ಅಮೆರಿಕ ದೂತಾವಾಸ ಆಯೋಜನೆಯ ಚರ್ಚಾಸ್ಪರ್ಧೆ ಗೆದ್ದ ಬೆಂಗ್ಳೂರ್ ವಿದ್ಯಾರ್ಥಿನಿ
ಚೆನ್ನೈ, ಸೆ. 15: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ವಿದ್ಯಾರ್ಥಿನಿ ಉನ್ನತಿ ಆಶೀಶ್ ಘಿಯಾ ಅವರು ಅಮೆರಿಕ- ಭಾರತ ಸಂವಿಧಾನಾತ್ಮಕ ಕಾನೂನಿನ ತುಲನಾತ್ಮಕ ಚರ್ಚಾಸ್ಪರ್ಧೆಯ ವಿಜೇತರಾಗಿದ್ದಾರೆ.
ಚೆನ್ನೈನಲ್ಲಿ ಶನಿವಾರ ಸೆಪ್ಟಂಬರ್ 14 ರಂದು ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ 16 ಸ್ಪರ್ಧಿಗಳು ಭಾಗವಹಿಸಿದ್ದರು. ಚೆನ್ನೈನಲ್ಲಿನ ಅಮೆರಿಕ ದೂತಾವಾಸ ಕಚೇರಿಯು ಲೊಯೊಲಾ ಕಾಲೇಜಿನ ಸಹಕಾರದಲ್ಲಿ ಈ ಚರ್ಚಾಸ್ಪರ್ಧೆಯನ್ನು ಆಯೋಜಿಸಿತ್ತು ಕಾನ್ಸಲ್ ಜನರಲ್ ರಾಬಟ್ ಬರ್ಜಸ್ ಮತ್ತು ಸುಪ್ರೀಂ ಕೋರ್ಟ್ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಅವರು ಚೆನ್ನೈನ ತಾಜ್ ಕೋರಮಂಡಲ್ನಲ್ಲಿ ಬಹುಮಾನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಭಾರತ-ಅಮೆರಿಕ ಸಂವಿಧಾನದ ಬಗ್ಗೆ ಚರ್ಚಾ ಸ್ಪರ್ಧೆ, ಮ್ಯಾಕ್ ಬುಕ್ ಪ್ರೋ ಬಹುಮಾನ
"ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವಗಳನ್ನು ಹೊಂದಿರುವ ಅಮೆರಿಕ ಮತ್ತು ಭಾರತದ ನಡುವೆ ಗಾಢವಾದ ಸಂಬಂಧವಿದೆ. ದಕ್ಷಿಣ ಭಾರತದಲ್ಲಿ ವಿವಿಧ ಸಹಭಾಗಿಗಳ ಜತೆಗೂಡಿ ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಚಿಂತನೆಗೆ ಹಚ್ಚುವ "ಅಮೆರಿಕ- ಭಾರತ ಸಂವಿಧಾನಾತ್ಮಕ ಕಾನೂನಿನ ತುಲನಾತ್ಮಕ ಚರ್ಚಾಸ್ಪರ್ಧೆ"ಯನ್ನು ಆಯೋಜಿಸಿರುವುದು ಸಂತಸ ತಂದಿದೆ. ಈ ದಿನದ ಚರ್ಚೆಗಳು ನನಗೆ ಸ್ಫೂರ್ತಿ ನೀಡಿವೆ. ಭಾರತದ ಈ ಭಾವಿ ಪ್ರತಿನಿಧಿಗಳಿಂದ ನಾನು ಪ್ರಭಾವಿತನಾಗಿದ್ದೇನೆ," ಎಂದು ಯು.ಎಸ್. ಕಾನ್ಸಲ್ ಜನರಲ್ ರಾಬರ್ಟ್ ಬರ್ಜಸ್ ಅವರು ಹೇಳಿದರು.
