ದ್ರಾವಿಡ ನಾಡು ಉದಯವಾದ್ರೆ, ಡಿಎಂಕೆ ಬೆಂಬಲ!
ಚೆನ್ನೈ, ಮಾರ್ಚ್ 18: ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ವಿರುದ್ಧ ಸಿಡಿದಿರುವ ಬೆನ್ನಲ್ಲೇ ಪ್ರತ್ಯೇಕ ದ್ರಾವಿಡ ನಾಡಿನ ಬಗ್ಗೆ ಚರ್ಚೆ ನಡೆಯುತ್ತಿದೆ. ದಕ್ಷಿಣ ರಾಜ್ಯಗಳೆಲ್ಲಾ ಒಗ್ಗೂಡಿ ದ್ರಾವಿಡನಾಡು' ಉದಯಿಸುವ ಸಂದರ್ಭ ಬಂದರೆ ಡಿಎಂಕೆ ಬೆಂಬಲಿಸಲಿದೆ ಎಂದು ಡಿಎಂಕೆ ನಾಯಕ ಸ್ಟಾಲಿನ್ ಘೋಷಿಸಿದ್ದಾರೆ.
ದಕ್ಷಿಣ ಭಾರತದವರು ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ಅದರಲ್ಲಿ ಕೇಂದ್ರದಿಂದ ಅಲ್ಪ ಪ್ರಮಾಣದಷ್ಟು ಮಾತ್ರ ರಾಜ್ಯಗಳಿಗೆ ಹಿಂತಿರುಗುತ್ತಿದೆ ಎಂದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಅಸಮಾಧಾನ ಹೊರ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?
ದಕ್ಷಿಣ ರಾಜ್ಯಗಳೆಲ್ಲಾ ಒಗ್ಗೂಡಿ 'ದ್ರಾವಿಡನಾಡು' ದೇಶದ ಕನಸು ಕಾಣುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಪ್ರತ್ಯೇಕ ದೇಶದ ಪರಿಸ್ಥಿತಿ ಬಂದರೆ ಬೆಂಬಲಿಸುವೆ. ಪ್ರತ್ಯೇಕ ರಾಷ್ಟ್ರವಾಗಲಿ ಎಂದು ನಾನು ಬಯಸುವೆ ಕೂಡ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷ 1949ರಲ್ಲಿ ಜಾರಿಗೆ ಬಂದಾಗ ಪ್ರತ್ಯೇಕ ರಾಷ್ಟ್ರ ನಮ್ಮ ಪಕ್ಷದ ಬೇಡಿಕೆಗಳಲ್ಲಿ ಒಂದಾಗಿತ್ತು, ನಂತರ ಅದನ್ನು ಕೈಬಿಡಲಾಗಿತ್ತು ಎಂದಿದ್ದಾರೆ.
ನಾವು ಕಟ್ಟುತ್ತಿರುವ ತೆರಿಗೆ ದೊಡ್ಡ ಪ್ರಮಾಣದ್ದು. ನಮ್ಮ ತೆರಿಗೆ ಹಣ ಉತ್ತರ ಭಾರತಕ್ಕೆ ಸಹಾಯಧನದಂತೆ ಆಗುತ್ತಿದೆ. ಉತ್ತರ ಭಾರತ ರಾಜ್ಯಗಳು ಅಭಿವೃದ್ಧಿ ಕಾಣುತ್ತಿಲ್ಲ. ಉತ್ತರ ಭಾರತದಲ್ಲಿ ಜನಸಂಖ್ಯೆ ಮಿತಿ ಮೀರುತ್ತಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿವೆ. ಯಾವುದೇ ಯೋಜನೆ ಜಾರಿಯಲ್ಲಿ ಜನಸಂಖ್ಯೆ ಪ್ರಮಾಣ ಮುಖ್ಯವಾಗುತ್ತದೆ. ಆದರಿಂದಲೇ ಉತ್ತರ ಭಾರತದ ರಾಜ್ಯಗಳು ಹೆಚ್ಚು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ತಿರುಗಿಬಿದ್ದಿದ್ದರು.
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡಾ ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಸಿಕ್ಕಿಲ್ಲ ಎಂದು ಮುನಿಸಿಕೊಂಡಿದ್ದಾರೆ.