ತಮಿಳುನಾಡು ರಾಜಕಾರಣದಲ್ಲಿ ಆಟ ಶುರು ಮಾಡುತ್ತಾರಾ "ಚಿನ್ನಮ್ಮ"?
ಚೆನ್ನೈ, ಜನವರಿ.27: ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಬುಧವಾರ ಬೆಂಗಳೂರಿನ ಪರಪ್ಪನ ಅಗ್ರಹಾಕ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ವಿ.ಕೆ. ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಮತ್ತು ಸಹೋದರ ಸುಧಾಕರ್ ಜೈಲುವಾಸದ ಅವಧಿ ಮುಕ್ತಾಯವಾಗಲಿದೆ. ಕಳೆದ 2017ರ ಫೆಬ್ರವರಿ.14ರಂದು ವಿ.ಕೆ.ಶಶಿಕಲಾರಿಗೆ ಜೈಲುಶಿಕ್ಷೆ ಜೊತೆಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ಮೊದಲ ಅಪರಾಧಿಯಾಗಿದ್ದರು.
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿರುವ ಶಶಿಕಲಾ ಬಿಡುಗಡೆಯಿಂದ ರಾಜ್ಯ ರಾಜಕಾರಣದ ಚಹರೆ ಬದಲಾಗುವ ಸಾಧ್ಯತೆಗಳು ಹೆಚ್ಚಿವೆ. ಎಐಎಡಿಎಂಕೆ ಪಕ್ಷ ತನ್ನ ಪ್ರಾಬಲ್ಯವನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಯಾವ ರೀತಿ ಬದಲಾವಣೆಗಳು ನಡೆಯುತ್ತವೆಯೋ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ಗಾಳಿ?
ತಂಜಾವೂರ್ ಬಳಿಯ ಮನ್ನಾರ್ ಗುಡಿ ಮೂಲದ ವಿ.ಕೆ. ಶಶಿಕಲಾ ಅವರು ಹೆಚ್ಚು ಪ್ರಭಾವಿ ನಾಯಕಿಯಾಗಿದ್ದು, ಥೇವೋರ್ ಸಮುದಾಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಎಐಎಡಿಎಂಕೆ ಪಕ್ಷದ ಶಶಿಕಲಾ ಒಂದು ಕಡೆ ಬಿಡುಗಡೆಯಾಗಿದ್ದಾರೆ. ಮತ್ತೊಂದು ಕಡೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷ ಕಟ್ಟುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಎರಡು ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಎಲ್ಲ ಲೆಕ್ಕಾಚಾರಗಳನ್ನು ತಿರುವು-ಮುರುವು ಮಾಡುವ ಸಾಧ್ಯತೆಗಳೇ ಹೆಚ್ಚಾಗಿವೆ.
ಎಐಎಡಿಎಂಕೆ ಪಕ್ಷದಲ್ಲಿ ಶಶಿಕಲಾ ಅವರಿಗೆ ಸಿಗುತ್ತಾ ಸ್ಥಾನ?
ತಮಿಳುನಾಡಿನಲ್ಲಿ ಆಡಳಿತ ಪಕ್ಷವಾಗಿರುವ ಎಐಎಡಿಎಂಕೆ ಜೊತೆಗೆ ಭಾರತೀಯ ಜನತಾ ಪಕ್ಷವು ಮೈತ್ರಿ ಕುರಿತು ಚರ್ಚೆ ನಡೆಸುತ್ತಿದೆ. ಸ್ಥಳೀಯ ಪ್ರಭಾವಿ ಪಕ್ಷದೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಯೋಜನೆ ರೂಪಿಸಿದೆ. ಇದರ ಮಧ್ಯೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ವಾಪಸ್ಸಾಗಿರುವ ವಿ.ಕೆ. ಶಶಿಕಲಾ ಅವರಿಗೆ ಎಐಡಿಎಂಕೆ ಪಕ್ಷದಲ್ಲಿ ಸ್ಥಾನ ಸಿಗುತ್ತಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿವೆ.
