ರಜನಿಕಾಂತ್ ಬೆಂಬಲ ಬಿಜೆಪಿಗೆ ಬೇಕಾಗಬಹುದು: ಸಿಟಿ ರವಿ
ಚೆನ್ನೈ, ಡಿ. 31: ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಬಳಿಕ ಅವರ ಬಾಹ್ಯ ಬೆಂಬಲ ಯಾರಿಗೆ ಸಿಗಬಹುದು ಎಂಬ ಕುತೂಹಲ ಮೂಡಿದೆ. ಈ ಕುತೂಹಲಕ್ಕೆ ಪುಷ್ಟಿ ನೀಡುವಂಥ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರು ಇಂದು ನೀಡಿದ್ದಾರೆ.
ಮಾಜಿ ಕ್ರಿಕೆಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದ ಸಿಟಿರವಿ, ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಹಿಂದೇಟು ಹಾಕಿದ್ದರ ಬಗ್ಗೆ ಮೊದಲಿಗೆ ಪ್ರಸ್ತಾಪಿಸಿದರು. ರಜನಿಕಾಂತ್ ಅವರು ದೊಡ್ಡ ನಾಯಕ, ಅವರ ನಿರ್ಣಯವನ್ನು ನಾವು ಗೌರವಿಸಬೇಕಿದೆ. ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ದೇಶ, ಭಾಷೆಯ ವಿಷಯದಲ್ಲಿ ಅವರ ನಿಲುವು ಎಂದಿಗೂ ಅಚಲ ತಮಿಳುನಾಡಿನ ಏಳಿಗೆಗಾಗಿ ಅವರು ಸದಾ ಸಿದ್ಧ ಎಂಬುದನ್ನು ಮರೆಯುವಂತಿಲ್ಲ ಎಂದರು.
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಎಂಟ್ರಿ ಇಲ್ಲ
ಬಿಜೆಪಿ ಹಾಗೂ ಆಡಳಿತಾರೂಢ ಎಐಎಡಿಎಂಕೆ ಮೈತ್ರಿ ಬಗ್ಗೆ ಯಾವುದೇ ಸಂಶಯಬೇಡ, ಪ್ರಧಾನಿ ಮೋದಿ ಅವರ ನೇತೃತ್ವದ ಎನ್ಡಿಎ ಮಿತಪಕ್ಷವಾಗಿ ಎಐಎಡಿಎಂಕೆ ಸದಾ ಗುರುತಿಸಿಕೊಂಡಿದೆ ಎಂದು ಸಿಟಿ ರವಿ ಹೇಳಿದರು.
ಪ್ರವೇಶಕ್ಕೂ ಮುನ್ನವೇ ನಿರ್ಗಮನ, ರಜನಿ ನಡೆಯಿಂದ ಯಾರಿಗೆ ಲಾಭ?
ಬಿಜೆಪಿಗೆ ರಜನಿಕಾಂತ್ ಬೆಂಬಲ ಅಗತ್ಯವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಮೋದಿ ಅವರ ನಾಯಕತ್ವದಲ್ಲಿ ರಜನಿಕಾಂತ್ ವಿಶ್ವಾಸ ಇರಿಸಿಕೊಂಡಿದ್ದಾರೆ. ಅಗತ್ಯ ಬಿದ್ದಾಗ ತಮಿಳುನಾಡು ಹಾಗೂ ದೇಶದ ಹಿತದೃಷ್ಟಿಯಿಂದ ಅಭಿವೃದ್ಧಿಗಾಗಿ ಅಗತ್ಯವಾಗಿ ಬೆಂಬಲ ಕೋರಲಾಗುವುದು ಎಂದರು.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್ ಮುರಗನ್
ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್ ಮುರಗನ್ ಅವರು ಕೂಡಾ ಪ್ರತಿಕ್ರಿಯೆ ನೀಡಿ, ಡಿಎಂಕೆಯಿಂದ ಉಚ್ಚಾಟನೆ ಮಾಡಲ್ಪಟ್ಟಿರುವ ಎಂಕೆ ಅಳಗಿರಿ (ದಿವಂಗತ ಮಾಜಿ ಸಿಎಂ ಎಂ ಕರುಣಾನಿಧಿ ಪುತ್ರ) ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅಧಿಕೃತವಾಗಿ ಇನ್ನೂ ಮಾತುಕತೆಯಾಗಿಲ್ಲ ಎಂದು ಹೇಳಿದರು. ಒಂದು ವೇಳೆ ಅಳಗಿರಿ ಬಿಜೆಪಿ ಸೇರಲು ಬಯಸಿದರೆ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದರು. ಜೊತೆಗೆ ಬಿಜೆಪಿ ತೊರೆದು ರಜನಿ ಬಳಗ ಸೇರಿದ್ದ ಅರ್ಜುನ್ ಮೂರ್ತಿ ಅವರು ಮತ್ತೆ ಪಕ್ಷಕ್ಕೆ ಮರಳಿದರೂ ಸ್ವಾಗತಿಸುವುದಾಗಿ ಹೇಳಿದರು.
