ಬುಧವಾರ ಕಮಲ್ ಪಕ್ಷಕ್ಕೆ ಭರ್ಜರಿ ಚಾಲನೆ, ಕೇಜ್ರಿವಾಲ್ ವಿಶೇಷ ಅತಿಥಿ
ಚೆನ್ನೈ, ಫೆಬ್ರವರಿ 20: ಬಹುನಿರೀಕ್ಷಿತ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಪಕ್ಷಕ್ಕೆ ಬುಧವಾರ ಚಾಲನೆ ಸಿಗಲಿದೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತವರು ಜಿಲ್ಲೆ ರಾಮನಾಥಪುರಂನಲ್ಲಿ ಬೃಹತ್ ಸಮಾವೇಶವನ್ನು ಕಮಲ್ ಹಾಸನ್ ಹಮ್ಮಿಕೊಂಡಿದ್ದು ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ಜತೆಗೆ ಪಕ್ಷದ ಧ್ವಜವನ್ನೂ ಅವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಭಾಗವಹಿಸಲಿದ್ದಾರೆ ಎಂದು ಕಮಲ್ ಆಪ್ತ ಮೂಲಗಳು ಹೇಳಿವೆ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ಚೆನ್ನೈಗೆ ಬಂದಿದ್ದ ಕೇಜ್ರಿವಾಲ್ ಕಮಲ್ ಹಾಸನ್ ಜತೆ ವಿಸ್ತೃತ ಚರ್ಚೆ ನಡೆಸಿದ್ದನ್ನೂ ಇದೇ ಸಂದರ್ಭದಲ್ಲಿ ಸ್ಮರಿಸಬಹುದು.
ಈಗಾಗಲೇ ಕಮಲ್ ಹಾಸನ್ ಮಧುರೈ ತಲುಪಿದ್ದು ನಾಳೆಯ ಪಕ್ಷದ ಉದ್ಘಾಟನೆ ಕಾರ್ಯಕ್ರಮಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ದೇವಾಲಯದ ನಾಡಿನಲ್ಲಿ ಬುಧವಾರ ಸಂಜೆ ಕಮಲ್ ಹಾಸನ್ ಪಕ್ಷದ ಉದ್ಘಾಟನೆ ನಡೆಯಲಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹಾಗೂ ಜನರ ಪರವಾಗಿ ಕೆಲಸ ಮಾಡಲು ತಾವು ರಾಜಕೀಯಕ್ಕೆ ಬರುತ್ತಿರುವುದಾಗಿ ಈಗಾಗಲೇ ಕಮಲ್ ಹಾಸನ್ ಘೋಷಿಸಿದ್ದಾರೆ.
ಕಮಲ್ ಹಾಸನ್ ಮತ್ತು ಎಎಪಿ ನಡುವೆ ಹೊಂದಾಣಿಕೆ ನಡೆದಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಹಲವು ವರ್ಷಗಳ ಸತತ ಪ್ರಯತ್ನದ ನಂತರವೂ ತಮಿಳುನಾಡಿನಲ್ಲಿ ಎಎಪಿ ತನ್ನ ಘಟಕ ತೆರೆದಿಲ್ಲ ಎಂಬುದು ಇದಕ್ಕೆ ಪುಷ್ಠಿ ನೀಡುತ್ತದೆ.
ತಮ್ಮ ರಾಜಕೀಯ ಪಕ್ಷ ಸ್ಥಾಪನೆಗೆ ಪೂರ್ವಭಾವಿಯಾಗಿ ಕಮಲ್ ಹಾಸನ್ ಈಗಾಗಲೇ ಹಿರಿಯ ರಾಜಕಾರಣಿಗಳು, ಹತೈಷಿಗಳನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ. ಡಿಎಂಕೆ ನಾಯಕ ಕರುಣಾನಿಧಿ, ಡಿಎಂಡಿಕೆ ನಾಯಕ ಕ್ಯಾಪ್ಟನ್ ವಿಜಯಕಾಂತ್ ರನ್ನು ಕಮಲ್ ಭೇಟಿಯಾಗಿ ಚರ್ಚಿಸಿದ್ದಾರೆ.
ಆದರೆ ಎಐಎಡಿಎಂಕೆಯ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್ "ಆಡಳಿತದಲ್ಲಿರುವ ಎಐಎಡಿಎಂಕೆ ಪಕ್ಷ ಸರಿಯಾಗಿಲ್ಲ. ಇದೇ ಕಾರಣಕ್ಕೆ ನಾನು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ಈ ಕಾರಣಕ್ಕೆ ನಾನು ಅವರನ್ನು ಯಾರನ್ನೂ ಭೇಟಿಯಾಗಿಲ್ಲ," ಎಂದು ಹೇಳಿದ್ದಾರೆ.