ನನಗೆ ಕೇಸರಿ ಬಣ್ಣ ಬಳಿಯಲು ಬಿಜೆಪಿ ಪ್ರಯತ್ನ: ರಜನಿಕಾಂತ್ ಕಿಡಿ
ಚೆನ್ನೈ, ನವೆಂಬರ್ 8: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಶ್ಲಾಘಿಸುವ ಮೂಲಕ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತಾವು ಕೇಸರಿ ಪಾಳೆಯದಿಂದ ದೂರವೇ ಇರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ತಮ್ಮನ್ನು ಕೇಸರೀಕರಣ ಮಾಡಲು ಪ್ರಯತ್ನಿಸುತ್ತಿದೆ. ಆದರೆ ತಾವು ಅದರ ಜಾಲದಲ್ಲಿ ಬೀಳುವುದಿಲ್ಲ ಎಂದು ಹೇಳಿರುವ ಅವರು, ಬಿಜೆಪಿ ಸೇರುವ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ಕಮಲ್, ರಜನಿ ರಾಜಕೀಯದಿಂದ ದೂರ ಇರಿ ಎಂದ ಚಿರಂಜೀವಿ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಇತ್ತೀಚೆಗೆ ತಮಿಳುನಾಡು ಬಿಜೆಪಿ ಘಟಕ ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರು ಕೇಸರಿ ದಿರಿಸಿನಲ್ಲಿ ಇರುವ ಚಿತ್ರವನ್ನು ಬಿಡುಗಡೆ ಮಾಡಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು. ತಿರುವಳ್ಳುವರ್ ಅವರನ್ನು ಕೇಸರಿಮಯ ಮಾಡಲು ಬಿಜೆಪಿ ಹೊರಟಿದೆ. ಆದರೆ ನಾನಾಗಲೀ, ತಿರುವಳ್ಳುವರ್ ಅವರಾಗಲೀ ಬಿಜೆಪಿಯ ಜಾಲದೊಳಗೆ ಬೀಳುವುದಿಲ್ಲ ಎಂದು ರಜನಿಕಾಂತ್ ಪ್ರತಿಕ್ರಿಯಿಸಿದರು.
ಕೇಸರೀಕರಣ ಮಾಡುವ ಪ್ರಯತ್ನ
'ನನಗೆ ಬಿಜೆಪಿ ಯಾವುದೇ ಆಹ್ವಾನ ನೀಡಿಲ್ಲ. ಆದರೆ ತಿರುವಳ್ಳುವರ್ ಅವರನ್ನು ಕೇಸರೀಕರಣ ಮಾಡುತ್ತಿರುವಂತೆಯೇ ಬಿಜೆಪಿ ನನ್ನನ್ನು ಕೂಡ ಕೇಸರೀಕರಣ ಮಾಡಲು ಪ್ರಯತ್ನಿಸುತ್ತಿದೆ. ನಾನು ಇದರೊಳಗೆ ಸಿಲುಕುವುದಿಲ್ಲ. ತಿರುವಳ್ಳುವರ್ ಕೂಡ ಬೀಳಲಾರರು' ಎಂದು ತಮಿಳುನಾಡು ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್ ಅವರು ತಮ್ಮನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂಬ ವರದಿಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರು ಮಾಡಿಕೊಂಡಿದ್ದಾರೆ
'ತಿರುವಳ್ಳುವರ್ ಅವರು ಕೇಸರಿ ಶಾಲು ಧರಿಸಿದ್ದಂತೆ ಮಾಡಿರುವುದು ಬಿಜೆಪಿಯ ಅಜೆಂಡಾ. ಅದೇ ರೀತಿ ಮಾಡಿ ಎಂದು ಅವರು ಇತರರಿಗೆ ಹೇಳಿಲ್ಲ. ಇದರಲ್ಲಿ ವಿರೋಧಿಸುವಂಥದ್ದು ಏನೂ ಇಲ್ಲ. ಅದನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಡಿಕೊಂಡಿದ್ದಾರೆ. ಇಂತಹ ವಿಚಾರವನ್ನು ನಾವು ದೊಡ್ಡದಾಗಿ ಚರ್ಚೆ ಮಾಡುವುದು ಬಾಲಿಶ ಎನಿಸುತ್ತದೆ. ದೇಶದಲ್ಲಿ ಚರ್ಚೆ ನಡೆಸುವ ಅಗತ್ಯವಿರುವ ಇನ್ನೂ ಅನೇಕ ಮಹತ್ವದ ಸಮಸ್ಯೆಗಳಿವೆ' ಎಂದರು.
ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಬುದ್ಧಿವಂತಿಕೆಯ ನಡೆ: ರಜನಿಕಾಂತ್ ಪ್ರಶಂಸೆ
ಬಿಜೆಪಿಯವ ಎಂದು ಬಿಂಬಿಸಲು ಯತ್ನ
'ನಾನು ಬಿಜೆಪಿಯ ವ್ಯಕ್ತಿ ಎಂಬ ಭಾವನೆ ಮೂಡಿಸಲು ಕೆಲವು ಜನರು ಮತ್ತು ಮಾಧ್ಯಮಗಳು ಪ್ರಯತ್ನಿಸುತ್ತಿದ್ದಾರೆ. ಅದು ಸತ್ಯವಲ್ಲ. ಯಾವುದೇ ರಾಜಕೀಯ ಪಕ್ಷಗಳು ತಮ್ಮನ್ನು ಯಾರಾದರೂ ಸೇರಿಕೊಂಡರೆ ಖುಷಿ ಪಡುತ್ತವೆ. ಆದರೆ ಇದರಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನನಗೆ ಬಿಟ್ಟ ವಿಚಾರ' ಎಂದು ಹೇಳಿದರು.
ಪೊನ್ ರಾಧಾಕೃಷ್ಣನ್ ಅವರು ಬಿಜೆಪಿ ಸೇರಲು ನನಗೆ ಯಾವುದೇ ಆಹ್ವಾನ ನೀಡಿಲ್ಲ. ರಾಜಕೀಯ ಪಕ್ಷ ಇದ್ದಾಗ ಜನರು ನಾವು ಅದನ್ನು ಸೇರಬಹುದು ಎನ್ನುತ್ತಾರೆ. ಆದರೆ ನನ್ನಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದರು.
ನಟನೆ ಮುಂದುವರಿಕೆಗೆ ನಿರ್ಧಾರ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಾಲ್ಗೊಳ್ಳುವ ವಿಚಾರವನ್ನು ನಿರಾಕರಿಸಿದ ರಜನಿಕಾಂತ್, ರಾಜಕೀಯಕ್ಕೆ ಪ್ರವೇಶಿಸಿದ ಬಳಿಕವೂ ಸಿನಿಮಾಗಳನ್ನು ನಟಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದರು. 'ತಮ್ಮ ಪಕ್ಷ ಸ್ಥಾಪಿಸಿದ ಬಳಿಕ ಮುಖ್ಯಮಂತ್ರಿ ಆಗುವವರೆಗೂ ಎಂಜಿಆರ್ ನಟನೆ ಮುಂದುವರಿಸಿದ್ದರು. ತಮಿಳುನಾಡಿನಲ್ಲಿ ಈಗಲೂ ಪ್ರಬಲ ಮತ್ತು ಸಮರ್ಥ ನಾಯಕತ್ವಕ್ಕೆ ಕೊರತೆ ಇದೆ' ಎಂದು ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದ ಬಳಿಕ ರಾಜ್ಯದಲ್ಲಿ ರಾಜಕೀಯ ನಿರ್ವಾತ ಉಂಟಾಗಿದೆ ಎಂಬುದನ್ನು ಪುನರುಚ್ಚರಿಸಿದರು.
ನರೇಂದ್ರ ಮೋದಿ- ಅಮಿತ್ ಶಾ ಕೃಷ್ಣಾರ್ಜುನರಿದ್ದಂತೆ: ನಟ ರಜನೀಕಾಂತ್
ಕೇಂದ್ರ ಸರ್ಕಾರದ ಹೊಣೆ
'ದೇಶದಲ್ಲಿ ಆರ್ಥಿಕ ಬೆಳವಣಿಗೆಯು ನಿಧಾನಗತಿ ಹೊಂದಿರುವುದು ಸತ್ಯ. ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಂತೆ ಗಮನ ಹರಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು. ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಜನರು ತಾಳ್ಮೆಯಿಂದ ವರ್ತಿಸಬೇಕು ಮತ್ತು ತೀರ್ಪನ್ನು ಗೌರವಿಸಬೇಕು ಎಂದು ಹೇಳಿದರು.