ಬಿಜೆಪಿ ವಿರುದ್ಧ ಆರೋಪ: ಪುದುಚೇರಿ ವಿಧಾನಸಭೆ ಚುನಾವಣೆ ಮುಂದೂಡುವ ಬಗ್ಗೆ ಕೋರ್ಟ್ ಪ್ರಶ್ನೆ
ಚೆನ್ನೈ, ಮಾರ್ಚ್ 26: ಮುಂದಿನ ತಿಂಗಳು ನಡೆಯಲಿರುವ ಐದು ವಿಧಾನಸಭೆ ಚುನಾವಣೆಗಳ ಪೈಕಿ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಮೇಲೆ ಕರಿನೆರಳು ಆವರಿಸಿದೆ. ಏಪ್ರಿಲ್ 6ರಂದು ನಿಗದಿಯಾಗಿರುವ ಪುದುಚೆರಿ ವಿಧಾನಸಭೆ ಚುನಾವಣೆಯನ್ನು ಮುಂದೂಡಬಹುದೇ ಎಂದು ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
ಬಿಜೆಪಿಯು ಚುನಾವಣಾ ಪ್ರಚಾರದ ಉದ್ದೇಶಕ್ಕಾಗಿ ಅಕ್ರಮವಾಗಿ ಮತದಾರರ ಆಧಾರ್ ವಿವರಗಳನ್ನು ಹಾಗೂ ಅವರ ನೋಂದಾಯಿತ ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿ ದುರ್ಬಳಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಈ ಪ್ರಶ್ನೆ ಇರಿಸಿದೆ.
ಟೈಮ್ಸ್ ನೌ ಸಮೀಕ್ಷೆ: ಪುದುಚೇರಿಯಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ
'ಇದು ಬಹಳ ಗಂಭೀರವಾದ ಕಳವಳಕಾರಿ ವಿಚಾರ' ಎಂದು ವ್ಯಾಖ್ಯಾನಿಸಿದ ನ್ಯಾಯಾಲಯ, ಮಾರ್ಚ್ 30ರ ಒಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿತು. ಈ ವಿಚಾರದಲ್ಲಿ ಚುನಾವಣಾ ಆಯೋಗ ಮೂಕಪ್ರೇಕ್ಷಕನಂತೆ ನಿಂತಿದೆ. ವಿಷಯವನ್ನು ಅದರ ಅಗತ್ಯಕ್ಕೆ ತಕ್ಕಂತೆ ಗಂಭೀರವಾಗಿ ಪರಿಗಣಿಸಲಿ ಎಂದು ಸೂಚನೆ ನೀಡಿತು.
'ಈ ಪ್ರಕರಣದಲ್ಲಿ ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸುತ್ತಿದೆ ಎಂದು ಚುನಾವಣಾ ಆಯೋಗ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಇಂತಹ ಎಲ್ಲ ಪ್ರಕರಣಗಳೂ ಚುನಾವಣಾ ಆಯೋಗದ ಕರ್ತವ್ಯ ಮತ್ತು ಅಧಿಕಾರದಲ್ಲಿ ಬರುತ್ತವೆ. ಈ ಆರೋಪದ ಬಗ್ಗೆ ಅದು ತಕ್ಷಣವೇ ಗಮನ ಹರಿಸಬೇಕು. ಹಾಗೂ ಅದರ ಗಂಭೀರತೆಗೆ ಅನುಗುಣವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರನ್ನು ಒಳಗೊಂಡ ಇಬ್ಬರು ಸದಸ್ಯರ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.