ಜಯಲಲಿತಾ, ಶಶಿಕಲಾ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತು
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತು ವಿ.ಕೆ. ಶಶಿಕಲಾ ನಡುವಿನ ಸ್ನೇಹ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿಸಿದೆ. ಶಶಿಕಲಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಸಂವೇದನಾಶೀಲ ವರದಿ ಅಗತ್ಯವಿಲ್ಲ ಎಂದು ತಮಿಳುನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಎಲ್. ಗಣೇಶನ್ ತಿಳಿಸಿದ್ದರು. ರಾಜ್ಯದಲ್ಲಿ ಎಐಎಡಿಎಂಕೆ ಪಕ್ಷದ ಎರಡು ಎಲೆ ಚಿಹ್ನೆಗೆ ದ್ರೋಹ ಮಾಡಿದರೆ ಅದು ಜಯಲಲಿತಾ ಅವರಿಗೆ ಮಾಡಿದ ದ್ರೋಹ ಆಗುತ್ತದೆ. ಸ್ವತಃ ಶಶಿಕಲಾ ಅವರಿಗೂ ಈ ಬಗ್ಗೆ ಅರಿವಿದೆ. ಹಾಗಾಗಿ ಅವರಿಂದ ಅಂಥ ಕೆಲಸ ಆಗುತ್ತದೆ ಎಂದು ಜನರ ಕೂಡಾ ನಂಬಲು ಸಾಧ್ಯವಿಲ್ಲ. ಶಶಿಕಲಾ ಅವರ ಬಗ್ಗೆ ಮಾತನಾಡುವುದಕ್ಕೆ ಆತುರ ಪಡಬೇಕಾದ ಅಗತ್ಯವಿಲ್ಲ. ಉತ್ತಮವಾದ ಬೆಳವಣಿಗೆಗಳೇ ನಡೆಯುತ್ತವೆ ಎಂದು ವಿಶ್ವಾಸದಿಂದ ಎದುರು ನೋಡೋಣ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎಲ್. ಗಣೇಶನ್ ಹೇಳಿದ್ದಾರೆ.
ಯಾವ ಪಕ್ಷಕ್ಕೆ ಬೇಕಾದರೂ ಸೇರಿಕೊಳ್ಳಿ ಎಂದ ರಜನಿಕಾಂತ್
ತಮಿಳುನಾಡಿನಲ್ಲಿ ರಜನಿ ಮಕ್ಕಳ್ ಮಂಡ್ರಮ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬೇರೆ ಪಕ್ಷ ಸೇರ್ಪಡೆಯಾಗುವುದಕ್ಕೆ ಎಲ್ಲ ಸದಸ್ಯರು ಸ್ವತಂತ್ರರು ಎಂದು ಈಗಾಗಲೇ ಘೋಷಿಸಲಾಗಿತ್ತು. ಪಕ್ಷದ ಜಿಲ್ಲಾಧ್ಯಕ್ಷರು ಡಿಎಂಕೆ ಪಕ್ಷ ಸೇರ್ಪಡೆಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಲಾಗಿತ್ತು. ಅವರು ಯಾವುದೇ ಪಕ್ಷವನ್ನು ಸೇರಿಕೊಂಡರೂ ಕೂಡಾ ಅವರೆಲ್ಲ ರಜನಿ ಅಭಿಮಾನಿಗಳೇ ಎನ್ನುವುದನ್ನು ಮರೆಯುವಂತಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿತ್ತು.
70 ವರ್ಷದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅನಾರೋಗ್ಯದಿಂದಾಗಿ ರಾಜಕೀಯ ಪ್ರವೇಶಕ್ಕೂ ಮೊದಲೇ ರಾಜಕಾರಣದಿಂದ ಹಿಂದೆ ಸರಿದಿದ್ದರು. ಆದರೆ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಎಲ್ಲಿದ್ದರೂ ಅವರು ತಲೈವಾ ಅಭಿಮಾನಿಗಳೇ ಆಗಿರುತ್ತಾರೆ. ರಾಜಕಾರಣ ಪ್ರವೇಶಿಸದೇ ಜನಸೇವೆ ಮಾಡುವುದಾಗಿ ರಜನಿಕಾಂತ್ ಘೋಷಿಸಿದ್ದರು.