ರಾಜಕೀಯ ಬದುಕು ಆರಂಭಕ್ಕೂ ಮುನ್ನವೇ ಹಿನ್ನಡೆ
70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ಈ ಹಿಂದೆ ಹೇಳಿದ್ದನ್ನು ಸ್ಮರಿಸಬಹುದು. ಚುನಾವಣೆಯಲ್ಲಿ ಸ್ಪರ್ಧೆಯಲ್ಲದೆ, ರಾಜಕೀಯದಿಂದಲೇ ಹಿಂದೆ ಸರಿದಿರುವುದು ಆಡಳಿತಾರೂಢ ಎಐಎಡಿಎಂಕೆಗೆ ಲಾಭವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಜನಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ತಮಿಳ್ ಅರುವಿ ಮಣಿಯನ್ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಹೊಸ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದೇ ನಂಬಲಾಗಿತ್ತು. ಆದರೆ, ಸಂಪೂರ್ಣವಾಗಿ ರಾಜಕೀಯದಿಂದ ಹಿಂದೆ ಉಳಿದಿರುದುವುದು ಹಲವರಿಗೆ ಹಿನ್ನಡೆಯಾಗಿದೆ.
ಎಐಎಡಿಎಂಕೆಗೆ ಭರ್ಜರಿ ಲಾಭ ಸಾಧ್ಯತೆ
ಎಐಎಡಿಎಂಕೆ ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರ ಹೆಸರನ್ನು ಘೋಷಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮುಂದುವರೆಸುವುದಾಗಿ ಅಮಿತ್ ಶಾ ಮುಂದೆ ಪ್ರಕಟಿಸಿದೆ. 1996ರಲ್ಲಿ ರಜನಿಕಾಂತ್ ಒಂದು ಡೈಲಾಗ್ ನಿಂದಾಗಿ ಜೆ ಜಯಲಲಿತಾ ಅವರು ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ದೇವರು ಕೂಡಾ ಈ ಬಾರಿ ಜೆ ಜಯಲಲಿತಾ ಅವರನ್ನು ಕಾಪಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಯಾವುದೇ ಪಕ್ಷಕ್ಕೂ ನೇರವಾಗಿ ಬೆಂಬಲ ವ್ಯಕ್ತಪಡಿಸಿರಲಿಲ್ಲ. ಈ ಬಾರಿ ನೇರವಾಗಿ ಕಮಲ್ ಹಾಗೂ ರಜನಿ ಎದುರು ಹಾಕಿಕೊಂಡು ಪಳನಿಸ್ವಾಮಿ ಚುನಾವಣೆ ಎದುರಿಸಬೇಕಾಗಿತ್ತು. ಎಐಎಡಿಎಂಕೆ ವಿರುದ್ಧ ಈಗಾಗಲೇ ಕಮಲ್ ತಿರುಗಿಬಿದ್ದಿದ್ದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ನಮ್ಮದು ಅಮ್ಮ ಎಂಬ ಮುಖವಾಣಿಯಲ್ಲಿ ಎಂಜಿ ರಾಮಚಂದ್ರನ್ ಹಾಗೂ ಪುರಚ್ಚಿ ತಲೈವಿ ಜಯಲಲಿತಾ ಬಗ್ಗೆ ಹೊಗಳಿಕೆಯ ಲೇಖನಗಳು ಬಂದಿದ್ದು, ಕಮಲ್ ಹಾಗೂ ರಜನಿಗೆ ತಿರುಗೇಟು ನೀಡಲಾಗಿದೆ.
ಡಿಎಂಕೆ ತಂತ್ರ ಇನ್ನೂ ಬಹಿರಂಗವಾಗಿಲ್ಲ
ಇನ್ನೊಂದೆಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡುವ ಕುರುಹು ತೋರಿದ ಡಿಎಂಕೆಯ ಸ್ಟಾಲಿನ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ. ಡಿಎಂಕೆ ಇನ್ನೂ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಹಂತದಲ್ಲಿದೆ. ಎಐಎಡಿಎಂಕೆ ಪ್ರಚಾರ ಜೋರಾಗಿ ಆರಂಭಿಸಿದೆ. ಎಐಎಡಿಎಂಕೆ ವಿರುದ್ಧ ರಜನಿ ತಿರುಗಿಬಿದ್ದಾಗ ಈ ಹಿಂದೆ ಡಿಎಂಕೆ ಲಾಭವಾಗಿತ್ತು ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದೇ ಭಾವಿಸಲಾಗಿದೆ. ಆದರೆ, ಜನವರಿ 3ರಂದು ಸ್ಟಾಲಿನ್ ಅವರು ಪಕ್ಷದ ಮುಂದಿನ ನಡೆ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ.