ಮದ್ರಾಸ್ ಹೈಕೋರ್ಟ್ನ ಮಾಜಿ ಮುಖ್ಯ ಜಸ್ಟೀಸ್ ವಿರುದ್ಧ ಸಿಬಿಐ ತನಿಖೆ
ನವದೆಹಲಿ/ಚೆನ್ನೈ, ಸೆ. 30: ಗುಪ್ತಚರ ಇಲಾಖೆ ನೀಡಿರುವ ವರದಿ ಆಧಾರದ ಮೇಲೆ ಮದ್ರಾಸ್ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶೆ ವಿ.ಕೆ. ತಾಹಿಲ್ರಮಣಿ ವಿರುದ್ಧ ಸಿಬಿಐ ತನಿಖೆಗೆ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ.
ಚೆನ್ನೈನಲ್ಲಿ ಎರಡು ಫ್ಲಾಟ್ ಖರೀದಿ ಅವ್ಯವಹಾರ, ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ರಚನೆಯಾಗಿದ್ದ ಜಸ್ಟಿಸ್ ಮಹದೇವನ್ ನೇತೃತ್ವದ ನ್ಯಾಯಪೀಠವನ್ನು ರದ್ದು ಮಾಡಿದ ಆರೋಪಗಳು ಜಸ್ಟೀಸ್ ತಾಹಿಲ್ರಮಣಿ ಮೇಲಿದೆ. ವಿಗ್ರಹ ಕಳವು ಪ್ರಕರಣದಲ್ಲಿ ತಮಿಳುನಾಡಿನ ಸಚಿವರು, ಸಮಾಜದ ಗಣ್ಯ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ಇದ್ದು, ಇವರೊಂದಿಗೆ ತಾಹಿಲ್ರಮಣಿ ಸಂಪರ್ಕದಲ್ಲಿದ್ದರು ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು.
ಫೋನ್ ಕದ್ದಾಲಿಕೆ: ಎಸಿಪಿ ರಾಮಚಂದ್ರಪ್ಪ ತನಿಖೆ ನಡೆಸಿದ ಸಿಬಿಐ
ಈ ವರದಿ ಆಧಾರ ಮೇಲೆ ನ್ಯಾ. ತಾಹಿಲ್ರಮಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಬಿಐಗೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಆದೇಶಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶೆಯಾಗಿದ್ದ ತಾಹೀಲ್ ಮಣಿ ಅವರನ್ನು ಮೇಘಾಲಯ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶೆಯಾಗಿ ವರ್ಗಾವಣೆಗೊಳಿಸಲು ಸಿಜೆಐ ನೇತೃತ್ವದ ಕೊಲಿಜಿಯಂ ಪೀಠ ನಿರ್ಧರಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ, ಆದೇಶ ಮರುಪರಿಶೀಲಿಸುವಂತೆ ಜಸ್ಟಿಸ್ ತಾಹಿಲ್ರಮಣಿ ಮನವಿ ಸಲ್ಲಿಸಿದ್ದರು. ಕೊಲಿಜಿಯಂ ಈ ಮನವಿಯನ್ನು ಪುರಸ್ಕರಿಸದ ಹಿನ್ನಲೆಯಲ್ಲಿ ಸೆಪ್ಟೆಂಬರ್ 6ರಂದು ತಮ್ಮ ಸ್ಥಾನಕ್ಕೆ ತಾಹಿಲ್ರಮಣಿ ರಾಜೀನಾಮೆ ಸಲ್ಲಿಸಿ ತಕ್ಷಣವೇ ಕರ್ತವ್ಯದಿಂದ ಮುಕ್ತಿ ಹೊಂದಲು ಅವಕಾಶ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಕೋರಿದ್ದರು.
ಫ್ಲಾಟ್ ಖರೀದಿ ಅಕ್ರಮ: ಚೆನ್ನೈನ ಹೊರವಲಯದಲ್ಲಿ ಎರಡು ಹೊಸ ಫ್ಲಾಟ್ಗಳನ್ನು ಖರೀದಿಸಲು 3.18 ಕೋಟಿ ರು ಹೊಂದಿಸಿಕೊಂಡಿದ್ದ ತಾಹಿಲ್ರಮಣಿ 1.62 ಕೋಟಿ ರುಗಳನ್ನು ಎಚ್ಡಿಎಫ್ಸಿ ಬ್ಯಾಂಕಿನಿಂದ ಗೃಹಸಾಲ ರೂಪದಲ್ಲಿ ಪಡೆದಿದ್ದರು. ಮಿಕ್ಕ ದುಡ್ಡನ್ನು(1.56 ಕೋ.ರೂ.) ತಮ್ಮ ಉಳಿತಾಯ ಖಾತೆಯಿಂದ ಹೊಂದಿಸಿದ್ದರು. ತಾಹಿಲ್ ರಮಣಿ ಒಟ್ಟು ಆರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಮೂರು ಖಾತೆಗಳನ್ನು ತಮ್ಮ ಪತಿಯ ಜೊತೆ, ಒಂದು. ತಾಯಿಯ ಜೊತೆ, ಒಂದು ಮಗನ ಜೊತೆ ಮತ್ತೊಂದು ವೇತನ ಖಾತೆ ಹೊಂದಿದ್ದಾರೆ. ಈ ಖಾತೆಗಳ ವ್ಯವಹಾರದ ಬಗ್ಗೆ ವರದಿಯಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ.