ಅಮ್ಮನ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ: ಬಾಲಕನ ಹತ್ಯೆ
ಮದುರೆ, ಫೆಬ್ರವರಿ 24: ಅನೈತಿಕ ಸಂಬಂಧವನ್ನು ಏನೂ ಅರಿಯದ ಮುಗ್ಧ ಬಾಲಕನ ಜೀವಕ್ಕೆ ಎರವಾಗಿದೆ. ತಾಯಿಯ ಅನೈತಿಕ ಸಂಬಂಧದ ಬಗ್ಗೆ ಅಪ್ಪನಿಗೆ ಮಾಹಿತಿ ನೀಡಿದ ಮಗನನ್ನು ಆಕೆಯ ಗೆಳೆಯ ಮನಬಂದಂತೆ ಹೊಡೆದು ಸಾಯಿಸಿದ ಅಮಾನವೀಯ ಕೃತ್ಯ ತಮಿಳು ನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮದುರೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಬಾಲಕನ ತಾಯಿಯನ್ನು ಬಂಧಿಸಲಾಗಿದೆ. ತನ್ನ ಅನೈತಿಕ ಸಂಬಂಧದ ಮಾಹಿತಿಯನ್ನು ಹೊರಗೆಡವಿದ ಮಗುವನ್ನು ಲಾಡ್ಜ್ನಲ್ಲಿ ಕ್ರೂರವಾಗಿ ಥಳಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ.
ಕಾರ್ ಡ್ರೈವರ್ ಜತೆ ಲವ್ವಿ-ಡವ್ವಿ, ರಜೆಗೆ ಬಂದ ಯೋಧನನ್ನೇ ಕೊಂದ ಪತ್ನಿ!
ವಿಪರೀತ ಹೊಡೆತ ತಿಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಲ್ಕು ವರ್ಷದ ಮಗು ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮಗುವನ್ನು ಕೊಂದ ವ್ಯಕ್ತಿ ಮತ್ತು ತನ್ನ ಪತ್ನಿಯ ವಿರುದ್ಧ ಬಾಲಕನ ತಂದೆ ದೂರು ನೀಡಿದ್ದಾರೆ.
ಮೃತಪಟ್ಟ ದುರ್ದೈವಿ ಬಾಲಕನನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಪೊಲೀಸರು ಲೋಕೇಶ್ನ ತಾಯಿ ದೀಪಾಳನ್ನು ಬಂಧಿಸಿದ್ದಾರೆ. ಆಕೆಯ ಗೆಳೆಯ ಸೋರಿಮುತ್ತು ನಾಪತ್ತೆಯಾಗಿದ್ದಾನೆ. ದೀಪಾ ಹಾಗೂ ಸೋರಿಮುತ್ತು ನಡುವೆ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಲಾಗಿದೆ.
60ರ ವೃದ್ಧೆ ಜೊತೆ 22ರ ಯುವಕನ ಲವ್ವಿ-ಡವ್ವಿ, ಕೇಸ್ ಹಾಕಿದ ಮಕ್ಕಳು!
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಗ್ರಾಮದವರಾದ ದೀಪಾಳಿಗೆ 2015ರಲ್ಲಿ ಆಂಟೋನಿ ಪ್ರಕಾಶ್ ಅವರೊಂದಿಗೆ ಮದುವೆಯಾಗಿತ್ತು. ಈ ದಂಪತಿ ಆಂಟೋನಿ ಅವರ ವಿಕ್ರಮನಸಿಂಗಪುರಂ ಎಂಬ ಗ್ರಾಮದಲ್ಲಿ ನೆಲೆಸಿದ್ದರು. ಅವರಿಗೆ ಲೋಕೇಶ ಎಂಬ 4 ವರ್ಷದ ಮಗನಿದ್ದ.
