ಶಶಿಕಲಾ ರಾಜಕೀಯ ನಿರ್ಗಮನ "ಅಮ್ಮ"ನ ಕನಸು ಈಡೇರಿಸಲು ಸಹಕಾರಿಯಾಗಲಿದೆ; ಸಿಟಿ ರವಿ
ಚೆನ್ನೈ, ಮಾರ್ಚ್ 4: ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್ ಬುಧವಾರ ರಾಜಕೀಯಕ್ಕೆ ವಿದಾಯ ಘೋಷಿಸಿದ್ದು, ತಮ್ಮ ಈ ನಿರ್ಧಾರ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪ್ರಗತಿಪರ ಹಾಗೂ ಸಮೃದ್ಧ ತಮಿಳುನಾಡಿನ ಕನಸು ನೆರವೇರಲು ಸಹಾಯ ಮಾಡಲಿದೆ ಎಂದು ಹೇಳಿದ್ದರು.
ಶಶಿಕಲಾ ಅವರ ಈ ಘೋಷಣೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, "ಶಶಿಕಲಾ ಅವರ ಈ ನಿರ್ಧಾರವನ್ನು ಬಿಜೆಪಿ ಸ್ವಾಗತಿಸುತ್ತದೆ. ಅವರ ನಿರ್ಧಾರ "ಅಮ್ಮಾ" ಅವರ ಕನಸುಗಳನ್ನು ಈಡೇರಿಸುತ್ತದೆ" ಎಂದು ಹೇಳಿದ್ದಾರೆ.
ಅಚ್ಚರಿಯ ಬೆಳವಣಿಗೆ: ರಾಜಕೀಯ ಸನ್ಯಾಸತ್ವ ಪ್ರಕಟಿಸಿದ ಶಶಿಕಲಾ
ರಾಜಕೀಯಕ್ಕೆ ವಿದಾಯ ಹೇಳಿರುವುದು ಶಶಿಕಲಾ ಅವರ ಸ್ವ ನಿರ್ಧಾರ ಎಂಬುದನ್ನು ಒತ್ತಿ ಹೇಳಿದ ಸಿ.ಟಿ.ರವಿ, "ತಮಿಳುನಾಡಿನಲ್ಲಿ ಎನ್ಡಿಎ ಬಲಪಡಿಸುವುದು ಹಾಗೂ 234 ಕ್ಷೇತ್ರಗಳಲ್ಲಿಯೂ ಗೆಲ್ಲುವುದು ಬಿಜೆಪಿ ಗುರಿ. ಡಿಎಂಕೆ ಪಕ್ಷವನ್ನು ಸೋಲಿಸಿ ಎಐಎಡಿಎಂಕೆ ಅಧಿಕಾರ ಪುನರ್ಪ್ರತಿಷ್ಠಾಪನೆ ಮಾಡುವುದು ನಮ್ಮ ಮುಖ್ಯ ಉದ್ದೇಶ" ಎಂದು ಹೇಳಿದ್ದಾರೆ.
"ಜಯಲಲಿತಾ ಅವರ ಕನಸುಗಳನ್ನು ನೆರವೇರಿಸಲು ಎಐಎಡಿಎಂಕೆ ಅಧಿಕಾರಕ್ಕೆ ಮರಳಲೇಬೇಕು. ಅಮ್ಮಾ ಯಾವಾಗಲೂ ಒಗ್ಗಟ್ಟಾದ ಹಾಗೂ ಬಲವಾದ ಎಐಎಡಿಎಂಕೆ ಪಕ್ಷ ಸ್ಥಾಪನೆ ಬಯಸಿದ್ದರು. ಪ್ರಗತಿಪರ ಹಾಗೂ ಸಮೃದ್ಧ ತಮಿಳುನಾಡಿನ ಕನಸು ಕಂಡಿದ್ದರು. ಅವರ ಕನಸುಗಳು ಈಡೇರಲಿವೆ" ಎಂದು ಭರವಸೆ ವ್ಯಕ್ತಪಡಿಸಿದರು.
ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಕೂಡ ಜಯಲಲಿತಾ ಅವರ ಕನಸು ಈಡೇರಿಸಲು ಪ್ರಯತ್ನಿಸುತ್ತಾರೆ ಎನ್ನುವ ಭರವಸೆಯಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷ ತಮಿಳುನಾಡಿಗೆ ಉನ್ನತಿ ತರಲಿದೆ ಎಂದರು.
ಬುಧವಾರ ತಮ್ಮ ರಾಜಕೀಯ ವಿದಾಯದ ನಿರ್ಧಾರ ಪ್ರಕಟಿಸಿದ್ದ ಶಶಿಕಲಾ ನಟರಾಜನ್, "ಜಯಾ ಬದುಕಿದ್ದಾಗ ನಾನು ಎಂದಿಗೂ ಅಧಿಕಾರ ಅಥವಾ ಸ್ಥಾನಮಾನದ ಹಿಂದೆ ಹೋಗಿರಲಿಲ್ಲ. ಆಕೆ ನಿಧನರಾದ ಬಳಿಕವೂ ಅದನ್ನು ಮಾಡುವುದಿಲ್ಲ. ನಾನು ರಾಜಕಾರಣ ತ್ಯಜಿಸುತ್ತಿದ್ದೇನೆ. ಆದರೆ ಆಕೆಯ ಪಕ್ಷದ ಗೆಲುವಿಗೆ ಪ್ರಾರ್ಥಿಸುತ್ತೇನೆ. ಆಕೆಯ ಪಾರಂಪರ್ಯ ಮುಂದುವರಿಯಲಿ" ಎಂದು ಹೇಳಿದ್ದರು.
ತಮಿಳುನಾಡು ಚುನಾವಣೆಗೆ ಎರಡು ವಾರ ಬಾಕಿ ಇರುವಾಗಲೇ ಶಶಿಕಲಾ ಅವರ ಈ ನಿರ್ಧಾರ ರಾಜ್ಯದ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಜೈಲಿನಿಂದ ಚೆನ್ನೈಗೆ ಶಶಿಕಲಾ ವಾಪಸ್ಸಾದ ನಂತರ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಶಶಿಕಲಾ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಏಕಾಏಕಿ ಶಶಿಕಲಾ ರಾಜಕೀಯ ವಿದಾಯ ಘೋಷಿಸಿದ್ದರು.