ಏ.5ಕ್ಕೆ ತ.ನಾಡು ಬಂದ್, ತಮಿಳುನಾಡಿಗೆ ಕೆಎಸ್ಸಾರ್ಟೀಸಿ ಬಸ್ ಇಲ್ಲ
ಚೆನ್ನೈ, ಏಪ್ರಿಲ್ 4: ತಮಿಳುನಾಡಿನ ಡಿಎಂಕೆ ಹಾಗೂ ಇತರ ವಿರೋಧ ಪಕ್ಷಗಳು ಏಪ್ರಿಲ್ ಐದರಂದು ತಮಿಳುನಾಡು ಬಂದ್ ಗೆ ಕರೆ ನೀಡಿವೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ, ಬಂದ್ ಆಚರಿಸಲು ಮುಂದಾಗಿದ್ದಾರೆ. ಈ ಬಂದ್ ಕಾರಣಕ್ಕೆ ತಮಿಳುನಾಡು ರಾಜ್ಯದ ಜನ ಜೀವನ ಅಸ್ತವ್ಯಸ್ತ ಆಗುವ ಸಾಧ್ಯತೆಗಳಿವೆ.
ರೈತರು, ವಿದ್ಯಾರ್ಥಿಗಳು, ವಕೀಲರು, ವ್ಯಾಪಾರಿಗಳು, ಕಾರ್ಮಿಕ ಒಕ್ಕೂಟಗಳು, ಸಿನಿಮಾ ಒಕ್ಕೂಟ, ಹಾಲು ವಿತರಕರು ಮತ್ತಿತರ ವಲಯದವರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಬಂದ್ ಆಚರಿಸಲಾಗುತ್ತದೆ. ಸರಕಾರಿ ಬಸ್ ಗಳು ರಸ್ತೆಗೆ ಇಳಿಯುವುದಿಲ್ಲ. ಏಕೆಂದರೆ, ಕಾರ್ಮಿಕರ ಒಕ್ಕೂಟಗಳು ಬಂದ್ ಗೆ ಬೆಂಬಲ ಸೂಚಿಸಿವೆ.
ಕಾವೇರಿಗಾಗಿ ತಮಿಳುನಾಡು ಸಿಎಂ, ಡಿಸಿಎಂ ಉಪವಾಸ ಸತ್ಯಾಗ್ರಹ!
ವಿವಿಧೆಡೆ ರೈಲು ತಡೆಯಲು ರೈತರು ತೀರ್ಮಾನಿಸಿದ್ದಾರೆ. ಇನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ತಕ್ಷಣವೇ ಕೇಂದ್ರ ಸರಕಾರ ರಚಿಸಬೇಕು ಎಂದು ತಮಿಳುನಾಡಿನ ವಿರೋಧ ಪಕ್ಷಗಳು ಒತ್ತಾಯಿಸಿವೆ.
ಕೆಎಸ್ ಆರ್ ಟಿಸಿ ಬಸ್ ಸಂಚಾರ ಇಲ್ಲ
ಬೆಂಗಳೂರು: ಏಪ್ರಿಲ್ ಐದರಂದು ತಮಿಳುನಾಡು ರಾಜ್ಯ ಬಂದ್ ಗೆ ಕರೆ ನೀಡಿರುವುದರಿಂದ ಕರ್ನಾಟಕದಿಂದ ನಿತ್ಯ ಸಂಚರಿಸುವ ಇನ್ನೂರೈವತ್ತು ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೆ ತಮಿಳುನಾಡಿನ ಯಾವುದೇ ಭಾಗಕ್ಕೂ ಕೆಎಸ್ ಆರ್ ಟಿಸಿ ಬಸ್ ಸಂಚಾರ ಇರುವುದಿಲ್ಲ. ಆದರೆ ರಾತ್ರಿ ಮಾಮೂಲಿನಂತೆ ಸಂಚಾರ ಇರಲಿದೆ.
ಕಾವೇರಿ ವಿವಾದ: ಕೇಂದ್ರ ವಿರುದ್ಧ ತ.ನಾಡು ಅರ್ಜಿ 'ಸುಪ್ರೀಂ' ಸ್ವೀಕಾರ
6 ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 16ನೇ ತಾರೀಕು ಆದೇಶ ನೀಡಿತ್ತು. ಈ ಅವಧಿ ಮಾರ್ಚ್ 29ಕ್ಕೆ ಕೊನೆ ಆಗಿದ್ದು, ಆದೇಶಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರಕಾರ ಮಾರ್ಚ್ 31ನೇ ತಾರೀಕು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.