ಮುಂಬೈ ಹೈಕೋರ್ಟ್ನ ಹಿರಿಯ ವಕೀಲ ಅಭಿನವ್ ಚಂದ್ರಚೂಡ್, ಹಾವರ್ಡ್ ಲಾ ಸ್ಕೂಲ್ನ ಪ್ರೊ. ಮಾರ್ಕ್ ತುಶ್ನೆಟ್, ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆ ಡಾ. ಮೇನಕಾ ಗುರುಸ್ವಾಮಿ; ಮದ್ರಾಸ್ ಹೈಕೋರ್ಟ್ನ ವಕೀಲೆ ಡಾ. ಮೇನಕಾ ಗುರುಸ್ವಾಮಿ, ಅಮೆರಿಕನ್ ಕಾನ್ಸುಲೆಟ್ನ ಕಾನ್ಸುಲ್ ಫಾರ್ ಪಬ್ಲಿಕ್ ಡಿಪ್ಲೊಮಸಿ ಅಂಡ್ ಪಬ್ಲಿಕ್ ಅಫೇರ್ಸ್ ಲಾರೆನ್ ಲವ್ಲೇಸ್ ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಮದ್ರಾಸ್ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಪ್ರಭಾ ಶ್ರೀದೇವನ್ ಬಹುಮಾನ ವಿಜೇತರ ಹೆಸರು ಪ್ರಕಟಿಸಿದರು. ಲೊಯೊಲಾ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಡಾ.ಎ. ಥಾಮಸ್ ಎಸ್ಜೆ, ವಂದಿಸಿದರು.
"ವಿದ್ಯಾರ್ಥಿಗಳಿಗೆ ಅಪಾರ ಅನುಭವ ನೀಡಿದ ಇಂತಹದ್ದೊಂದು ಚರ್ಚಾಸ್ಪರ್ಧೆಯನ್ನು ನಡೆಸಿದ ಅಮೆರಿಕನ್ ಕಾನ್ಸುಲೆಟ್ ನಿಜಕ್ಕೂ ಅಭಿನಂದನಾರ್ಹ. ನಾನು ವಿದ್ಯಾರ್ಥಿಯಾಗಿದ್ದಾಗ ಇಂತಹ ಅವಕಾಶಗಳು ನಮಗೂ ದೊರೆತಿದ್ದರೆ ಚೆನ್ನಿತ್ತು ಎಂದು ಅನಿಸುತ್ತಿದೆ," ಎಂದು ಡಾ. ಅಭಿನವ್ ಚಂದ್ರಚೂಡ್ ಹೇಳಿದರು.
ದಕ್ಷಿಣ ಭಾರತದಾದ್ಯಂತ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೊಚ್ಚಿ, ಬೆಂಗಳೂರು, ತಿರುಚಿನಾಪಳ್ಳಿ, ಮತ್ತು ಚೆನ್ನೈನಲ್ಲಿ ನಡೆದ ಪ್ರಾಥಮಿಕ ಚರ್ಚಾ ಸ್ಪರ್ಧೆಯಲ್ಲಿ ಸುಮಾರು 270 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತಿ ಪ್ರಾಂತ್ಯದ ಅತ್ಯುತ್ತಮ ನಾಲ್ಕು ಸ್ಪರ್ಧಿಗಳು ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಚೆನ್ನೈನಲ್ಲಿನ ಯು.ಎಸ್. ಕಾನ್ಸುಲೆಟ್ ಜನರಲ್ ಮತ್ತು ಲೊಯೊಲಾ ಕಾಲೇಜುಗಳು ಕೊಚ್ಚಿಯ ದ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್; ಬೆಂಗಳೂರಿನಲ್ಲಿ ದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ; ತಿರುಚಿನಾಪಳ್ಳಿಯಲ್ಲಿನ ದ ತಮಿಳು ನಾಡು ನ್ಯಾಷನಲ್ ಲಾ ಯೂನಿವರ್ಸಿಟಿ ಮತ್ತು ಚೆನ್ನೈನಲ್ಲಿನ ದ ತಮಿಳುನಾಡಿ ಡಾ. ಅಂಬೇಡ್ಕರ್ ಲಾಕಾಲೇಜುಗಳ ಸಹಭಾಗಿತ್ವದಲ್ಲಿ ಈ ಚರ್ಚಾಸ್ಪರ್ಧೆಯನ್ನು ಆಯೋಜಿಸಿದ್ದವು.