ಲಾಡ್ಜ್ಗೆ ತೆರಳಿದ್ದರು
ದೀಪಾ ಮತ್ತು ಅದೇ ಗ್ರಾಮದ ಸೋರಿಮುತ್ತು ನಡುವೆ ವಿವಾಹೇತರ ಸಂಬಂಧ ಬೆಳೆದಿತ್ತು. ಕಳೆದ ಶುಕ್ರವಾರ ದೀಪಾ ಮತ್ತು ಆಕೆಯ ಗೆಳೆಯ ಸೋರಿಮುತ್ತು ಇಬ್ಬರೂ ಆಂಟೋನಿ ಕೆಲಸಕ್ಕೆಂದು ತೆರಳಿದ ಸಮಯದಲ್ಲಿ ತಿರುನೆಲ್ವೇಲಿಯ ಲಾಡ್ಜ್ ಒಂದಕ್ಕೆ ಹೋಗಿದ್ದರು. ನಾಲ್ಕು ವರ್ಷದ ಬಾಲಕನನ್ನೂ ದೀಪಾ ತಮ್ಮೊಂದಿಗೆ ಕರೆದೊಯ್ದಿದ್ದರು.
ಕರೆ ಮಾಡುವಂತೆ ಪತ್ನಿಗೆ ಸೂಚನೆ
ಪತ್ನಿ ಮನೆಯಲ್ಲಿ ಇಲ್ಲ ಎನ್ನುವುದನ್ನು ತಿಳಿದ ಆಂಟೋನಿ, ಆಕೆಯ ಮೇಲೆ ಅನುಮಾನದಿಂದ ತನಗೆ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡುವಂತೆ ದೀಪಾಳಿಗೆ ಸೂಚಿಸಿದ್ದ. ಆದರೆ ದೀಪಾ ಗಂಡನಿಗೆ ವಾಪಸ್ ಕರೆ ಮಾಡಲಿಲ್ಲ. ಇದರಿಂದ ಆತನ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ದೀಪಾ ಮತ್ತು ಸೋರಿಮುತ್ತು ಇಬ್ಬರೂ ಲೋಕೇಶ್ನನ್ನು ತಮ್ಮ ಕೊಠಡಿಯಿಂದ ಹೊರಗೆ ಹಾಕಿದ್ದರು. ಸೋರಿಮುತ್ತು ಆತನ ಕೆನ್ನೆಗೂ ಬಾರಿಸಿದ್ದ ಎನ್ನಲಾಗಿದೆ.
ಮಗ ನೀಡಿದ ಮಾಹಿತಿ
ಆಂಟೋನಿ ಕರೆ ಮಾಡಿದಾಗ ಲೋಕೇಶ್ ಅಮ್ಮನ ಮೊಬೈಲ್ ಫೋನ್ನೊಂದಿಗೆ ಕೊಠಡಿಯಿಂದ ಹೊರಗೆ ಇದ್ದ. ಅಪ್ಪನ ಕರೆ ಸ್ವೀಕರಿಸಿದ ಲೋಕೇಶ್, ತನ್ನ ಅಮ್ಮ ಹಾಗೂ ಸೋರಿಮುತ್ತು ಜತೆಯಲ್ಲಿ ಇರುವುದನ್ನು ತಿಳಿಸಿದ್ದ. ಮನೆಯಿಂದ ಲಾಡ್ಜ್ಗೆ ಬಂದಿದ್ದು ಮತ್ತು ಸೋರಿಮುತ್ತು ತನಗೆ ಹೊಡೆದಿದ್ದನ್ನು ತನಗೆ ಅರ್ಥವಾದಂತೆ ಆತ ವಿವರಿಸಿದ್ದ.
ಮಗುವಿನ ಮೇಲೆ ಹಲ್ಲೆ
ಲೋಕೇಶ ತನ್ನ ತಂದೆಗೆ ಎಲ್ಲ ಮಾಹಿತಿ ನೀಡಿರುವುದು ದೀಪಾ ಮತ್ತು ಸೋರಿಮುತ್ತುಗೆ ತಿಳಿದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಮಗುವಿನ ಮೇಲೆ ಕೋಪಗೊಂಡ ಸೋರಿಮುತ್ತು ಮನಬಂದಂತೆ ಏಟು ಕೊಡತೊಡಗಿದ. ಇದರಿಂದ ಮಗು ಪ್ರಜ್ಞೆ ಕಳೆದುಕೊಂಡಿತು. ಗಾಬರಿಗೊಂಡ ಅವರಿಬ್ಬರೂ ಬಾಲಕನನ್ನು ತಿರುನೆಲ್ವೇಲಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಮಗುವನ್ನು ದಾಖಲು ಮಾಡಿದ ನಂತರ ಸೋರಿಮುತ್ತು ಅಲ್ಲಿಂದ ಪರಾರಿಯಾದ. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.