'ಬುರೇವಿ' ಚಂಡಮಾರುತ; ತಮಿಳುನಾಡು, ಕೇರಳದಲ್ಲಿ ಹೈ ಅಲರ್ಟ್
ಚೆನ್ನೈ, ಡಿಸೆಂಬರ್ 04 : ತಮಿಳುನಾಡು ಮತ್ತು ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಎಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. 'ಬುರೇವಿ' ಚಂಡಮಾರುತದ ಪರಿಣಾಮ ಎರಡು ದಿನ ಮಳೆಯಾಗುವ ಮುನ್ಸೂಚನೆ ಕೊಡಲಾಗಿದೆ.
ಚೆನ್ನೈ ಮತ್ತು ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 4 ಮತ್ತು 5ರಂದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜೋರಾಗಿ ಗಾಳಿ ಬೀಸಲಿದ್ದು, ಹೆಚ್ಚು ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳ ಸಮೀಪಿಸಿದ ಬುರೇವಿ ಚಂಡಮಾರುತ: ರಾಜ್ಯದಲ್ಲಿಯೂ ಮಳೆ
ತಮಿಳುನಾಡು ಸರ್ಕಾರ ಚಂಡಮಾರುತ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಧುರೈ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯಾಹ್ನ 12 ಗಂಟೆ ತನಕ ವಿಮಾನಗಳ ಆಗಮನ ನಿಷೇಧಿಸಲಾಗಿದೆ.
ಬುರೇವಿ ಚಂಡಮಾರುತ; ಬೆಂಗಳೂರಲ್ಲಿ ಬೆಳಗ್ಗೆಯೇ ಮಳೆ
ಕೇಂದ್ರ ಸರ್ಕಾರ ಚಂಡಮಾರುತ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದೆ. ಸೇನೆ, ನೌಕಾಪಡೆ, ಎನ್ಡಿಆರ್ಎಫ್, ವಿವಿಧ ಇಲಾಖೆಗಳು, ಡಿಜಿಪಿ, ಕೇರಳ ಮತ್ತು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಾಯುಭಾರ ಕುಸಿತ; 4 ದಿನ ಕರ್ನಾಟಕದಲ್ಲಿ ಮಳೆ
"ನಾವು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ. ಗೃಹ ಸಚಿವ ಅಮಿತ್ ಶಾ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಿ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಚಂಡಮಾರುತದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದರೆ ಮಾಹಿತಿ ನೀಡಲು ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. 2891 ತಾತ್ಕಾಲಿಕ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
'ಬುರೇವಿ' ಚಂಡಮಾರುತ ತಮಿಳುನಾಡು ಮತ್ತು ಕೇರಳ ಕರಾವಳಿ ಭಾಗದ ಮೂಲಕ ಸಾಗಿ ಶ್ರೀಲಂಕಾಗೆ ತಲುಪಲಿದೆ. ಕರ್ನಾಟಕದ ಮೇಲೆ ಇದು ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ, ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಿದೆ. ತಮಿಳುನಾಡು, ಕೇರಳ ಕರಾವಳಿ ಭಾಗದಲ್ಲಿ ಇದರಿಂದಾಗಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.