿಸ್ವಾಮಿ ಸರ್ಕಾರ ತಿಳಿಸಿತ್ತು.
ಈ ಪ್ರಕರಣವನ್ನು ಕೋವಿಲ್ ಪಟ್ಟಿ ಪೂರ್ವ ಪೊಲೀಸ್ ಠಾಣೆಯಿಂದ ಕೇಂದ್ರ ತನಿಖಾ ಸಂಸ್ಥೆ ಸಿಬಿಐಗೆ ವಹಿಸಲಾಗಿದೆ ಈ ಕುರಿತಂತೆ ಗೃಹ ಸಚಿವ ಅಮಿತ್ ಶಾಗೆ ಅಧಿಕೃತ ಪತ್ರ ಬರೆಯಲಾಗಿತ್ತು. ಪತ್ರಕ್ಕೆ ಸ್ಪಂದಿಸಿರುವ ಗೃಹಸಚಿವಾಲಯವು, ಸಿಬಿಐಗೆ ತನಿಖೆ ಜವಾಬ್ದಾರಿಯನ್ನು ವಹಿಸಿ ಆದೇಶ ಹೊರಡಿಸಿದೆ. ಸದ್ಯ ಸಿಬಿ-ಸಿಐಡಿ ಈ ಪ್ರಕರಣದ ತನಿಖೆ ನಡೆಸಿದ್ದು, ಇನ್ಸ್ ಪೆಕ್ಟರ್ ಸೇರಿದಂತೆ ಐವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿರುವ ಸಿಬಿಐ ತಂಡ, ತನಿಖೆ ಆರಂಭಿಸಿದೆ.
ತೂತುಕುಡಿ ಲಾಕಪ್ ಡೆತ್ ಕೇಸ್ ಹಿಸ್ಟರಿ
ಕೊರೊನಾವೈರಸ್ ಸೋಂಕು ಹರಡದಂತೆ ಮತ್ತೊಮ್ಮೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಜಯರಾಜ್ ಹಾಗೂ ಬೆನಿಕ್ಸ್ ಎಂಬುವರು ಸಾತ್ತಾನ್ ಕುಳಂನಲ್ಲಿ ಟಿಂಬರ್ ಶಾಪ್ ಹಾಗೂ ಮೊಬೈಲ್ ಶಾಪ್ ಹೊಂದಿದ್ದರು. ಜೂನ್ 18ರಂದು ಕರ್ಫ್ಯೂ ಉಲ್ಲಂಘಿಸಿ ಅಂಗಡಿ ತೆರೆದಿದ್ದರು.
ಲಾಕ್ಡೌನ್ ನಿಯಮ ಉಲ್ಲಂಘಿಸಿ 15 ನಿಮಿಷಗಳ ಕಾಲ ತಮ್ಮ ಅಂಗಡಿ ತೆರೆದಿದ್ದರು ಎಂದು ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಜೂನ್ 20ರಂದು ಇಬ್ಬರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಜೂನ್ 22ರಂದು ಕೋವಿಲ್ ಪಟ್ಟಿ ಸಬ್ ಜೈಲಿನಲ್ಲಿದ್ದ ಇಬ್ಬರು ಅಸ್ವಸ್ಥರಾಗಿರುವುದು ತಿಳಿದು ಬಂದಿತು. ಅಪ್ಪ ಮಗ ಇಬ್ಬರು ಎರಡು ದಿನಗಳಲ್ಲಿ ಇನ್ನಿಲ್ಲವಾದರು. ಇದು ಪೊಲೀಸರಿಂದ ನಡೆದ ಹತ್ಯೆ ಎಂದು ಬೆನ್ಸಿಕ್ ಪರ ವಕೀಲ ಮಣಿಮಾರನ್ ವಾದಿಸಿದ್ದಾರೆ.
ಕೋರ್ಟ್ ಸೂಚನೆಯಂತೆ ಜೂನ್ 25ರಂದು ಜಯರಾಜ್ ಹಾಗೂ ಬೆನ್ಸಿಕ್ ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಈ ನಡುವೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಕೇಂದ್ರ ತನಿಖಾ ತಂಡ ಸಿಬಿಐಗೆ ಪ್ರಕರಣದ ತನಿಖೆ ವಹಿಸಲಾಗಿದೆ.