ಬ್ರಿಟನ್ನಿನಿಂದ 15ನೇ ಶತಮಾನದ ರಾಮ, ಸೀತಾ ಮತ್ತು ಲಕ್ಷ್ಮಣ ರಿಟರ್ನ್
ಚೆನ್ನೈ, ಸೆ. 16: ವಿಜಯನಗರ ಸಾಮಾಜ್ರ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ ಸಮೇತ ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಪೊಲೀಸರು ಭಾರತಕ್ಕೆ ಮರಳಿಸಿದೆ. ತಮಿಳುನಾಡಿನ ದೇವಸ್ಥಾನದಿಂದ ಈ ವಿಗ್ರಹಗಳನ್ನು ಕಳುವು ಮಾಡಲಾಗಿತ್ತು.
ಕ್ರಿ.ಶ 15 ನೇ ಶತಮಾನಕ್ಕೆ ಸೇರಿರುವ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಲಂನ ಶ್ರೀ ರಾಜಗೋಪಾಲಸ್ವಾಮಿ ದೇವಸ್ಥಾನದಿಂದ 1978ರಲ್ಲಿ ಕಳವಾಗಿತ್ತು.
ಕಳುವಾಗಿರುವ ವಿಗ್ರಹಗಳು ಲಂಡನ್ನಿನಲ್ಲಿರುವ ವಿಷಯ ಅರಿತ ಭಾರತ ಸರ್ಕಾರವು ಈ ಪುರಾತನ ವಿಗ್ರಹಗಳನ್ನು ಹಿಂದಕ್ಕೆ ತರೆಸಿಕೊಳ್ಳುವ ಪ್ರಯತ್ನಪಟ್ಟಿತ್ತು. ಈ ನಿಟ್ಟಿನಲ್ಲಿ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಇಂಡಿಯಾ ಪ್ರೈಡ್ ಪ್ರಾಜೆಕ್ ವತಿಯಿಂದ ರಾಮ, ಸೀತಾ, ಲಕ್ಷ್ಮಣ ವಿಗ್ರಹ ಹಿಂದಿರುಗಿಸಲು ಕೋರಲಾಗಿತ್ತು.
ತಮಿಳುನಾಡು ಸರ್ಕಾರ ಕೈ ಸೇರಿದ ವಿಗ್ರಹ
ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್ ಎಸ್ ಪಟೇಲ್ ಅವರು ಲಂಡನ್ನಿನ ಹೈ ಕಮಿಷನ್ ಬಳಿ ಇದ್ದ ಪುರಾತನ ವಿಗ್ರಹಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಿದರು.
ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆಯ 3 ಅಡಿ ಎತ್ತರ ಕಂಚಿನ ಪ್ರತಿಮೆ ತಮಿಳುನಾಡಿನಿಂದ ಕಳುವಾಗಿತ್ತು. ಈಗ ಭಾರತಕ್ಕೆ ಮರಳಿದೆ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.
ಈ ಪ್ರಕ್ರಿಯೆಯಲ್ಲಿ ತಮಿಳನಾಡು ಸರ್ಕಾರ, ಭಾರತೀಯ ರಾಯಭಾರ ಕಚೇರಿ, ಹಾಗೂ ಭಾರತೀಯ ಸರ್ವೆಕ್ಷಣ ಸಂಸ್ಥೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದ 13 ಐತಿಹಾಸಿಕ ಸಾಮಾಗ್ರಿಗಳು ಭಾರತಕ್ಕೆ ವಿದೇಶದಿಂದ ವಾಪಸ್ ಬಂದಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 40 ಪುರಾತನ ಸಂಗ್ರಹ ಯೋಗ್ಯ ವಸ್ತುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇನ್ನಷ್ಟು ಬೆಲೆ ಬಾಳುವ ವಸ್ತುಗಳು ಭಾರತಕ್ಕೆ ಮರಳಲಿವೆ, ವಾಗ್ದೇವಿ ವಿಗ್ರಹವನ್ನು ಬ್ರಿಟಿಷ್ ಮ್ಯೂಸಿಯಂನಿಂದ ಭಾರತಕ್ಕೆ ಶೀಘ್ರವೇ ತರೆಸಿಕೊಳ್ಳಲಾಗುವುದು ಎಂದು ಪಟೇಲ್ ಹೇಳಿದರು.