ಐಐಟಿ-ಮದ್ರಾಸ್ ವಿದ್ಯಾರ್ಥಿ ಮೇಲೆ ಹಲ್ಲೆ, ಒಂಬತ್ತು ಮಂದಿ ಮೇಲೆ ದೂರು
ಚೆನ್ನೈ, ಮೇ 31: ಐಐಟಿ-ಮದ್ರಾಸ್ ಕ್ಯಾಂಪಸ್ ನಲ್ಲಿ 'ಬೀಫ್ ಫೆಸ್ಟ್' ಆಯೋಜಿಸಿದ್ದ ಪಿಎಚ್.ಡಿ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಒಂಬತ್ತು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಇದೇ ವೇಳೆ ಹಲ್ಲೆಗೊಳಗಾದ ಸೂರಜ್ ವಿರುದ್ಧವೂ ಮನೀಶ್ ಕುಮಾರ್ ಎಂಬುವರು ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿ ಮೇಲಿನ ಹಲ್ಲೆಯನ್ನು ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದರು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಕೆ.ಪಳನಿಸ್ವಾಮಿ ಅವರನ್ನು ಮನವಿ ಮಾಡಿದ್ದರು. ಐಐಟಿ-ಮದ್ರಾಸ್ ಕ್ಯಾಂಪಸ್ ನಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದಕ್ಕಾಗಿ ಸೂರಜ್ ಮೇಲೆ ಹಲ್ಲೆಯಾಗಿ, ಗಂಭೀರವಾಗಿ ಗಾಯಗೊಂಡಿದ್ದಾರೆ.[ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ]
ಕೇಂದ್ರ ಸರಕಾರವು ಇತ್ತೀಚೆಗೆ ಪ್ರಾಣಿ ರಕ್ಷಣಾ ಕ್ರಮವಾಗಿ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಎಪ್ಪತ್ತರಿಂದ ಎಂಬತ್ತು ವಿದ್ಯಾರ್ಥಿಗಳು ಬೀಫ್ ಫೆಸ್ಟ್ ಆಯೋಜಿಸಿದ್ದರು. ಇದೇ ಅಧಿಸೂಚನೆ ವಿರುದ್ಧ ಕೇರಳ ಮುಖ್ಯಮಂತ್ರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ನಮ್ಮ ಆಹಾರ ಪದ್ಧತಿ ಬಗ್ಗೆ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.